ಗುರಾಣಿಯಾಗಬೇಕಾದ ಕಾನೂನು ಕತ್ತಿಯಾಗಿ ಬದಲಾಗುತ್ತದೆ; ಹೈಕೋರ್ಟ್ ಈ ರೀತಿ ಹೇಳಲು ಕಾರಣವೇನು?

ಬೆಂಗಳೂರು: ಸಿವಿಲ್‌ ವ್ಯಾಜ್ಯಗಳಲ್ಲಿ ಕ್ರಿಮಿನಲ್‌ ಕಾನೂನನ್ನು ಅಸ್ತ್ರವಾಗಿ ಬಳಕೆ ಮಾಡಿಕೊಳ್ಳುವವರ ಬಗ್ಗೆ ನ್ಯಾಯಾಲಯಗಳು ಜಾಗರೂಕತೆಯಿಂದಿರಬೇಕು ಎಂದಿರುವ ಹೈಕೋರ್ಟ್, ಕಾನೂನು ದುರ್ಬಳಕೆಯಾದಾಗ ಅದು ಗುರಾಣಿಯಾಗಿ ಉಳಿಯುವುದಿಲ್ಲ, ಬದಲಿಗೆ ಕತ್ತಿಯಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದಿದೆ.

ಮಹಾರಾಷ್ಟ್ರ ಮೂಲದ ಬಿಲ್ಡರ್‌ ಒಬ್ಬರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಿ ಹೊರಡಿಸಿರುವ ಆದೇಶದಲ್ಲಿ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಕ್ರಿಮಿನಲ್‌ ಪ್ರಕರಣ ರದ್ದು ಕೋರಿ ವಿಲಾಸ್‌ ಭೋರ್ಮೆಲ್ಜಿ ಓಸ್ವಾಲ್‌ ಎಂಬುವರು ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ವ್ಯವಹಾರದಲ್ಲಿ ಉಂಟಾದ ಆರ್ಥಿಕ ವ್ಯಾಜ್ಯ ಪರಿಹರಿಸಿಕೊಳ್ಳಲು ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ಅರ್ಜಿದಾರರ ವಿರುದ್ಧ ದಾಖಲಿಸಿದ್ದ ದೂರು ಮತ್ತು ಅದಕ್ಕೆ ಸಂಬಂಧಿಸಿದ ಆರೋಪಪಟ್ಟಿಯನ್ನು ರದ್ದುಪಡಿಸಿದೆ.

ಪ್ರತೀಕಾರದ ಅಸ್ತ್ರ:
ವ್ಯವಹಾರದ ಪಾಲುದಾರರಿಬ್ಬರ ನಡುವೆ ಉಂಟಾದ ಆರ್ಥಿಕ ವಿವಾದಕ್ಕೆ ಪ್ರತಿಯಾಗಿ ಸೇಡು ತೀರಿಸಿಕೊಳ್ಳಲು ಕ್ರಿಮಿನಲ್‌ ನ್ಯಾಯ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಇದು ಕಾನೂನಿನ ಮುಖವಾಡದಲ್ಲಿರುವ ಪ್ರತೀಕಾರದ ಅಸ್ತ್ರವಾಗಿದೆ ಎಂದು ಹೈಕೋರ್ಟ್ ಹೇಳಿದೆ.

ಅರ್ಜಿದಾರರು ದೂರುದಾರರಾದ ಸೋಮಶೇಖರ್‌ ಅವರನ್ನು ಆಟದ ಮೈದಾನವೊಂದರಲ್ಲಿ ನಿಮ್ಮ ಜಾತಿವಾದಿ ಮನಃಸ್ಥಿತಿ ತೋರಿಸಬೇಡಿ ಎಂದು ಹೇಳಿದ್ದಾರೆ. ಇದರಲ್ಲಿ ಜಾತಿ ಹೆಸರನ್ನು ಹೇಳಿ ನಿಂದನೆ ಮಾಡಿದ್ದಾರೆಂಬ ಆರೋಪ ಬರುವುದಿಲ್ಲ. ಪ್ರಕರಣ ಸಂಬಂಧ ದಾಖಲಾಗಿರುವ ದೂರಿನಲ್ಲಿ ಇಬ್ಬರು ಪ್ರತ್ಯಕ್ಷದರ್ಶಿಗಳು ದೂರುದಾರರೊಂದಿಗೆ ಮೈದಾನಕ್ಕೆ ತೆರಳಿದ್ದು, ಅವರ ಮುಂದೆಯೇ ಅರ್ಜಿದಾರ ನಿಂದಿಸಿದ್ದಾರೆಂಬ ವಿವರವಿಲ್ಲ. ಆದ್ದರಿಂದ, ಅರ್ಜಿದಾರರ ವಿರುದ್ಧದ ಪ್ರಕರಣ ಮುಂದುವರಿಸಿದಲ್ಲಿ ಕಾನೂನು ವ್ಯವಸ್ಥೆಯ ದುರುಪಯೋಗವಾಗಲಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಪ್ರಕರಣ ರದ್ದುಪಡಿಸಿ ಆದೇಶಿಸಿದೆ.

