ಸಚಿವರ ಶಿಫಾರಸಿನ ಮೇಲೆ ಜಿಮ್ಸ್ ನಿಂದ ಕಿಮ್ಸ್‌‌ಗೆ ಶಾಸಕರ ಸಂಬಂಧಿಯ ವರ್ಗಾವಣೆ; ಆದೇಶ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರ ಸೂಚನೆಯ ಮೇರೆಗೆ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಜಿಐಎಂಎಸ್) ಪ್ರಾಧ್ಯಾಪಕ ಡಾ. ಕೇಶವ ಅಬ್ಬಯ್ಯ ಅವರನ್ನು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಕಿಮ್ಸ್) ದಂತ ಚಿಕಿತ್ಸಾ ವಿಭಾಗಕ್ಕೆ ವರ್ಗಾವಣೆ ಮಾಡಿದ್ದ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಪ್ರಕ್ರಿಯೆಯಲ್ಲಿ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ತಿಳಿಸಿ, ವರ್ಗಾವಣೆ ಆದೇಶ ರದ್ದುಪಡಿಸಿದೆ.

ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ್‌ ಅಬ್ಬಯ್ಯ ಅವರ ಸಹೋದರರಾದ ಡಾ. ಕೇಶವ ಅಬ್ಬಯ್ಯ ಅವರ ವರ್ಗಾವಣೆ ಪ್ರಶ್ನಿಸಿ ಕಿಮ್ಸ್‌ನ ಪ್ರಾಧ್ಯಾಪಕ ಡಾ. ಸುನೀಲ್ ಜಿ. ಪಾಟೀಲ್ ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಪೀಠದಲ್ಲಿ ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, 2025ರ ಜನವರಿ 21ರ ತಾತ್ಕಾಲಿಕ ಹಿರಿತನದ ಪಟ್ಟಿ ಹಾಗೂ 2025ರ ಮಾರ್ಚ್ 5ರ ವರ್ಗಾವಣೆ ಆದೇಶ ರದ್ದುಪಡಿಸಿದೆ.

ಆದೇಶದಲ್ಲೇ‌ನಿದೆ?
ಡಾ. ಕೇಶವ ಅಬ್ಬಯ್ಯ ಅವರನ್ನು ಕಾಯಂ ಆಗಿ ಕಿಮ್ಸ್‌ ನಲ್ಲಿ ನಿಯೋಜಿಸುವುದು ಮತ್ತು ಅರ್ಜಿದಾರರನ್ನು ಅವರ ಅಧೀನದಲ್ಲಿ ನಿಯೋಜಿಸುವುದು ಶಾಸನಬದ್ಧ ಮಾರ್ಗಸೂಚಿಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ರಾಜಕೀಯ ಪ್ರಭಾವದಿಂದ ಅಳಿಸಲಾಗದಷ್ಟು ಕಳಂಕಿತವಾಗಿದೆ. ಅದನ್ನು ಕಾನೂನಿನಲ್ಲಿ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಅರ್ಜಿದಾರರಿಗೆ ಕೆಲವು ತಿಂಗಳ ನಂತರ ಬಡ್ತಿ ಬಂದರೂ ಸಹ ಡಾ. ಅಬ್ಬಯ್ಯ ಅವರ ನೇಮಕಾತಿಯಲ್ಲಿನ ಅಕ್ರಮವನ್ನು ನಿವಾರಿಸುವುದಿಲ್ಲ ಅಥವಾ ಸರಿಪಡಿಸುವುದಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.

ಅರ್ಜಿದಾರರು ಶಾಸನಬದ್ಧವಾಗಿ ಬಡ್ತಿಗೆ ಅರ್ಹರಾಗಿದ್ದಾಗ, ಇಲಾಖೆಯಲ್ಲಿ ಲಭ್ಯವಿರುವ ಏಕೈಕ ಹುದ್ದೆಗೆ ಹೊರಗಿನವರನ್ನು ಆಮದು ಮಾಡಿಕೊಳ್ಳುವುದರಿಂದ ಅರ್ಜಿದಾರರ ಸೇವಾ ಹಿರಿತನ, ಶಾಸನಬದ್ಧ ಹಕ್ಕು ಮತ್ತು ಬಡ್ತಿಯ ಕಾನೂನುಬದ್ಧ ಪರಿಗಣನೆ ಎರಡನ್ನೂ ಪರಿಣಾಮಕಾರಿಯಾಗಿ ಕಸಿದುಕೊಳ್ಳಲಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅರ್ಜಿದಾರರು ಈಗಾಗಲೇ ದಂತ ವೈದ್ಯ ವಿಭಾಗದಲ್ಲಿ ಹೊಸ ಪ್ರೊಫೆಸರ್‌ ಹುದ್ದೆ ಸೃಷ್ಟಿಸುವ ವೇಳೆಗೆ ಸೇವಾ ಅರ್ಹತೆ ಗಳಿಸಿದ್ದು, ಬಡ್ತಿಗೆ ಸಂಪೂರ್ಣ ಅರ್ಹರಾಗಿದ್ದಾರೆ. ಆದರೆ, ಹಾಲಿ ಶಾಸಕರ ಸಂಬಂಧಿಯಾಗಿರುವ ಡಾ. ಕೇಶವ್ ಅವರು ತಮ್ಮ ಪ್ರಭಾವ ಬಳಸಿ ಕಿಮ್ಸ್‌‌ನಲ್ಲಿ ಹುದ್ದೆಗೆ ಪ್ರಯತ್ನಿಸಿದ್ದು, ಇದು ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ನ್ಯಾಯಪೀಠ ಹೇಳಿದೆ. ಜತೆಗೆ, ಡಾ. ಕೇಶವ್‌ ಅವರ ಸಹೋದರ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದಲ್ಲಿಯೇ ಕಿಮ್ಸ್‌ ಆಸ್ಪತ್ರೆ ಬರುತ್ತದೆ ಎಂಬ ಅಂಶವನ್ನೂ ಸಹ ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿದೆ.

Related Articles

Comments (0)

Leave a Comment