ಬೈಕ್ ಟ್ಯಾಕ್ಸಿ ನಿಷೇಧ ಪ್ರಯಾಣಿಕರಿಗೆ ಮಾರಕ; ಕಾರ್ಯಾಚರಣೆ ನಿಷೇಧಕ್ಕೆ ಬೈಕ್ ಮಾಲೀಕರ ಆಕ್ಷೇಪ
- by Jagan Ramesh
- June 24, 2025
- 67 Views

ಬೆಂಗಳೂರು: ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ನಿಷೇಧಿಸಿರುವ ಕ್ರಮವನ್ನು ಆಕ್ಷೇಪಿಸಿರುವ ಬೈಕ್ ಮಾಲೀಕರಿಬ್ಬರು, ಬೈಕ್ ಟ್ಯಾಕ್ಸಿ ನಿಷೇಧದಿಂದ ಪ್ರಯಾಣಿಕರಿಗೆ ಯಾವ ರೀತಿ ತೊಂದರೆಯಾಗುತ್ತಿದೆ ಎಂಬ ಬಗ್ಗೆ ಮಾಧ್ಯಮ ವರದಿಗಳು ತೋರಿಸಿವೆ ಎಂದು ಹೈಕೋರ್ಟ್ ವಿಭಾಗೀಯ ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಡಲು ಯತ್ನಿಸಿದರು.
ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ನಿಷೇಧಿಸಿ ಏಕಸದಸ್ಯ ನ್ಯಾಯಪೀಠ ಹೊರಡಿಸಿರುವ ಆದೇಶ ಪ್ರಶ್ನಿಸಿ ಅಗ್ರಿಗೇಟರ್ ಸಂಸ್ಥೆಗಳಾದ ಓಲಾ, ಉಬರ್ ಮತ್ತು ರ್ಯಾಪಿಡೊ ಸಲ್ಲಿಸಿರುವ ಮೇಲ್ಮನವಿಗಳನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಈ ವೇಳೆ, ಇಬ್ಬರು ಬೈಕ್ ಮಾಲೀಕರಾದ ವಿ. ಮಹೇಂದ್ರ ರೆಡ್ಡಿ ಮತ್ತು ಮಧು ಕಿರಣ್ ಪರ ವಾದ ಮಂಡಿಸಿದ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ, ಬೈಕ್ ಟ್ಯಾಕ್ಸಿ ಸೇವೆ ನೀಡಲು ದ್ವಿಚಕ್ರ ವಾಹನ ಮಾಲೀಕರನ್ನು ಸೇರ್ಪಡೆ ಮಾಡಲು ನಿಯಮದಲ್ಲಿ ಅವಕಾಶವಿದೆ. ಕಳೆದ ಹತ್ತಾರು ದಿನಗಳಿಂದ ಬೈಕ್ ಟ್ಯಾಕ್ಸಿ ಸೇವೆಯನ್ನು ಅಗ್ರಿಗೇಟರ್ಸ್ ನಿಲ್ಲಿಸಿದ್ದಾರೆ. ಇದು ಪ್ರಯಾಣಿಕರಿಗೆ ವಿನಾಶಕಾರಿ ಎಂದು ಮಾಧ್ಯಮ ವರದಿಗಳು ಹೇಳಿವೆ. ಸರ್ಕಾರ ಅನುಮತಿ ನೀಡಬೇಕಿಲ್ಲ. ಶಾಸನದಲ್ಲಿ ನೀಡಲಾಗಿರುವ ಅವಕಾಶದ ಅನ್ವಯ ನೋಂದಣಿ ಮಾಡಬೇಕು ಅಷ್ಟೆ ಎಂದರು.
ಹಾಲಿ ಇರುವ ಅಗ್ರಿಗೇಟರ್ ನಿಯಮಗಳು ದ್ವಿಚಕ್ರ ವಾಹನಗಳನ್ನು ಸೇರ್ಪಡೆ ಮಾಡಬೇಕು ಎನ್ನುತ್ತದೆ. ಆದರೆ, ಬೈಕ್ ಟ್ಯಾಕ್ಸಿಗೆ ನಿಷೇಧ ಹೇರಿರುವುದು ಕ್ಯಾರಿಯೇಜ್ ಪರವಾನಗಿ ಪಡೆಯಲು ಮತ್ತು ಅವರ ಬೈಕ್ ನೋಂದಣಿಗೆ ಅವಕಾಶ ನಿರಾಕರಿಸುತ್ತದೆ. ಮೋಟಾರು ವಾಹನ (ಎಂವಿ) ಕಾಯ್ದೆಯಲ್ಲಿ ಸಾರಿಗೆ ವಾಹನಗಳನ್ನಾಗಿ ದ್ವಿಚಕ್ರ ವಾಹನ ನೋಂದಾಯಿಸಲು ಅವಕಾಶವಿದೆ. ಶಾಸನದಲ್ಲಿ ಅದಕ್ಕೆ ಅವಕಾಶವಿರುವಾಗ ರಾಜ್ಯ ಸರ್ಕಾರ ನೋಂದಾಯಿಸುವುದಿಲ್ಲ ಮತ್ತು ಬೈಕ್ ಟ್ಯಾಕ್ಸಿಗೆ ಕ್ಯಾರಿಯೇಜ್ ಪರವಾನಗಿಗೆ ಅನುಮತಿಸುವುದಿಲ್ಲ ಎಂದು ಹೇಳಲಾಗದು ಎಂದು ಆಕ್ಷೇಪಿಸಿದರು.