ಪ್ರಕರಣವೇನು?
ಬೆಂಗಳೂರಿನ ಸೋಮಶೇಖರ್‌ ಅವರು ವಿಲಾಸ್‌ ಭೋರ್ಮೆಲ್ಜಿ ಓಸ್ವಾಲ್‌ರೊಂದಿಗೆ 2011ರಲ್ಲಿ ಗ್ರೀನ್‌ ಲ್ಯಾಂಡ್‌ ಇನ್ಟ್ರಾ ಎಂಬ ರಿಯಲ್ ಎಸ್ಟೇಟ್ ಸಂಸ್ಥೆಯ ವ್ಯವಹಾರದಲ್ಲಿ ಪಾಲುದಾರರಾಗಿದ್ದರು. 2016ರಲ್ಲಿ ಇಬ್ಬರ ನಡುವೆ ಉಂಟಾದ ಗೊಂದಲಗಳಿಂದ ವ್ಯವಹಾರ ಸ್ಥಗಿತಗೊಳಿಸಿದ್ದರು. ಆದರೆ, ವ್ಯವಹಾರದಲ್ಲಿನ ಗೊಂದಲಗಳು ಮುಂದುವರಿದಿದ್ದವು.

ಪರಿಶಿಷ್ಟ ಜಾತಿಗೆ ಸೇರಿದ ಸೋಮಶೇಖರ್‌ 2021ರಲ್ಲಿ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ (ಡಿಸಿಆರ್‌ಇ) ದೂರು ಸಲ್ಲಿಸಿ, ಅರ್ಜಿದಾರ ಓಸ್ವಾಲ್‌ 2020ರಲ್ಲಿ ನನ್ನ ವಿರುದ್ಧ ಜಾತಿ ನಿಂದನೆ ಮಾಡಿದ್ದಾರೆಂದು ಆರೋಪಿಸಿದ್ದರು. ಡಿಸಿಆರ್‌ಇ ಮೂರು ವರ್ಷಗಳ ಕಾಲ ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ. ಅದಾದ ಬಳಿಕ 2024ರಲ್ಲಿ ದೂರುದಾರ ಸೋಮಶೇಖರ್‌ ಹೇಳಿಕೆ ಮತ್ತು ಇಬ್ಬರು ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಂಡಿತ್ತು. ಜತೆಗೆ, ಸಾಕ್ಷಿದಾರರು, ಓಸ್ವಾಲ್‌ ತಮ್ಮ ಮುಂದೆಯೇ ಸೋಮಶೇಖರ್‌ ಅವರನ್ನು ನಿಂದಿಸಿರುವುದಾಗಿ ಹೇಳಿಕೆ ನೀಡಿದ್ದರು.

ಇದನ್ನು ಪರಿಗಣಿಸಿದ್ದ ಡಿಸಿಆರ್‌ಇ, ಆರೋಪ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಜಯನಗರ ಪೊಲೀಸರಿಗೆ ನಿರ್ದೇಶನ ನೀಡಿತ್ತು. ತನಿಖೆ ನಡೆಸಿದ್ದ ಪೊಲೀಸರು ಅರ್ಜಿದಾರರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣಾ ನ್ಯಾಯಾಲಯ 2024ರಲ್ಲಿ ಪ್ರಕರಣವನ್ನು ವಿಚಾರಣೆಗೆ (ಕಾಗ್ನಿಜೆನ್ಸ್‌) ಪರಿಗಣಿಸಿತ್ತು. ಅದನ್ನು ಪ್ರಶ್ನಿಸಿ ಓಸ್ವಾಲ್ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Related Articles

Comments (0)

Leave a Comment