- ಟ್ರಯಲ್ ಕೋರ್ಟ್
- Like this post: 3
ವಿದೇಶಕ್ಕೆ ತೆರಳಲು ನಟ ದರ್ಶನ್ಗೆ ಕೋರ್ಟ್ ಗ್ರೀನ್ ಸಿಗ್ನಲ್; ಡೆವಿಲ್ ಶೂಟಿಂಗ್ನಲ್ಲಿ ಪಾಲ್ಗೊಳ್ಳಲಿರುವ ದಾಸ
- by Prashanth Basavapatna
- May 30, 2025
- 68 Views

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿಯಾಗಿರುವ ನಟ ದರ್ಶನ್ಗೆ ಡೆವಿಲ್ ಚಲನಚಿತ್ರದ ಚಿತ್ರೀಕರಣಕ್ಕಾಗಿ ಜೂನ್ 1ರಿಂದ 25ರವರೆಗೆ ದುಬೈ ಹಾಗೂ ಯೂರೋಪ್ಗೆ ತೆರಳಲು ಬೆಂಗಳೂರಿನ 64ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಅನುಮತಿ ನೀಡಿದೆ.
ಜಾಮೀನು ಷರತ್ತು ಸಡಿಲಿಸಿ ವಿದೇಶ ಪ್ರಯಾಣಕ್ಕೆ ಅನುಮತಿ ನೀಡುವಂತೆ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಧೀಶ ಐ.ಪಿ. ನಾಯ್ಕ್ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ.
ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ, ದರ್ಶನ್ ಅವರು ಜೂನ್ 1ರಿಂದ 25ರವರೆಗೆ ವಿದೇಶಕ್ಕೆ ತೆರಳಬಹುದು. ಆದರೆ, ಯಾವುದೇ ವಿನಾಯಿತಿ ಕೋರದೆ ವಿದೇಶದಿಂದ ಮರಳಿದ ನಂತರ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ಆದೇಶಿಸಿತು.
ಕೋರ್ಟ್ ಹೇಳಿದ್ದೇನು?
ಡೆವಿಲ್ ಚಿತ್ರ ನಿರ್ಮಿಸುತ್ತಿರುವ ಜೈಮಾತಾ ಕಂಬೈನ್ಸ್ನ ಕಾರ್ಯಕಾರಿ ನಿರ್ಮಾಪಕರು ಚಿತ್ರೀಕರಣಕ್ಕಾಗಿ 2025ರ ಜೂನ್ 1ರಿಂದ 25ರವರೆಗೆ ದರ್ಶನ್ ಅವರ ಉಪಸ್ಥಿತಿಯ ಅಗತ್ಯವಿದೆ ಎಂದು ಪತ್ರ ನೀಡಿದ್ದಾರೆ. ಚಿತ್ರೀಕರಣ ಮುಗಿದ ಬಳಿಕ ದರ್ಶನ್ ಭಾರತಕ್ಕೆ ಮರಳುವುದಾಗಿ ಭರವಸೆ ನೀಡಿದ್ದಾರೆ. ವಿದೇಶಕ್ಕೆ ಪ್ರಯಾಣಿಸುವುದು ಸಂವಿಧಾನದ ಪರಿಚ್ಛೇದ 21ರ ಅಡಿಯ ಮೂಲಭೂತ ಹಕ್ಕು ಎಂದು ಸುಪ್ರೀಂಕೋರ್ಟ್ 1978ರಲ್ಲಿ ಪ್ರಕರಣವೊಂದರಲ್ಲಿ ಆದೇಶಿಸಿದೆ. ಕನ್ನಡ ಚಿತ್ರರಂಗದ ನಟನಾಗಿರುವ ದರ್ಶನ್, ನಟನೆಯ ಮೂಲಕವೇ ಕುಟುಂಬದ ಆದಾಯಗಳಿಸುವ ಸದಸ್ಯರಾಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ (ಟ್ರಯಲ್) ಆರಂಭವಾಗಬೇಕಿದೆ. ಆದ್ದರಿಂದ, ಮುಂದಿನ ವಿಚಾರಣೆ ವೇಳೆ ಹಾಜರಾಗಬೇಕೆಂಬ ಷರತ್ತು ವಿಧಿಸಿ ವಿದೇಶಕ್ಕೆ ತೆರಳಲು ದರ್ಶನ್ಗೆ ಅನುಮತಿ ನೀಡುವುದು ಸೂಕ್ತ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಹೀಗಿತ್ತು ವಾದ-ಪ್ರತಿವಾದ:
ವಿಚಾರಣೆ ವೇಳೆ ವಾದ ಮಂಡಿಸಿದ್ದ ದರ್ಶನ್ ಪರ ವಕೀಲರು, ಪ್ರಕರಣದಲ್ಲಿ ಜಾಮೀನು ನೀಡುವಾಗ, ಬೆಂಗಳೂರು ಬಿಟ್ಟು ಹೊರ ಹೋಗಬೇಕಾದರೆ ವಿಚಾರಣಾ ನ್ಯಾಯಾಲಯದ ಅನುಮತಿ ಪಡೆಯಬೇಕು ಎಂಬ ಷರತ್ತು ವಿಧಿಸಲಾಗಿದೆ. ದರ್ಶನ್ ಒಬ್ಬ ನಟರಾಗಿದ್ದು, ಅವರ ವೃತ್ತಿಯೇ ಕುಟುಂಬದ ಜೀವನಾಧಾರವಾಗಿದೆ. ಅವರು ಅಭಿನಯಿಸುತ್ತಿರುವ ಡೆವಿಲ್ ಚಿತ್ರದ ಚಿತ್ರೀಕರಣ ದುಬೈ ಮತ್ತು ಯುರೋಪ್ನಲ್ಲಿ ನಡೆಯಲಿದೆ. ಆದ್ದರಿಂದ, ಜೂನ್ 1ರಿಂದ 25ರವರೆಗೆ ವಿದೇಶಕ್ಕೆ ತೆರಳಲು ದರ್ಶನ್ಗೆ ಅನುಮತಿ ನೀಡಬೇಕು ಎಂದು ಕೋರಿದ್ದರು.
ಈ ಮನವಿಗೆ ಆಕ್ಷೇಪಿಸಿದ ಪ್ರಾಸಿಕ್ಯೂಷನ್ ಪರ ವಕೀಲರು, ದರ್ಶನ್ ಅತ್ಯಂತ ಪ್ರಭಾವಿ ಮತ್ತು ಆರ್ಥಿಕವಾಗಿ ಸದೃಢವಾಗಿದ್ದಾರೆ. ವಿದೇಶಕ್ಕೆ ತೆರಳಲು ಅನುಮತಿ ನೀಡಿದರೆ ಮತ್ತೆ ನ್ಯಾಯಾಲಯದ ಮುಂದೆ ಹಾಜರಾಗದೆ ತಲೆಮರಿಸಿಕೊಳ್ಳುವ ಸಾಧ್ಯತೆಯಿದೆ. ವಿದೇಶಕ್ಕೆ ತೆರಳಲು ದರ್ಶನ್ ನೀಡಿರುವ ಕಾರಣ ತೃಪ್ತಿಕರವಾಗಿಲ್ಲ. ಆದ್ದರಿಂದ, ಅವರ ಮನವಿ ತಿರಸ್ಕರಿಸಬೇಕು ಎಂದು ಮನವಿ ಮಾಡಿದ್ದರು.
Related Articles
Thank you for your comment. It is awaiting moderation.
Comments (0)