ಬಿಎಂಆರ್‌ಸಿಎಲ್ ವೆಬ್‌ಸೈಟ್‌ನಲ್ಲಿ ದರ ನಿಗದಿ ಸಮಿತಿ ವರದಿ ಪ್ರಕಟ; ಸಂಸದ ತೇಜಸ್ವಿ ಸೂರ್ಯ ಅರ್ಜಿ ಇತ್ಯರ್ಥ

ಬೆಂಗಳೂರು: ಮೆಟ್ರೊ ರೈಲು ಪ್ರಯಾಣ ದರ ಪರಿಷ್ಕರಣೆ ಸಂಬಂಧ ಮದ್ರಾಸ್‌ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ತಾರಿಣಿ ಅವರ ನೇತೃತ್ವದ ‘ಮೆಟ್ರೊ ರೈಲು ದರ ನಿಗದಿ ಸಮಿತಿ’ ಸಲ್ಲಿಸಿರುವ ವರದಿಯನ್ನು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತದ (ಬಿಎಂಆರ್‌ಸಿಎಲ್) ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವುದನ್ನು ಪರಿಗಣಿಸಿದ ಹೈಕೋರ್ಟ್, ಈ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಇತ್ಯರ್ಥಪಡಿಸಿದೆ.

ದರ ನಿಗದಿ ಸಮಿತಿ ಸಲ್ಲಿಸಿರುವ ವರದಿ ಬಹಿರಗಂಪಡಿಸಲು ಆದೇಶಿಸುವಂತೆ ಕೋರಿ ಸಂಸದ ತೇಜಸ್ವಿ ಸೂರ್ಯ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ವರದಿಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಿರುವುದರಿಂದ ಅರ್ಜಿಯು ಅಸ್ತಿತ್ವ ಕಳೆದುಕೊಂಡಿದೆ ಎಂದು ತಿಳಿಸಿ ಅದನ್ನು ವಿಲೇವಾರಿ ಮಾಡಿತು.

ವಿಚಾರಣೆ ವೇಳೆ ತೇಜಸ್ವಿ ಸೂರ್ಯ ಪರ ವಕೀಲ ಅನಿರುದ್ಧ್‌ ಕುಲಕರ್ಣಿ ಹಾಜರಾಗಿ, ದರ ನಿಗದಿ ಸಮಿತಿಯ ವರದಿಯನ್ನು ಸೆಪ್ಟೆಂಬರ್ 11ರಂದು ಬಿಎಂಆರ್‌ಸಿಎಲ್‌ ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿ ಇತ್ಯರ್ಥಪಡಿಸಿತು.

ದರ ಏರಿಕೆ ಪ್ರಶ್ನಿಸಿದ ಅರ್ಜಿ ಮುಂದೂಡಿಕೆ:
ಇದೇ ವೇಳೆ, ಮೆಟ್ರೊ ರೈಲು ಪ್ರಯಾಣ ದರ ಹೆಚ್ಚಿಸಿರುವುದನ್ನು ಹಿಂಪಡೆಯಬೇಕು ಮತ್ತು 2025ರ ಫೆಬ್ರವರಿ 19ರಿಂದ ಇದುವರೆಗೆ ಸಂಗ್ರಹಿಸಿರುವ ಹೆಚ್ಚುವರಿ ಮೊತ್ತವನ್ನು ಮರಳಿಸಲು ಬಿಎಂಆರ್‌ಸಿಎಲ್‌ಗೆ ನಿರ್ದೇಶಿಸಬೇಕು ಎಂದು ಕೋರಿ ಬೆಂಗಳೂರಿನ ನಿವಾಸಿ ಎಸ್‌. ಆನಂದ್‌ ಎಂಬುವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನವೆಂಬರ್ 18ಕ್ಕೆ ಮುಂದೂಡಿತು.

