ರೌಡಿ ಶೀಟರ್‌ಗಳನ್ನು ಪೊಲೀಸ್ ಠಾಣೆಗೆ ಕರೆಸಲು ನಿಯಮ ರೂಪಿಸಿ; ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು: ಮೌಖಿಕ ಆದೇಶ ಅಥವಾ ಸೂಚನೆಗಳನ್ನು ನೀಡಿ ರೌಡಿ ಶೀಟರ್‌ಗಳನ್ನು ಪೊಲೀಸ್‌ ಠಾಣೆಗೆ ಕರೆಸುವ ಪ್ರಕ್ರಿಯೆಗೆ ಬ್ರೇಕ್ ಹಾಕಿರುವ ಹೈಕೋರ್ಟ್‌, ಈ ವಿಚಾರವಾಗಿ ಸರ್ಕಾರ ಸೂಕ್ತ ನಿಯಮಗಳನ್ನು ರೂಪಿಸಬೇಕು. ಅಲ್ಲಿಯವರೆಗೆ ಎಸ್‌ಎಂಎಸ್‌, ವಾಟ್ಸ್‌ಆ್ಯಪ್ ಸಂದೇಶದ ಮೂಲಕ ರೌಡಿ ಶೀಟರ್‌ಗಳನ್ನು ಪೊಲೀಸ್‌ ಠಾಣೆಗೆ ಕರೆಸಬಹುದು ಎಂದು ಆದೇಶಿಸಿದೆ.

ರೌಡಿ ಶೀಟರ್‌ ಸುನೀಲ್‌ ಕುಮಾರ್‌ ಅಲಿಯಾಸ್‌ ಸೈಲೆಂಟ್‌ ಸುನೀಲ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿರುವ ನ್ಯಾಯಮೂರ್ತಿ ಆರ್‌. ನಟರಾಜ್‌ ಅವರಿದ್ದ ಏಕಸದಸ್ಯ‌ ನ್ಯಾಯಪೀಠ ಈ ಆದೇಶ ಮಾಡಿದೆ.

ರೌಡಿ ಶೀಟರ್‌ಗಳನ್ನು ಠಾಣೆಗೆ ಕರೆಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸೂಕ್ತ ನಿಯಮಗಳನ್ನು ರೂಪಿಸಬೇಕು. ಅಲ್ಲಿಯವರೆಗೆ ಪೊಲೀಸರು ರೌಡಿ ಶೀಟರ್‌ಗಳನ್ನು ಮೌಖಿಕವಾಗಿ ಕರೆಯುವ ಬದಲು ಎಸ್‌ಎಂಎಸ್‌, ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿ ಯಾವಾಗ ಠಾಣೆಗೆ ಹಾಜರಾಗಬೇಕೆಂದು ಸೂಚನೆ ನೀಡಬೇಕು. ಅದಕ್ಕಾಗಿ ರೌಡಿ ಶೀಟರ್‌ಗಳು ಪೊಲೀಸರಿಗೆ ತಮ್ಮ ಮೊಬೈಲ್‌ ಸಂಖ್ಯೆ ನೀಡಬೇಕು. ಸಂದೇಶ ಕಳುಹಿಸಿದ ನಂತರವೂ ಠಾಣೆಗೆ ಹಾಜರಾಗದಿದ್ದರೆ ಪೊಲೀಸರು ರೌಡಿ ಶೀಟರ್‌ ಮನೆಗೆ ತೆರಳಬಹುದು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಅರ್ಜಿದಾರರು ಯಾವುದೇ ಅಪರಾಧದಲ್ಲಿ ಭಾಗಿಯಾಗಿಲ್ಲದಿದ್ದರೆ ಹಾಗೂ ಅಪರಾಧದಲ್ಲಿ ಭಾಗಿಯಾಗಿದ್ದಾರೆಂದು ಶಂಕಿಸದಿದ್ದರೆ, ಆತನ ಹೆಸರು ರೌಡಿ ಪಟ್ಟಿಯಲ್ಲಿದೆ ಎಂಬ ಕಾರಣಕ್ಕಾಗಿ ಪೊಲೀಸರು ಅವರನ್ನು ಆಗ್ಗಾಗ್ಗೆ ಮೌಖಿಕ ಸೂಚನೆ ನೀಡಿ ಕರೆಸಬಾರದು ಎಂದು ಹೇಳಿರುವ ನ್ಯಾಯಾಲಯ, ಒಂದೊಮ್ಮೆ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದರೆ ಈ ಆದೇಶದ ರಕ್ಷಣೆ ಸಿಗುವುದಿಲ್ಲ. ದಂಡಾಧಿಕಾರಿಯ ಅಧಿಕಾರವನ್ನು ಈ ಆದೇಶ ಕುಂಠಿತಗೊಳಿಸುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.

