ಧರ್ಮಸ್ಥಳ ಪ್ರಕರಣ; ಚಿನ್ನಯ್ಯ ನೀಡಿದ ಮಾಹಿತಿ ಹೊರತಾಗಿ ಬೇರೆ ಮಾಹಿತಿ ಏನಿದೆ? ಪುರಂದರ ಗೌಡ ವಕೀಲರಿಂದ ದಾಖಲೆ ಕೇಳಿದ ಹೈಕೋರ್ಟ್
- by Jagan Ramesh
- September 18, 2025
- 7 Views

ಬೆಂಗಳೂರು: ಧರ್ಮಸ್ಥಳ ಸಾಮೂಹಿಕ ಅಂತ್ಯಸಂಸ್ಕಾರ ಪ್ರಕರಣದ ಮೂಲ ದೂರುದಾರ ಸಿ.ಎನ್. ಚಿನ್ನಯ್ಯನೇ ಈಗ ಆರೋಪಿ ಸ್ಥಾನದಲ್ಲಿರುವುದರಿಂದ ಆತ ನೀಡಿರುವ ಮಾಹಿತಿಯ ಹೊರತಾದ ಹೆಚ್ಚಿನ ಮಾಹಿತಿಯನ್ನು ದಾಖಲೆಯ ರೂಪದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಧರ್ಮಸ್ಥಳದ ಪುರಂದರ ಗೌಡ ಹಾಗೂ ತುಕಾರಾಂ ಗೌಡ ಅವರಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಧರ್ಮಸ್ಥಳ ಗ್ರಾಮದಲ್ಲಿ ತಾವು ತೋರಿಸುವ ಜಾಗಗಳಲ್ಲಿ ಸ್ಥಳ ಪರಿಶೀಲನೆ ಹಾಗೂ ಶವಗಳ ಉತ್ಖನನ ನಡೆಸಲು ಕಾಲಮಿತಿಯೊಳಗೆ ಕ್ರಮ ಕೈಗೊಳ್ಳುವಂತೆ ಸಲ್ಲಿಸಿರುವ ಮನವಿಯನ್ನು ಪರಿಗಣಿಸಲು ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ನಿರ್ದೇಶಿಸುವಂತೆ ಕೋರಿ ಪುರಂದರ ಗೌಡ ಹಾಗೂ ತುಕಾರಾಂ ಗೌಡ ಸಲ್ಲಿಸಿರುವ ರಿಟ್ ಅರ್ಜಿ ಕುರಿತು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿ, ವಿಚಾರಣೆಯನ್ನು ಸೆಪ್ಟೆಂಬರ್ 25ಕ್ಕೆ ಮುಂದೂಡಿತು.
ಅರ್ಜಿ ಸಂಬಂಧ ಆದೇಶ ಬರೆಸುವಾಗ, ಆರೋಪಿ ಚಿನ್ನಯ್ಯನ ಹೇಳಿಕೆ ದಾಖಲಿಸಿಕೊಳ್ಳಲು ವಿಳಂಬಿಸುತ್ತಿರುವ ಮ್ಯಾಜಿಸ್ಟ್ರೇಟ್ ನಡೆಗೆ ಅಚ್ಚರಿ ವ್ಯಕ್ತಪಡಿಸಿದ ನ್ಯಾಯಪೀಠ, ಅದನ್ನೂ ಆದೇಶದಲ್ಲಿ ದಾಖಲಿಸಿದೆ.
ಪ್ರಕರಣದ ಬೆಳವಣಿಗೆ ಬಗ್ಗೆ ವಿವರಿಸಿದ ಸರ್ಕಾರ:
ಇದಕ್ಕೂ ಮುನ್ನ ಅರ್ಜಿದಾರರ ಪರವಾಗಿ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾದ ಹಿರಿಯ ವಕೀಲ ದೀಪಕ್ ಖೋಸ್ಲಾ ವಾದ ಮಂಡಿಸಿ, ನಾವು ಗುರುತಿಸಿರುವ ಸ್ಥಳಗಳಲ್ಲಿ ಎಸ್ಐಟಿ ಪರಿಶೀಲನೆ ನಡೆಸಿದರೆ ಡಜನ್ಗಟ್ಟಲೇ ಅಸ್ಥಿಗಳು ದೊರೆಯಲಿವೆ ಎಂದರು. ಆಗ ನ್ಯಾಯಪೀಠ, ಕಳೆದ ವಿಚಾರಣೆಯಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಿಗೆ ಮಾಹಿತಿ ಪಡೆದು ತಿಳಿಸಲು ನಿರ್ದೇಶಿಸಲಾಗಿತ್ತು. ಅವರು ಏನು ಹೇಳುತ್ತಾರೆ ಎಂದು ನೋಡೋಣ ಎಂದು ಹೇಳಿತು.
ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ ಅವರು, ಪ್ರಕರಣದ ಮೂಲ ದೂರುದಾರ ಚಿನ್ನಯ್ಯ ನೀಡಿದ್ದ ಹೇಳಿಕೆಗಳನ್ನು ಆಧರಿಸಿ, ಹಾಲಿ ಅರ್ಜಿದಾರರು ಎಸ್ಐಟಿಗೆ ಎರಡು ಮನವಿಗಳನ್ನು ನೀಡಿದ್ದು, ಆ ಮನವಿಗಳಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದಾಗಿ ಚಿನ್ನಯ್ಯ ಹೇಳಿದ್ದ. ಧರ್ಮಸ್ಥಳದ ಆಡಳಿತ ಸೂಚನೆಯ ಮೇರೆಗೆ ಮೃತದೇಹಗಳನ್ನು ಹೂಳಲಾಗಿದ್ದು, ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಮಹಿಳೆಯರು ಮತ್ತು ಶಾಲಾ ಮಕ್ಕಳ ದೇಹಗಳನ್ನು ದಫನ್ ಮಾಡಿದ್ದಾಗಿ ಆತ ತಿಳಿಸಿದ್ದ. ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 183ರ ಅಡಿ ಚಿನ್ನಯ್ಯನ ಹೇಳಿಕೆ ದಾಖಲಿಸಿಕೊಳ್ಳಲಾಗಿತ್ತು ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಚಿನ್ನಯ್ಯನ ಹೇಳಿಕೆ ಆಧರಿಸಿ, ಆತನೇ ಗುರುತಿಸಿದ್ದ 13 ಸ್ಥಳಗಳಲ್ಲಿ ಶೋಧ ನಡೆಸಲಾಗಿತ್ತು. ಅಗತ್ಯ ಅನುಮತಿ ಪಡೆದು ಕಾರ್ಯಕಾರಿ ಮ್ಯಾಜಿಸ್ಟ್ರೇಟ್ ಉಪಸ್ಥಿತಿಯಲ್ಲಿ ಶವಗಳ ಉತ್ಖನನ ನಡೆಸಲಾಗಿತ್ತು. 13ರಲ್ಲಿ ಒಂದು ಸ್ಥಳದಲ್ಲಿ ಶವವೊಂದರ ಪಳೆಯುಳಿಕೆ ಪತ್ತೆಯಾಗಿತ್ತು. ಅದು ಪುರುಷನ ದೇಹ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಿಂದ ತಿಳಿದುಬಂದಿತ್ತು. ಮತ್ತೊಂದೆಡೆ ಪತ್ತೆಯಾಗಿದ್ದ ಎರಡನೇ ಶವವೂ ಮಹಿಳೆಯದ್ದಾಗಿರಲಿಲ್ಲ. ದೂರು ನೀಡುವ ಸಂದರ್ಭದಲ್ಲಿ ಚಿನ್ನಯ್ಯ ಒಪ್ಪಿಸಿದ್ದ ತಲೆಬರುಡೆಯು ಮಹಿಳೆಯದ್ದು ಎಂದು ಆತ ದೂರು ಹಾಗೂ ಹೇಳಿಕೆಯಲ್ಲಿ ತಿಳಿಸಿದ್ದ. ಆದರೆ, ಆತ ನೀಡಿದ್ದ ತಲೆಬುರುಡೆಯು ಮಹಿಳೆಯದ್ದಲ್ಲ, ಸುಮಾರು 30 ವರ್ಷದ ಪುರುಷನದ್ದು ಎಂದು ಎಫ್ಎಸ್ಎಲ್ ವರದಿ ಹೇಳಿದೆ. ಇದುವರೆಗೆ ನಡೆದಿರುವ ತನಿಖೆಯ ಪ್ರಕಾರ ಚಿನ್ನಯ್ಯ ನ್ಯಾಯಾಲಯದಲ್ಲಿ ಸೂಕ್ತ ಮಾಹಿತಿ ನೀಡಿಲ್ಲ. ಇದರಿಂದ, ಎಸ್ಐಟಿಗೆ ಚಿನ್ನಯ್ಯ ಸುಳ್ಳು ಹೇಳುತ್ತಿದ್ದಾನೆ ಎಂದು ಅರ್ಥವಾಗಿತ್ತು ಎಂದರು.
