ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ನಿಂದಿಸಿದ ಆರೋಪ; ತೆಲಂಗಾಣದ ವ್ಯಕ್ತಿ ವಿರುದ್ಧದ ಎಫ್‌ಐಆರ್ ರದ್ದು

ಬೆಂಗಳೂರು: ಕರ್ತವ್ಯನಿರತ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಮೇಲೆ ಹಲ್ಲೆ ಮಾಡಿದ ಹಾಗೂ ನಿಂದನೀಯ ಭಾಷೆ ಬಳಸಿದ ಆರೋಪದಲ್ಲಿ ತೆಲಂಗಾಣ ಮೂಲದ ವ್ಯಕ್ತಿಯೊಬ್ಬರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ಹಾಗೂ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಯನ್ನು ಹೈಕೋರ್ಟ್ ರದ್ದುಪಡಿಸಿದೆ.

ಕೇವಲ ನಿಂದನೀಯ ಭಾಷೆಯ ಬಳಕೆ ಮಾಡುವುದು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 504 ಅಡಿಯಲ್ಲಿ ಶಾಂತಿ ಭಂಗ ಉಂಟು ಮಾಡುವುದನ್ನು ಪ್ರಚೋದಿಸಲು ಉದ್ದೇಶಪೂರ್ವಕವಾಗಿ ಅವಮಾನ ಮಾಡಿದ ಅಪರಾಧಕ್ಕೆ ಅನ್ವಯವಾಗುವುದಿಲ್ಲ ಎಂದು ನ್ಯಾಯಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ.

ಸರ್ಕಾರಿ ನೌಕರರ ಕರ್ತವ್ಯ ನಿರ್ವಹಣೆ ತಡೆಯುವ ಉದ್ದೇಶದಿಂದ ಹಲ್ಲೆ ಅಥವಾ ಅಪರಾಧಿಕ ಬಲಪ್ರಯೋಗ ನಡೆಸಿದ (ಐಪಿಸಿ ಸೆಕ್ಷನ್‌ 353) ಮತ್ತು ಶಾಂತಿ ಭಂಗ ಉಂಟು ಮಾಡುವುದನ್ನು ಪ್ರಚೋದಿಸಲು ಉದ್ದೇಶಪೂರ್ವಕವಾಗಿ ಅವಮಾನ ಮಾಡಿದ (ಐಪಿಸಿ ಸೆಕ್ಷನ್‌ 504) ಆರೋಪ ಸಂಬಂಧ ಚನ್ನಪಟ್ಟಣ ಪೂರ್ವ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ದಾಖಲಿಸಿರುವ ಎಫ್‌ಐಆರ್‌ ರದ್ದು ಕೋರಿ ತೆಲಂಗಾಣ ನಿವಾಸಿ ಅನುಮಂದಲ ರಾಜೇಶ್‌ ರೆಡ್ಡಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರಕರಣ ಸಂಬಂಧ ದಾಖಲಾಗಿರುವ ದೂರು ಗಮನಿಸಿದರೆ ದೂರುದಾರ ಪೊಲೀಸ್‌ ಅಧಿಕಾರಿ ಮತ್ತು ಇತರ ಪೊಲೀಸ್‌ ಅಧಿಕಾರಿಗಳ ಬಗ್ಗೆ ಅರ್ಜಿದಾರರು ನಿಂದನೀಯ ಭಾಷೆ ಬಳಸಿದ್ದಾರೆ. ತಪ್ಪಿಸಿಕೊಳ್ಳುವ ಸಲುವಾಗಿ ಪೊಲೀಸ್‌ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಆ ಮೂಲಕ ಸರ್ಕಾರಿ ನೌಕರನ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಅರ್ಜಿದಾರ ನಿರ್ದಿಷ್ಟವಾಗಿ ಯಾವ ಪದಗಳಿಂದ ನಿಂದಿಸಿದರು ಮತ್ತು ಹೇಗೆ ಬಲಪ್ರಯೋಗ ಮಾಡಿದರು ಎಂಬ ಬಗ್ಗೆ ದೂರಿನಲ್ಲಿ ವಿವರಿಸಲಾಗಿಲ್ಲ ಎಂದು ನ್ಯಾಯಪೀಠ ಹೇಳಿದೆ.

ದೂರುದಾರರಾಗಿರುವ ಪೊಲೀಸ್‌ ಅಧಿಕಾರಿ ಮತ್ತು ಇತರ ಪೊಲೀಸರ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದ ಬಳಿಕ ಪರಾರಿಯಾದ ಅಥವಾ ಪೊಲೀಸರಿಗೆ ಯಾವುದೇ ಗಾಯ ಉಂಟು ಮಾಡಿದ ಪ್ರಕರಣ ಇದಾಗಿಲ್ಲ. ಅರ್ಜಿದಾರರ ವಿರುದ್ಧದ ಆರೋಪಗಳು ಅಸ್ಪಷ್ಟವಾಗಿವೆ. ಆರೋಪಿ ಬಳಸಿದ ನಿಂದನೀಯ ಭಾಷೆಯ ಸ್ವರೂಪವನ್ನು ದೂರಿನಲ್ಲಿ ಹೇಳಿಲ್ಲ. ಮೇಲಾಗಿ ಕೇವಲ ನಿಂದನೀಯ ಭಾಷೆಯ ಬಳಕೆಯು ಐಪಿಸಿ ಸೆಕ್ಷನ್ 504 ಅಡಿಯ ಅಪರಾಧಿಕ ಅಂಶಗಳಿಗೆ ಅನ್ವಯವಾಗುವುದಿಲ್ಲ. ಆದ್ದರಿಂದ, ಅರ್ಜಿದಾರನ ವಿರುದ್ಧದ ಪ್ರಕರಣ ರದ್ದುಪಡಿಸಲಾಗುತ್ತಿದೆ ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.

ಪ್ರಕರಣದ ಹಿನ್ನೆಲೆ:
2020ರ ನವೆಂಬರ್ 1ರಂದು ಸಂಜೆ 4.30ರ ಸಮಯದಲ್ಲಿ ಚನ್ನಪಟ್ಟಣ ಪೂರ್ವ ಪೊಲೀಸ್‌ ಠಾಣೆಯ ಪಿಎಸ್‌ಐ ಪ್ರಕಾಶ್‌ ಮತ್ತು ಅವರ ಸಿಬ್ಬಂದಿ ಕ್ರಿಮಿನಲ್‌ ಪ್ರಕರಣವೊಂದರ ಸಂಬಂಧ ಅರ್ಜಿದಾರ ರಾಜೇಶ್‌ ರೆಡ್ಡಿಯನ್ನು ಬಂಧಿಸಲು ಯತ್ನಿಸಿದ್ದರು. ಈ ವೇಳೆ ರೆಡ್ಡಿ, ಪ್ರಕಾಶ್‌ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹಲ್ಲೆ ನಡೆಸಲು ಯತ್ನಿಸಿಸುವ ಮೂಲಕ ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಅರ್ಜಿದಾರನ ವಿರುದ್ಧ ಐಪಿಸಿ ಸೆಕ್ಷನ್‌ 353 ಮತ್ತು 504 ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿತ್ತು. ಚನ್ನಪಟ್ಟಣದ ಹೆಚ್ಚುವರಿ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣಾ ಹಂತದಲ್ಲಿತ್ತು. ಇದರಿಂದ, ಎಫ್‌ಐಆರ್‌ ಮತ್ತು ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದು ಕೋರಿ ಆರೋಪಿ ರಾಜೇಶ್ ರೆಡ್ಡಿ ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದರು.

 

Related Articles

Comments (0)

Leave a Comment