ಪ್ರತಿಯೊಬ್ಬರಿಗೂ ಉದ್ಯಮ ನಡೆಸಲು ಹಕ್ಕಿದೆ. ಕಾನೂನಿನಲ್ಲಿ ಅವಕಾಶವಿರುವಾಗ ಸರ್ಕಾರ ಅದನ್ನು ನಿರ್ಬಂಧಿಸಲಾಗದು. ಬೈಕ್ ಟ್ಯಾಕ್ಸಿ ಸೇವೆ ಕಲ್ಪಿಸುವಾಗ ಸುರಕ್ಷತೆಯ ಸಮಸ್ಯೆ ಇದ್ದರೆ ಕಲ್ಯಾಣ ರಾಜ್ಯವಾಗಿ ಸರ್ಕಾರ ಅದನ್ನು ಬಗೆಹರಿಸಬಹುದು. ಆದರೆ, ಬೈಕ್ ಟ್ಯಾಕ್ಸಿ ಸೇವೆ ನೀಡಲು ಅವಕಾಶ ನೀಡುವುದಿಲ್ಲ ಎನ್ನಲಾಗದು. ಕಾಂಟ್ರಾಕ್ಟ್ ಕ್ಯಾರಿಯೇಜ್ ಅನ್ನು ಮೋಟಾರ್ ಕ್ಯಾಬ್ ಮತ್ತು ಮ್ಯಾಕ್ಸಿ ಕ್ಯಾಬ್ ಎಂದು ವಿಭಜಿಸಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಜನರ ಮೂಲಭೂತ ಹಕ್ಕು:
ಒಂದು ಲಕ್ಷಕ್ಕೂ ಅಧಿಕ ಬೈಕ್ ಟ್ಯಾಕ್ಸಿಗಳು ಸೇವೆ ನೀಡುತ್ತಿದ್ದು, ಜನ ಅವುಗಳನ್ನು ಬಳಕೆ ಮಾಡುತ್ತಿದ್ದಾರೆ. ಸಾರ್ವಜನಿಕರಿಗೆ ತಮ್ಮಿಷ್ಟದ ಸಾರಿಗೆ ವ್ಯವಸ್ಥೆ ಬಳಸಲು ಹಕ್ಕಿದೆ. ರಾಜ್ಯ ಸರ್ಕಾರ ನೇಮಕ ಮಾಡಿದ್ದ ಸಮಿತಿಯು ಬೆಂಗಳೂರಿಗೆ ಬೈಕ್ ಟ್ಯಾಕ್ಸಿ ಅಗತ್ಯವಿಲ್ಲ ಎಂದಿದೆ. ಬೈಕ್ ಟ್ಯಾಕ್ಸಿ ಸೇವೆ ಪಡೆಯಬೇಕು ಎನ್ನುವವರನ್ನು ನಿರ್ಬಂಧಿಸಲಾಗದು. ಪ್ರತಿಯೊಬ್ಬರಿಗೂ ಅತ್ಯಂತ ಕಡಿಮೆ ದರದಲ್ಲಿ ವೇಗದೂತ ಸಾರಿಗೆ ಬೇಕಿದೆ. ಸರ್ಕಾರ ಇ-ಬೈಕ್ ಸೇವೆ ಹಿಂಪಡೆದಿದೆ. ಇ-ಬೈಕ್ ಸೇವೆ ಮತ್ತು ಈಗಿನ ಸರ್ಕಾರದ ನಿಲುವಿನಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಸಾರಿಗೆ ಕ್ಯಾರೇಜ್ಗೆ ಕಾನೂನಿನಲ್ಲಿ ಯಾವುದೇ ನಿರ್ಬಂಧವಿಲ್ಲ. ದೇಶದ 11 ರಾಜ್ಯಗಳಲ್ಲಿ ಅಲ್ಲಿನ ಕಾನೂನಿಗೆ ಅನುಗುಣವಾಗಿ ಬೈಕ್ ಟ್ಯಾಕ್ಸಿ ಸೇವೆಯಿದೆ ಎಂದು ಪ್ರತಿಪಾದಿಸಿದರು.
ವಾದ ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.
Comments (0)