ಕೆಪಿಎಸ್ಸಿ ನೇಮಕಾತಿಗಾಗಿ ನಕಲಿ ಆದಾಯ ಪ್ರಮಾಣಪತ್ರ ಸಲ್ಲಿಕೆ; ಎಫ್ಐಆರ್ ರದ್ದು ಕೋರಿದ್ದ ಸುಮಾ ಸಾಹುಕಾರ್ಗೆ ಹೈಕೋರ್ಟ್ ತರಾಟೆ
- by LegalSamachar
- July 27, 2026
- 8535 Views
ಬೆಂಗಳೂರು: ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ಅಕ್ರಮವಾಗಿ ನೇಮಕವಾಗಲು ನಕಲಿ ಆದಾಯ ಪ್ರಮಾಣಪತ್ರ ಸಲ್ಲಿಸಿದ ಆರೋಪದಲ್ಲಿ ದಾಖಲಾಗಿರವ ಎಫ್ಐಆರ್ ರದ್ದು ಕೋರಿ ಅರ್ಜಿ ಸಲ್ಲಿಸಿದ್ದ ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್ ಪುತ್ರಿ ಸುಮಾ ಎಸ್. ಸಾಹುಕಾರ್ಗೆ ಹೈಕೋರ್ಟ್ ಛೀಮಾರಿ ಹಾಕಿದೆ.
ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಸುಮಾ ಎಸ್. ಸಾಹುಕಾರ್ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತು.
ಹಿಂದುಳಿದ ವರ್ಗ 3ಬಿ ಕೆಟಗರಿ ಕೋಟಾದಡಿ
ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ನೇಮಕಾತಿ ಬಯಸಿ, ಕುಟುಂಬದ ವಾರ್ಷಿಕ ಆದಾಯ 40 ಸಾವಿರ ರೂ. ಎಂದು ಆದಾಯ ಪ್ರಮಾಣಪತ್ರ ಸಲ್ಲಿಸಿದ್ದ ಸುಮಾ ಸಾಹುಕಾರ್ ಅವರ ನಡೆಯನ್ನು ತೀವ್ರವಾಗಿ ಖಂಡಿಸಿದ ನ್ಯಾಯಪೀಠ, ಕೆಪಿಎಸ್ಸಿ ಅಧ್ಯಕ್ಷರ ವಾರ್ಷಿಕ ಆದಾಯ ಕೇವಲ 40 ಸಾವಿರ ರೂ.ಗಳೇ? ಅವರ ಸಂಬಳವೇ ತಿಂಗಳಿಗೆ 2.70 ಲಕ್ಷ ರೂ. ಇದೆ. ಅಂದರೆ ವಾರ್ಷಿಕ ಆದಾಯ 30 ಲಕ್ಷ ರೂ. ಇರುತ್ತದೆ. ಎಲ್ಲರ ಕಣ್ಣಿಗೆ ರಾಚುವಂತಹ ಈ ಸತ್ಯವನ್ನು ಮರೆಮಾಚಿ ಹೇಗೆ ಸುಳ್ಳು ಪ್ರಮಾಣಪತ್ರ ಸಲ್ಲಿಸಿದಿರಿ? ಮೇಲ್ನೋಟಕ್ಕೇ ಇದು ವಂಚನೆ ಎಂಬುದು ನಿಚ್ಚಳವಾಗಿದೆ. ಸುಳ್ಳು ಆದಾಯ ಪ್ರಮಾಣಪತ್ರ ಸಲ್ಲಿಸಿ ಮತ್ತೊಬ್ಬ ಬಡ ಹಾಗೂ ಅರ್ಹ ಅಭ್ಯರ್ಥಿಗೆ ಸರ್ಕಾರಿ ಉದ್ಯೋಗ ಪಡೆಯುವ ಅವಕಾಶ ಕಿತ್ತುಕೊಂಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿತು.
ಪ್ರತಿ ಬಾರಿಯೂ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನಡೆಯುವ ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದಾದರೂ ಅಕ್ರಮ ನಡೆದೇ ಇರುತ್ತದೆ. ಅರ್ಜಿದಾರರು ಸುಳ್ಳು ಆದಾಯ ಮತ್ತು ಜಾತಿ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಅರ್ಜಿಯ ಘೋಷಣಾ ಕಾಲಂನಲ್ಲಿ ತಪ್ಪು ಮತ್ತು ಸುಳ್ಳು ಹೇಳಿಕೆ ನೀಡಿ ವಾಸ್ತವಿಕ ಮಾಹಿತಿ ಮರೆಮಾಚಿರುವುದನ್ನು ಹೇಗೆ ಸಮರ್ಥಿಸಿಕೊಳ್ಳುಲಾಗುತ್ತದೆ. ಹೀಗಿದ್ದರೂ, ಎಫ್ಐಆರ್ ದಾಖಲೆಯಲ್ಲಿ ಕಾನೂನು ಲೋಪ ಉಂಟಾಗಿದೆ ಎಂದು ಹೇಳಿ, ಅದರ ರದ್ದತಿಗೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೀರಿ. ತಪ್ಪು ಮಾಡಿಲ್ಲವಾದರೆ ತನಿಖೆ ನಡೆಯಲಿ ಬಿಡಿ. ತನಿಖೆ ನಂತರ ಖುಲಾಸೆಯಾಗಿ ಬನ್ನಿ ಎಂದು ನ್ಯಾಯಪೀಠ ತೀಕ್ಷ್ಣವಾಗಿ ನುಡಿಯಿತು.
