ವಿಟಿಯು ವಿಸಿ ಹುದ್ದೆಗೆ ವಿದ್ಯಾಶಂಕರ್ ನೇಮಕ ಪ್ರಶ್ನಿಸಿ ಅರ್ಜಿ; ಸರ್ಕಾರಕ್ಕೆ ತುರ್ತು ನೋಟಿಸ್

ಬೆಂಗಳೂರು: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಕುಲಪತಿ ಹುದ್ದೆಗೆ ಡಾ. ಎಸ್‌. ವಿದ್ಯಾಶಂಕರ್‌ ಅವರನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್ ತುರ್ತು ನೋಟಿಸ್‌ ಜಾರಿಗೊಳಿಸಿದೆ.

ಪ್ರಾಧ್ಯಾಪಕರಾದ ಬಿ.ಯೋಗೇಶ್‌ ಮತ್ತು ಕೆ.ಎ. ವೇಣುಗೋಪಾಲ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್‌.ಟಿ. ನರೇಂದ್ರ ಪ್ರಸಾದ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಸರ್ಕಾರ, ವಿಟಿಯು ಹಾಗೂ ಕುಲಪತಿ ವಿದ್ಯಾಶಂಕರ್‌ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿ, ಆಕ್ಷೇಪಣೆಗಳನ್ನು ಸಲ್ಲಿಸಲು ಸೂಚಿಸಿ ವಿಚಾರಣೆ ಮುಂದೂಡಿತು.

ಅರ್ಜಿಯಲ್ಲೇನಿದೆ?
ವಿದ್ಯಾಶಂಕರ್‌ ಅವರು ಈ ಮೊದಲು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆ‌ಎಸ್‌ಒಯು) ಕುಲಪತಿಯಾಗಿ 3 ವರ್ಷ ಪೂರೈಸಿದ್ದಾರೆ. ಈ ಅವಧಿಯಲ್ಲಿ ಕೆಎಸ್‌ಒಯುನಲ್ಲಿ ನೂರಾರು ನಿಯಮಬಾಹಿರ ತಾತ್ಕಾಲಿಕ ನೇಮಕಾತಿ, 10 ಕೋಟಿ ನಿಧಿಯಲ್ಲಿ ಸರ್ಕಾರಿ ಶಾಲೆಗಳ ನವೀಕರಣ, 25 ಕೋಟಿ ರೂ. ವೆಚ್ಚದಲ್ಲಿ ಕೆಎಸ್‌ಒಯು ಕಟ್ಟಡ ನಿರ್ಮಾಣ ಮತ್ತು ಕಾನೂನುಬಾಹಿರವಾಗಿ ಮೈಸೂರಿನ ಕುವೆಂಪು ನಗರದ ಬ್ಯಾಂಕ್‌‌ ಒಂದರಲ್ಲಿ ಬಾಹ್ಯ ಪರೀಕ್ಷೆ ಖಾತೆ ತೆರೆದು ಲಕ್ಷಾಂತರ ಮೊತ್ತದ ಹಣ ದುರುಪಯೋಗ ಮಾಡಿಕೊಂಡಿರುವುದು ಸೇರಿ ಹಲವು ಆರೋಪಗಳು ಕೇಳಿ ಬಂದಿವೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಯುಜಿಸಿ ನಿಬಂಧನೆಗಳು-2018, ವಿಟಿಯು ಕಾಯ್ದೆ ಉಲ್ಲಂಘಿಸಿ, ಯುಜಿಸಿ ನಾಮನಿರ್ದೇಶನವೇ ಇಲ್ಲದೆ ವಿಟಿಯುನ ಅಕಾಡೆಮಿಕ್‌ ಸೆನೆಟ್‌ ಮತ್ತು ಬಾಹ್ಯ ಮಂಡಳಿಯ ಸದಸ್ಯರನ್ನೇ ಒಳಗೊಂಡಿದ್ದ ವಿಟಿಯು ಕುಲಪತಿ ಶೋಧನಾ ಸಮಿತಿಯ ಶಿಫಾರಸಿನಂತೆ ವಿದ್ಯಾಶಂಕರ್ ಅವರ ನೇಮಕಾತಿ ಮಾಡಲಾಗಿದೆ. ಇದು ಕಾನೂನುಬಾಹಿರವಾಗಿರುವುದರಿಂದ ನೇಮಕಾತಿ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Related Articles

Comments (0)

Leave a Comment