ಮತ ತಿರುಚಿದ ಆರೋಪ; ಶಾಸಕ ಡಿ.ಎನ್. ಜೀವರಾಜ್‌ ವಿರುದ್ಧದ ಪ್ರಕರಣದ ಮಧ್ಯಂತರ ತಡೆಯಾಜ್ಞೆ ವಿಸ್ತರಿಸಿದ ಹೈಕೋರ್ಟ್

ಬೆಂಗಳೂರು: ಅಂಚೆ ಮತಗಳ ಮರು ಎಣಿಕೆಯಲ್ಲಿ ಶೃಂಗೇರಿ ಶಾಸಕರಾಗಿ ಆಯ್ಕೆಯಾಗಿರುವ ಡಿ.ಎನ್‌. ಜೀವರಾಜ್ ವಿರುದ್ಧ ಮತ ತಿರುಚಿದ ಆರೋಪದಲ್ಲಿ ದಾಖಲಾಗಿರುವ ಎಫ್‌ಐ‌ಆರ್‌ಗೆ ನೀಡಲಾಗಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ಜೂನ್ 3ರವರೆಗೆ ವಿಸ್ತರಿಸಿದೆ.

ಕಾಂಗ್ರೆಸ್‌ ಏಜೆಂಟ್‌ ಸುಧೀರ್‌ ಮುರೋಳ್ಳಿ ದೂರಿನ ಆಧಾರದಲ್ಲಿ ಚಿಕ್ಕಮಗಳೂರು ಟೌನ್‌ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಜೀವರಾಜ್‌ ಹಾಗೂ ಚಿಕ್ಕಮಗಳೂರು ಹಿಂದಿನ ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಸಲ್ಲಿಸಿರುವ ಅರ್ಜಿಗಳು ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ನಿಗದಿಯಾಗಿತ್ತು.

ಇದೇ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ 2023ರ ವಿಧಾನದ ಚುನಾವಣೆ ಸಂದರ್ಭದಲ್ಲಿ ಶೃಂಗೇರಿ ಕ್ಷೇತ್ರದ ಚುನಾವಣಾಧಿಕಾರಿಯಾಗಿದ್ದ ಟಿ.ಆರ್. ವೇದಮೂರ್ತಿ ಎಫ್‌ಐಆರ್ ರದ್ದು ಕೋರಿರುವ ಅರ್ಜಿ ಸಹ ಮೊದಲ ಬಾರಿಗೆ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಿತ್ತು.

ಅರ್ಜಿಗಳ ವಿಚಾರಣೆ ವೇಳೆ ಪ್ರಕರಣದ‌ ಮೂಲ ದೂರದಾರ ಸುಧೀರ್‌ ಮುರೋಳ್ಳಿ ಪರ ವಕೀಲರು, ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಇದನ್ನು‌ ಪರಿಗಣಿಸಿದ ನ್ಯಾಯಾಪೀಠ, ವಿಚಾರಣೆಯನ್ನು ಜೂನ್ 3ಕ್ಕೆ ಮುಂದೂಡಿತಲ್ಲದೆ, ಅಲ್ಲಿಯವರೆಗೆ ಜೀವರಾಜ್ ಹಾಗೂ ಕೆ.ಎನ್. ರಮೇಶ್ ವಿರುದ್ಧದ ಎಫ್ಐಆರ್‌ಗೆ ತಡೆಯಾಜ್ಞೆ ನೀಡಿ ಮೇ 5ರಂದು ಹೊರಡಿಸಿದ್ದ ಮಧ್ಯಂತರ ತಡೆಯಾಜ್ಞೆಯನ್ನು ವಿಸ್ತರಿಸಿತು.

ಜತೆಗೆ, ಈ ಮಧ್ಯಂತರ ಆದೇಶವನ್ನು ವೇದಮೂರ್ತಿ ಅವರ ಅರ್ಜಿಗೂ ಅನ್ವಯಿಸಿದ ನ್ಯಾಯಪೀಠ, ಅರ್ಜಿಯಲ್ಲಿನ ಪ್ರತಿವಾದಿಗಳಾದ ರಾಜ್ಯ ಸರ್ಕಾರ (ಚಿಕ್ಕಮಗಳೂರು ಟೌನ್ ಠಾಣೆ ಪೊಲೀಸರು) ಹಾಗೂ ದೂರುದಾರ ಸುಧೀರ್ ಮುರೋಳ್ಳಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.

Related Articles

Comments (0)

Leave a Comment