ಅಂತಿಮವಾಗಿ, ಅರ್ಜಿದಾರರ ಪರ ವಕೀಲರು ಅರ್ಜಿ ಹಿಂಪಡೆಯಲು ಅನುಮತಿ ಕೋರಿದರು. ಇದರಿಂದ, ಆರೋಪ ಪಟ್ಟಿ ಸಲ್ಲಿಕೆಯಾದ ಬಳಿಕ ಹೈಕೋರ್ಟ್ ಮೆಟ್ಟಿಲೇರಬಹುದೆಂದು ತಿಳಿಸಿದ ನ್ಯಾಯಪೀಠ, ಅರ್ಜಿ ಹಿಪಂಪಡೆಯಲು ಅನುಮತಿಸಿತು.
ಅರ್ಜಿದಾರರ ವಾದವೇನು?
ಇದಕ್ಕೂ ಮುನ್ನ ಸುಮಾ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರ ವಿರುದ್ಧ ಎಫ್ಐಆರ್ ದಾಖಲಿಸುವ ಮುನ್ನ ಕಾನೂನು ಪ್ರಕ್ರಿಯೆ ಪಾಲನೆಯಲ್ಲಿ ಮೂಲಭೂತ ಲೋಪಗಳಾಗಿವೆ. ಸುಳ್ಳು ಆದಾಯ ಪ್ರಮಾಣಪತ್ರ ಸಲ್ಲಿಕೆಯಾಗಿದ್ದರೆ, ಮೊದಲು ಆ ಕುರಿತು ಜಾತಿ ಹಾಗೂ ಆದಾಯ ಪ್ರಮಾಣಪತ್ರ ಪರಿಶೀಲನಾ ಸಮಿತಿಯಿಂದ ವಿಚಾರಣೆ ನಡೆಸಬೇಕಿತ್ತು. ಆ ನಿಯಮವನ್ನು ಅತಿಕ್ರಮಿಸಿ ಯಾವುದೇ ವಿಚಾರಣೆ ನಡೆಸದೇ ನೇರವಾಗಿ ಎಫ್ಐಆರ್ ದಾಖಲಿಸಲಾಗಿದೆ. ಆದ್ದರಿಂದ, ಎಫ್ಐಆರ್ ಊರ್ಜಿತವಾಗುವುದಿಲ್ಲ ಎಂದು ಪ್ರತಿಪಾದಿಸಿದರು.
ಮುಂದುವರಿದು, ಪರೀಕ್ಷೆ ಬರೆದ ನಂತರ ದಾಖಲಾತಿಗಳ ಪರಿಶೀಲನೆ ವೇಳೆ ಆದಾಯ ಮತ್ತು ಜಾತಿ ಪ್ರಮಾಣಪತ್ರದ ತಕರಾರು ಗಮನಕ್ಕೆ ಬಂದಿದೆ. ಕುಟುಂಬದ ಆದಾಯ ಎಂದರೆ ವೈಯಕ್ತಿಕ ಆದಾಯ ಎಂಬ ತಿಳಿವಳಿಕೆಯಿಂದ ವಾರ್ಷಿಕ ಆದಾಯ 40 ಸಾವಿರ ರೂ. ಎಂದು ಅರ್ಜಿದಾರರು ತಿಳಿಸಿದ್ದರು. ನಂತರ ಅರ್ಜಿದಾರರು ತಮ್ಮ ಅಭ್ಯರ್ಥಿತನವನ್ನು ನೇಮಕಾತಿ ಪ್ರಕ್ರಿಯೆಯಿಂದ ಹಿಂಪಡೆದಿದ್ದಾರೆ. ಇದರಿಂದ, ನೇಮಕಾತಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಿಲ್ಲ ಎಂದು ಸಮಜಾಯಿಷಿ ನೀಡಿದರು.
ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಅರ್ಜಿದಾರರು ಆಯ್ಕೆಪಟ್ಟಿಯಲ್ಲಿ ಇದ್ದವರಲ್ಲವೇ? ಅಭ್ಯರ್ಥಿತನ ಹಿಂಪಡೆದಾಕ್ಷಣ ಎಲ್ಲ ಸರಿ ಹೋಗಿ ಬಿಡುತ್ತದೆಯೇ? ಮತ್ತೊಮ್ಮೆ ಪರೀಕ್ಷೆ ನಡೆಸಲಾಯಿತೇ? ಅರ್ಜಿದಾರರು 3ಬಿ ಮೀಸಲಾತಿ ಕೆಟಗರಿಯಲ್ಲಿ ಕುಟುಂಬದ ಒಟ್ಟು ವಾರ್ಷಿಕ ಆದಾಯ ತೋರಿಸುವ ಮೂಲಕ ಅರ್ಹ ಬಡ ಅಭ್ಯರ್ಥಿಯೊಬ್ಬರ ಭವಿಷ್ಯವನ್ನೇ ಕಿತ್ತುಕೊಂಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿತು.
Related Articles
Thank you for your comment. It is awaiting moderation.


Comments (0)