ಕಿರುತೆರೆ ನಟಿ ಮೇಲೆ ಅತ್ಯಾಚಾರ ಆರೋಪ; ಮಡೆನೂರು ಮನುಗೆ 14 ದಿನ ನ್ಯಾಯಾಂಗ ಬಂಧನ

ಬೆಂಗಳೂರು: ಕಿರುತೆರೆ ನಟಿಯೊಬ್ಬರ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರು ಮನು ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ನಗರದ 3ನೇ ಎಸಿಜೆಎಂ ನ್ಯಾಯಾಲಯ ಆದೇಶಿಸಿದೆ.

ಅತ್ಯಾಚಾರ ಆರೋಪ ಸಂಬಂಧ 2025ರ ಮೇ 22ರಂದು ಮಡೆನೂರು ಮನು ಅವರನ್ನು ಬಂಧಿಸಿದ್ದ ಬೆಂಗಳೂರಿನ ಅನ್ನಪೂಣೇಶ್ವರಿ ನಗರ ಠಾಣೆ ಪೊಲೀಸರು, ನಾಲ್ಕು ದಿನಗಳ ಕಾಲ ತಮ್ಮ ವಶದಲ್ಲಿರಿಸಿಕೊಂಡು ವಿಚಾರಣೆ ನಡೆಸಿದ್ದರು.

ವಿಚಾರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸೋಮವಾರ ಮನು ಅವರನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ 3ನೇ ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಸಿದ್ದರಾಮ ಅವರ ಮುಂದೆ ಹಾಜರುಪಡಿಸಿದರು. ಆರೋಪಿಯ ಹಾಜರಾತಿ ದಾಖಲಿಸಿಕೊಂಡ ನ್ಯಾಯಾಧೀಶರು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು.

ಪ್ರಕರಣವೇನು?
ಖಾಸಗಿ ವಾಹಿನಿಯೊಂದ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಿಂದಲೇ ಬೆಳಕಿಗೆ ಬಂದಿದ್ದ ಕಿರುತೆರೆ ನಟಿಯೊಬ್ಬರು ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರಿಗೆ ದೂರು ನೀಡಿ, 2022ರ ನವೆಂಬರ್ 29ರಂದು ಶಿಕಾರಿಪುರದ ಹೋಟೆಲ್‌ ರೂಮ್‌ನಲ್ಲಿದ್ದಾಗ ಸಂಭಾವನೆ ನೀಡುವ ನೆಪದಲ್ಲಿ ಬಂದಿದ್ದ ಮಡೆನೂರು ಮನು ನನ್ನ ಮೇಲೆ ಅತ್ಯಾಚಾರವೆಸಗಿದ್ದರು. ಬಳಿಕ ಅದೇ ವರ್ಷ ಡಿಸೆಂಬರ್ 3ರಂದು ಮನೆಗೆ ಬಂದು ಬಲವಂತವಾಗಿ ನನಗೆ ತಾಳಿ ಕಟ್ಟಿದರು. ಆ ಮನೆಯಲ್ಲಿ ನನ್ನ ಮೇಲೆ ಹಲವು ಬಾರಿ ಅತ್ಯಾಚಾರ ಮಾಡಿದ್ದರು. ಈ ನಡುವೆ ನಾನು ಗರ್ಭವತಿಯಾಗಿದ್ದೆ. ಅದನ್ನು ತಿಳಿದು ಮನೆಗೆ ಬಂದು ನನಗೆ ಮಾತ್ರೆ ನೀಡಿ ಗರ್ಭಪಾತ ಮಾಡಿಸಿದ್ದ ಮನು, ಮತ್ತೊಂದು ಬಾರಿ ಗರ್ಭಪಾತ ಮಾಡಿಸಿದ್ದರು ಎಂದು ಆರೋಪಿಸಿದ್ದರು. ದೂರು ಆಧರಿಸಿ ಪೊಲೀಸರು ಮೇ 22ರಂದು ಮನು ಅವರನ್ನು ಬಂಧಿಸಿದ್ದರು.

 

Related Articles

Comments (0)

Leave a Comment