ದೂರುದಾರನೇ ಈಗ ಆರೋಪಿ:
ಈಗ ಪಿತೂರಿ ಭಾಗವನ್ನು ಪತ್ತೆ ಮಾಡಬೇಕಿದೆ. ಯಾವ ಕಾರಣಕ್ಕಾಗಿ ಪಿತೂರಿ ಎಂಬುದನ್ನು ಅರಿಯಬೇಕಿದೆ. ಚಿನ್ನಯ್ಯ ಶವಗಳನ್ನು ಹೂತಿದ್ದ ರಹಸ್ಯ ಸ್ಥಳಗಳ ಬಗ್ಗೆ ತಿಳಿಸಿದ್ದನು. ಹಾಲಿ ಅರ್ಜಿದಾರರ ಮನವಿಯು ಚಿನ್ನಯ್ಯನ ಜತೆಗಿನ ಸಂಭಾಷಣೆಯ ಭಾಗವಾಗಿದೆ. 2014ರಲ್ಲಿ ಜೀವಭಯದಿಂದ ಧರ್ಮಸ್ಥಳ ತೊರೆದಿದ್ದಾಗಿ ಚಿನ್ನಯ್ಯ ಹೇಳಿದ್ದ. ಆದರೆ, ದಾಖಲೆಗಳನ್ನು ಪರಿಶೀಲಿಸಿದಾಗ ಆತ ಎರಡು ವರ್ಷಗಳ ಹಿಂದೆ ಧರ್ಮಸ್ಥಳಕ್ಕೆ ಬಂದಿದ್ದಾನೆ. ತಲೆಬುರುಡೆಯನ್ನು ಇನ್ನಿತರ ಇಬ್ಬರು ತನಗೆ ನೀಡಿದ್ದಾರೆ ಎಂದು ಚಿನ್ನಯ್ಯ ಹೇಳಿದ್ದಾನೆ. ಅವರ ಸೂಚನೆಯ ಮೇರೆಗೆ ಈ ಹೇಳಿಕೆ ನೀಡಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಈ ಹಂತದಲ್ಲಿ ನ್ಯಾಯಪೀಠ, ಅರ್ಜಿದಾರರ ಮನವಿ ಏನು ಎಂದು ಕೇಳಿತು. ಇದಕ್ಕೆ ಜಗದೀಶ್ ಪ್ರತಿಕ್ರಿಯಿಸಿ, ನಾವು ಶವ ಹೂತಿರುವ ಸ್ಥಳಗಳನ್ನು ತೋರಿಸುತ್ತೇವೆ ಎಂದು ಎಸ್ಐಟಿಗೆ ಅರ್ಜಿದಾರರು ಮನವಿ ನೀಡಿದ್ದಾರೆ. ಮ್ಯಾಜಿಸ್ಟ್ರೇಟ್ ಮುಂದೆ ಚಿನ್ನಯ್ಯನು ತಾನು ಪೊಲೀಸರಿಗೆ ಒಪ್ಪಿಸಿರುವ ತಲೆಬರುಡೆಯನ್ನು ತಾನು ಪತ್ತೆ ಮಾಡಿಲ್ಲ. ಬೇರೆ ಯಾರೋ ತನಗೆ ಕೊಟ್ಟರು. ನ್ಯಾಯಾಲಯದ ಮುಂದೆ ತಾನು ನೀಡಿರುವ ಹೇಳಿಕೆ ಸುಳ್ಳು ಎಂದು ಹೇಳಿದ್ದಾನೆ. ಬೇರೆಯವ ಸೂಚನೆಯಂತೆ ಹೇಳಿಕೆ ನೀಡಿದ್ದೇನೆ. ಆದರೆ, ಧರ್ಮಸ್ಥಳದಲ್ಲಿ ತಾನು ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡಿದ್ದೇನೆ. ತಾನು ಹೂತಿರುವ ಶವಗಳನ್ನು ಪೊಲೀಸರು, ವೈದ್ಯರು ಪರಿಶೀಲಿಸಿದ್ದರು ಎಂದು ಹೇಳಿದ್ದಾನೆ. ಹೀಗಾಗಿ, ಆ ತನಿಖೆಯನ್ನು ಮುಕ್ತಾಯಗೊಳಿಸಲಾಗಿದೆ ಎಂದರು.