ವೈಯಕ್ತಿಯ ಸ್ವಾತಂತ್ರ್ಯದ ಉಲ್ಲಂಘನೆ:
ಕಾನೂನಿನಲ್ಲಿ ರೌಡಿ ಶೀಟರ್‌ಗೆ ಸಮನ್ಸ್‌ ನೀಡಲು ಯಾವುದೇ ಕಾರ್ಯವಿಧಾನವಿಲ್ಲದಿದ್ದಾಗ, ಪರಿಣಾಮಗಳು ಏನೇ ಇರಲಿ, ಸರ್ಕಾರವು ಅವರನ್ನು ಮೌಖಿಕವಾಗಿ ಸಮನ್ಸ್‌ ನೀಡಿ ಪೊಲೀಸ್‌ ಠಾಣೆಯಲ್ಲಿ ದೀರ್ಘಕಾಲ ಬಂಧನದಲ್ಲಿಡುವುದನ್ನು ಸಮರ್ಥಿಸಲು ಸಾಧ್ಯವಿಲ್ಲ. ಏಕೆಂದರೆ, ಅದು ಅವರ ವೈಯಕ್ತಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ. ಆದ್ದರಿಂದ, ಸರ್ಕಾರವು ರೌಡಿ ಶೀಟರ್‌ನ ಉಪಸ್ಥಿತಿ ಖಚಿತಪಡಿಸಿಕೊಳ್ಳಲು ಕಾರ್ಯವಿಧಾನ ಸೂಚಿಸುವ ಯಾವುದೇ ಕಾನೂನು ಜಾರಿಗೆ ತರುವವರೆಗೆ, ಅರ್ಜಿದಾರರು ತಮ್ಮ ವಿರುದ್ಧ ರೌಡಿ ಶೀಟ್‌ಗಳನ್ನು ದಾಖಲಿಸಿರುವ ಪೊಲೀಸ್‌ ಠಾಣೆಗಳಿಗೆ ಮೊಬೈಲ್‌ ಸಂಖ್ಯೆಯನ್ನು ಒದಗಿಸಬೇಕು. ಪೊಲೀಸರು ಅರ್ಜಿದಾರರ ಚಟುವಟಿಕೆ ಬಗ್ಗೆ ಮಾಹಿತಿ ಪಡೆಯಲು ಪೊಲೀಸ್‌ ಠಾಣೆಗೆ ಹಾಜರಾಗುವಂತೆ ಎಸ್‌ಎಂಎಸ್‌ ಅಥವಾ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸುವ ಮೂಲಕ ಅವರಿಗೆ ತಿಳಿಸಬಹುದು. ಆಗಲೂ ಅವರು ಪೊಲೀಸರ ಮುಂದೆ ಹಾಜರಾಗಲು ವಿಫಲವಾದರೆ, ವಿಚಾರಣೆ ಅಥವಾ ಕಣ್ಗಾವಲುಗಾಗಿ ಪೊಲೀಸರು ಅವರ ಮನೆಗೆ ಭೇಟಿ ನೀಡಬಹುದು ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.

ಸೈಲೆಂಟ್ ಸುನೀಲ್ ಆಕ್ಷೇಪವೇನು?
ಅಲೋಕ್‌ ಕುಮಾರ್‌ ಹೆಚ್ಚುವರಿ ಆಯುಕ್ತರಾಗಿದ್ದಾಗ ಸೈಲೆಂಟ್‌ ಸುನೀಲ್‌ನನ್ನು ಕರೆಸಿ ಎಚ್ಚರಿಕೆ ನೀಡಿದ್ದರು. ಆ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದ್ದವು. ಇದರಿಂದ, ಹೈಕೋರ್ಟ್ ಮೆಟ್ಟಿಲೇರಿದ್ದ ಸುನೀಲ್, ವಿವಿಧ ಪೊಲೀಸ್‌ ಠಾಣೆಗಳಲ್ಲಿ ನನ್ನ ವಿರುದ್ಧ ದಾಖಲಾಗಿದ್ದ ಎಲ್ಲ 24 ಪ್ರಕರಣಗಳೂ ಖುಲಾಸೆಯಲ್ಲಿ ಕೊನೆಗೊಂಡಿದ್ದು, ಆ ಪ್ರಕರಣಗಳನ್ನು ನ್ಯಾಯಾಲಯಗಳು ರದ್ದುಗೊಳಿಸಿವೆ. ರೌಡಿ ಶೀಟ್‌ ಹೊರತುಪಡಿಸಿ, ನನ್ನ ವಿರುದ್ಧ ಯಾವುದೇ ಪ್ರಕರಣಗಳು ಬಾಕಿ ಉಳಿದಿಲ್ಲ. ಆದರೂ, ನನ್ನ ಮೇಲೆ ನಿಗಾ ಇಡುವ ನೆಪದಲ್ಲಿ, ಯಾವುದೇ ಕಾರಣವಿಲ್ಲದೆ ಬಂಧಿಸುವುದರ ಜತೆಗೆ ಮೌಖಿಕವಾಗಿ ಸಮನ್ಸ್‌ ಮಾಡಿ ನಿಂದಿಸುತ್ತಿದ್ದಾರೆ. ಕರ್ನಾಟಕ ಪೊಲೀಸ್‌ ಕೈಪಿಡಿಯಲ್ಲಿ ಅಥವಾ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ರೌಡಿ ಪಟ್ಟಿಯಲ್ಲಿ ಹೆಸರು ಇರುವ ವ್ಯಕ್ತಿಗೆ ಸಮನ್ಸ್‌ ನೀಡುವ ವಿಧಾನವನ್ನು ಸೂಚಿಸುವ ಯಾವುದೇ ಕಾರ್ಯವಿಧಾನವಿಲ್ಲ. ಆದರೂ, ಪ್ರತಿವಾದಿಗಳು ನನ್ನ ಮೌಖಿಕ ಆದೇಶ/ಸೂಚನೆ ಮೂಲಕ ಠಾಣೆಗೆ ಕರೆಸುತ್ತಿದ್ದಾರೆ. ಆದ್ದರಿಂದ, ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಈ‌ ನಿಟ್ಟಿನಲ್ಲಿ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಿದ್ದರು.

Related Articles

Comments (0)

Leave a Comment