ಪ್ರಕರಣವೇನು?
ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತವು ಕೇಂದ್ರ ಮತ್ತು ರಾಜ್ಯ ಸರ್ಕಾರದ ಉದ್ದಿಮೆಯಾಗಿದೆ. ಸಾರ್ವಜನಿಕ ನಿಧಿಯನ್ನು ಬಳಕೆಯಾಗುತ್ತಿರುವ ನಿಗಮವು ಪಾರದರ್ಶಕವಾಗಿ ಸೇವೆ ಒದಗಿಸಬೇಕಿದ್ದು, ದರ ಏರಿಕೆ ಸಂಬಂಧಿಸಿದ ವರದಿ ಬಹಿರಂಗ ಪಡಿಸುವುದು ಬಿಎಂಆರ್‌ಸಿಎಲ್ ಕರ್ತ್ಯವವಾಗಿರಲಿದೆ. ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ ಮತ್ತು ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ದರ ನಿಗದಿಗೆ ಸಂಬಂಧಿಸಿದ ವರದಿಯನ್ನು ಈ ಹಿಂದೆ ದೆಹಲಿ, ಮುಂಬೈ ಮತ್ತು ಹೈದರಾಬಾದ್‌ ಮೆಟ್ರೊ ರೈಲು ನಿಗಮಗಳು ಸಾರ್ವಜನಿಕಗೊಳಿಸಿದ್ದವು. ಆದ್ದರಿಂದ, ಸ್ವೇಚ್ಛೆಯಿಂದ ನಡೆದುಕೊಳ್ಳುವುದನ್ನು ಬಿಟ್ಟು ಬಿಎಂಆರ್‌ಸಿಎಲ್‌ ಸಹ ವರದಿ ಬಹಿರಂಗಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ಅರ್ಜಿದಾರರು ಮೆಟ್ರೊ ರೈಲು ಸಂಚರಿಸುವ ಕ್ಷೇತ್ರ ಪ್ರತಿನಿಧಿಸುವ ಸಂಸದರಾಗಿದ್ದು, ಹಲವು ಸಂದರ್ಭಗಳಲ್ಲಿ ಮೆಟ್ರೊ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ಆದ್ದರಿಂದ, ವರದಿಯಲ್ಲಿನ ಅಂಶಗಳನ್ನು ತಿಳಿದುಕೊಳ್ಳಲು ಅವಕಾಶ ನೀಡಬೇಕು. ವರದಿ ಬಹಿರಂಗ ಪಡಿಸುವಂತೆ 2025ರ ಏಪ್ರಿಲ್ ತಿಂಗಳಿನಿಂದ ಈವರೆಗೂ 3 ಬಾರಿ ಮನವಿ ಸಲ್ಲಿಸಿದ್ದು, ವರದಿ ಬಹಿರಂಗಪಡಿಸುವಲ್ಲಿ ಬಿಎಂಆರ್‌ಸಿಎಲ್ ವಿಫಲವಾಗಿದೆ. ಸಾರ್ವಜನಿಕ ಪ್ರಾಧಿಕಾರವಾಗಿರುವ ನಿಗಮವು ಜನರ ಮೇಲೆ ಪರಿಣಾಮ ಬೀರುವಂತಹ ನಿರ್ಧಾರಗಳನ್ನು ತೆಗೆದುಕೊಂಡ ಸಂದರ್ಭದಲ್ಲಿ ಅದನ್ನು ಬಹಿರಂಗ ಪಡಿಸಬೇಕಾಗುತ್ತದೆ. ವರದಿಯನ್ನು ಬಹಿರಂಗ ಪಡಿಸದಂತೆ ಯಾವುದೇ ಕಾನೂನಿನಲ್ಲಿ ತಿಳಿಸಿಲ್ಲ. ಆದ್ದರಿಂದ, ಸಾರ್ವಜನಿಕ ಪ್ರಾಧಿಕಾರವಾಗಿರುವ ಬಿಎಂಆರ್‌ಸಿಎಲ್‌ಗೆ ವರದಿ ಬಹಿರಂಗ ಪಡಿಸುವಂತೆ ನಿರ್ದೇಶಿಸಬೇಕೆಂದು ತೇಜಸ್ವಿ ಸೂರ್ಯ ಮನವಿ ಮಾಡಿದ್ದರು.

Related Articles

Comments (0)

Leave a Comment