ಇದಾದ ಬಳಿಕ 2025 ಆಗಸ್ಟ್ 23ರಂದು ಚಿನ್ನಯ್ಯನನ್ನು ಬಂಧಿಸಲಾಗಿದ್ದು, ಆತ ನೀಡಿದ ಮಾಹಿತಿ ಆಧರಿಸಿ ಹಲವು ಸ್ಥಳಗಳಲ್ಲಿ ಶೋಧ ಮತ್ತು ಪರಿಶೀಲನೆ ನಡೆಸಲಾಗಿದೆ. ತಲೆಬುರುಡೆ ವರ್ಗಾಯಿಸಿದ ಸ್ಥಳ, ಆತ ತಂಗಿದ್ದ ಸ್ಥಳ ಮಹಜರು ನಡೆಸಲಾಗಿದೆ. ಈ ತನಿಖೆ ಪೂರ್ಣಗೊಂಡ ಬಳಿಕ ಆತ ತನ್ನ ಹೇಳಿಕೆಯನ್ನು ಹೊಸದಾಗಿ ದಾಖಲಿಸಿಕೊಳ್ಳುವಂತೆ ವಿಚಾರಣಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾನೆ. ಇಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಚಿನ್ನಯ್ಯನ ಹೇಳಿಕೆ ದಾಖಲಿಸಲು ಸಮಯ ನಿಗದಿಪಡಿಸಲಾಗಿತ್ತು. ದುರದೃಷ್ಟಕರವೆಂದರೆ ಮ್ಯಾಜಿಸ್ಟ್ರೇಟ್ ಹೇಳಿಕೆ ದಾಖಲಿಸಿಕೊಂಡಿಲ್ಲ. 15 ದಿನವಾದರೂ ಅವರು ಹೇಳಿಕೆ ದಾಖಲಿಸಿಲ್ಲ ಎಂದರು.
ಬೇರೆ ಮಾಹಿತಿ ಏನಿದೆ? ದಾಖಲೆ ಕೇಳಿದ ಕೋರ್ಟ್:
ಆಗ ನ್ಯಾಯಮೂರ್ತಿಗಳು ಖೋಸ್ಲಾ ಅವರನ್ನು ಕುರಿತು, ಮೂಲ ದೂರುದಾರ ಚಿನ್ನಯ್ಯನ ಬಳಿ ಇದ್ದ ಮಾಹಿತಿ ಹೊರತುಪಡಿಸಿ ಅರ್ಜಿದಾರರ ಬಳಿ ಸ್ವತಂತ್ರ ಮಾಹಿತಿ ಏನಿದೆ ಎಂದು ಪ್ರಶ್ನಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಖೋಸ್ಲಾ, ಚಿನ್ನಯ್ಯನ ಜತೆ ಸಂವಾದ ನಡೆಸಿ ಅರ್ಜಿದಾರರು ಆತನ ಜತೆ ಶವ ಹೂತಿರುವ ಸ್ಥಳಗಳಿಗೆ ಹೋಗಿದ್ದರು. ವೈಯಕ್ತಿಕವಾಗಿ ಶವಗಳನ್ನು ಕಂಡಿದ್ದಾರೆ. ಸದ್ಯ ಚಿನ್ನಯ್ಯನ ವಿರುದ್ಧವೇ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಲಾಗಿದೆ. ಮೂಲ ದೂರಿನಿಂದ ಹಿಂದೆ ಸರಿಯುತ್ತಿರುವುದಕ್ಕಾಗಿ ಚಿನ್ನಯ್ಯನ ವಿರುದ್ದ ಪ್ರಕರಣ ದಾಖಲಿಸಲಾಗಿದೆಯೇ ಎಂಬುದನ್ನು ಎಸ್ಐಟಿ ಸ್ಪಷ್ಟಪಡಿಸಬೇಕು. ಹಿಂದೆ ಸರಿಯುತ್ತಿರುವುದಕ್ಕಾಗಿ ದೂರು ದಾಖಲಿಸಿದ್ದರೆ ತನಿಖೆಯಲ್ಲಿ ಗೊಂದಲ ಸೃಷ್ಟಿ ಏಕೆ ಎಂದರು.
ಅದಕ್ಕೆ ನ್ಯಾಯಪೀಠ, ಸದ್ಯ ನೀವು ಅರ್ಜಿದಾರರ ಪರ ವಕೀಲರು. ನೀವು ಚಿನ್ನಯ್ಯನ ಪರವಾಗಿ ಹಾಜರಾದಾಗ ಈ ಪ್ರಶ್ನೆ ಕೇಳಬಹುದು ಎಂದು ನುಡಿಯಿತಲ್ಲದೆ, ಚಿನ್ನಯ್ಯನ ಬಳಿ ಇರುವ ಮಾಹಿತಿಗಿಂತ ನಿಮ್ಮ ಬಳಿ ಸ್ವತಂತ್ರ ಮಾಹಿತಿ ಇದ್ದರೆ ಅದನ್ನು ಪರಿಗಣಿಸಬಹುದಿತ್ತು. ನಿಮ್ಮ ಕೋರಿಕೆಗೆ ಅನುಮತಿಸಿದರೆ ನಾಳೆಯ ದಿನ ಮತ್ತಾರೋ ಮುಂದೆ ಬಂದು ಶವಗಳನ್ನು ಹೂತಿರುವುದನ್ನು ನಾವೂ ನೋಡಿದ್ದೇವೆ ಎಂದು ಹೇಳಬಹುದು. ಇದಕ್ಕೆ ಕೊನೆ ಮೊದಲೇ ಇರುವುದಿಲ್ಲ ಎಂದು ಹೇಳಿತು.
ಆಗ ಖೋಸ್ಲಾ ಅವರು, ಚಿನ್ನಯ್ಯ 13 ಸ್ಥಳಗಳನ್ನು ಗುರುತಿಸಿದ್ದ, ನಾವು ಅದಕ್ಕೂ ಹೆಚ್ಚಿನ ಸ್ಥಳ ಗುರುತಿಸುತ್ತೇವೆ. ಭಯದಿಂದ ನಾವು ಅದನ್ನು ಮಾಡಿಲ್ಲ. ಅದಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ಫೋಟೊಗಳಿವೆ. ನ್ಯಾಯಾಲಯ ಬಯಸಿದರೆ ನಾವು ಅದನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುತ್ತೇವೆ. ಚಿನ್ನಯ್ಯನ ಬಳಿ ಇದ್ದ ಮಾಹಿತಿ ಹೊರತುಪಡಿಸಿದ ಮಾಹಿತಿಯೂ ಅರ್ಜಿದಾರರ ಬಳಿ ಇದ್ದು, ಅದನ್ನು ದಾಖಲೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದರು.
ಈ ಹಂತದಲ್ಲಿ ಅರ್ಜಿದಾರರ ಪರ ವಕಾಲತ್ತು ವಹಿಸಿರುವ ವಕೀಲೆ ರಾಣಿ ಅವರು ಕೆಲವು ಫೋಟೋಗಳನ್ನು ನ್ಯಾಯಾಲಯಕ್ಕೆ ತೋರಿಸಲು ಮುಂದಾದರಲ್ಲದೆ, ಇವುಗಳನ್ನು ದಾಖಲೆಯಲ್ಲಿ ಸಲ್ಲಿಸಲಾವುದು ಎಂದರು.
ಆಗ ಜಗದೀಶ್ ಅವರು, ಅರ್ಜಿದಾರರು ಸಲ್ಲಿಸಲು ಬಯಸಿರುವ ಚಿತ್ರಗಳನ್ನು ನಾನೂ ನೋಡಿದ್ದೇನೆ. ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಧರ್ಮಸ್ಥಳಕ್ಕೆ ಬಂದು ನಾಪತ್ತೆಯಾಗಿದ್ದು, ಆನಂತರ ಕೊಲೆಯಾಗಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದ್ದಾಗಿದೆ. ಈ ಮೊದಲು ಮಹಿಳೆಯೊಬ್ಬರು ಎಸ್ಐಟಿ ಮುಂದೆ ಕೊಲೆಯಾಗಿರುವುದು ನನ್ನ ಪುತ್ರಿ ಎಂದಿದ್ದರು. ಆನಂತರ, ತನಿಖೆ ನಡೆಸಿದಾಗ ಆ ಹುಡುಗಿ ಆ ಮಹಿಳೆಯ ಮಗಳಾಗಿರಲಿಲ್ಲ. ಆಕೆ ಬೆಂಗಳೂರಿನವಳಾಗಿದ್ದು, ಆಕೆಯ ಮನೆಯವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಆದರೆ, ಮಹಿಳೆಯ ವಕೀಲರು ವಿವಿಧ ಸ್ಥಳಗಳಲ್ಲಿ ಶವಗಳು ಪತ್ತೆಯಾಗಿವೆ ಎಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದರು ಎಂದು ನ್ಯಾಯಪೀಠಕ್ಕೆ ತಿಳಿಸಿದರು.
Related Articles
Thank you for your comment. It is awaiting moderation.
Comments (0)