ಬಸವಜಯ ಮೃತ್ಯುಂಜಯ ಶ್ರೀಗಳ ವಿರುದ್ಧ ಮಾನಹಾನಿ ಸುದ್ದಿ ಪ್ರಕಟಿಸದಂತೆ ಮಾಧ್ಯಮಗಳಿಗೆ ಕೋರ್ಟ್ ನಿರ್ಬಂಧ

ಬೆಂಗಳೂರು: ಕೂಡಲಸಂಗಮ ಪಂಚಮಸಾಲಿ ಮಠದ ಪೀಠಾಧಿಪತಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಯಾವುದೇ ರೀತಿಯ ಮಾನಹಾನಿ ಸುದ್ದಿ ಪ್ರಕಟಿಸದಂತೆ ಮಾಧ್ಯಮಗಳನ್ನು ‌ನಿರ್ಬಂಧಿಸಿ ಬೆಂಗಳೂರು ಸೆಷನ್ಸ್ ನ್ಯಾಯಾಲಯ ಏಕಪಕ್ಷೀಯ ಪ್ರತಿಬಂಧಕಾದೇಶ ಮಾಡಿದೆ.

ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ತಮ್ಮ ವಿರುದ್ಧ ಯಾವುದೇ ರೀತಿಯ ಮಾನಹಾನಿ ಸುದ್ದಿ ಪ್ರಸಾರ, ಪ್ರಕಟಣೆ ಮತ್ತು ಹಂಚಿಕೆ ಮಾಡದಂತೆ ಶಾಶ್ವತ ಪ್ರತಿಬಂಧಕಾದೇಶ ಮಾಡಬೇಕು ಎಂದು ಅಸಲು ದಾವೆ ಸಲ್ಲಿಸಿದ್ದು, ತಾತ್ಕಾಲಿಕ ಪ್ರತಿಬಂಧಕಾದೇಶ ಹೊರಡಿಸುವಂತೆ ಮಧ್ಯಂತರ ಮನವಿ ಮಾಡಿದ್ದರು. ಈ ಮನವಿಯನ್ನು 30ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಎನ್‌.ಆರ್‌. ಮಧು ಅವರು ಪುರಸ್ಕರಿಸಿದ್ದಾರೆ.

ಸ್ವಾಮೀಜಿ ಅವರ ದಾವೆಯಲ್ಲಿ ಸಂಯುಕ್ತ ಕರ್ನಾಟಕ ದಿನಪತ್ರಿಕೆ, ಗ್ಯಾರಂಟಿ ಸುದ್ದಿ ವಾಹಿನಿ, ಸೌಖ್ಯಾ ಗಾಂವ್ಕರ್‌, ವಿಜಯವಾಹಿನಿ ನ್ಯೂಸ್‌, ಮೆಟಾ ಮತ್ತು ಯೂಟ್ಯೂಬ್‌ಗಳನ್ನು ಪ್ರತಿವಾದಿಗಳನ್ನಾಗಿಸಲಾಗಿದೆ.

ಕೋರ್ಟ್ ಆದೇಶವೇನು?
ಸ್ವಾಮೀಜಿಯ ಹೆಸರು ಉಲ್ಲೇಖಿಸದೇ ಸಂಯುಕ್ತ ಕರ್ನಾಟಕ ಪತ್ರಿಕೆಯು ವರದಿ ಪ್ರಕಟಿಸಿದೆ ಎಂಬುದು ದಾಖಲೆಗಳಿಂದ ತಿಳಿಯುತ್ತದೆ. ಆಕ್ಷೇಪಾರ್ಹ ಸುದ್ದಿಯಲ್ಲಿ ಸ್ವಾಮೀಜಿಯವರತ್ತ ಬೆರಳು ಮಾಡಲಾಗಿದೆ. ಈ ದೃಷ್ಟಿಯಿಂದ ಸ್ವಾಮೀಜಿಯವರು ತಾತ್ಕಾಲಿಕ ಪ್ರತಿಬಂಧಕಾದೇಶ ಪಡೆಯುವ ಆಧಾರವನ್ನು ಸಾಬೀತುಪಡಿಸಿದ್ದಾರೆ. ಅವರ ಘನತೆಗೆ ಮತ್ತಷ್ಟು ಹಾನಿಯಾಗುವುದನ್ನು ತಪ್ಪಿಸುವ ದೃಷ್ಟಿಯಿಂದ ಮುಂದಿನ ವಿಚಾರಣೆವರೆಗೆ ಏಕಪಕ್ಷೀಯ ಪ್ರತಿಬಂಧಕಾದೇಶ ಮಾಡುವುದು ಸೂಕ್ತ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದೆ.

ಏಕಪಕ್ಷೀಯ ತಡೆ ಆದೇಶ ಮಾಡದೇ ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿದರೆ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡುವ ಉದ್ದೇಶವೇ ನಿಷ್ಫಲವಾಗಲಿದೆ. ಆದ್ದರಿಂದ, ಪ್ರತಿವಾದಿಗಳು, ಅವರ ಬೆಂಬಲಿಗರು, ಏಜೆಂಟ್‌ಗಳು, ಸೇವಕರು, ನೇಮಕ ಮಾಡಿಕೊಂಡಿರುವವರು, ಅಟಾರ್ನಿಗಳು ಮತ್ತು ಅವರ ಸೂಚನೆಯಂತೆ ನಡೆದುಕೊಳ್ಳುವ ಎಲ್ಲರೂ ಸ್ವಾಮೀಜಿ ವಿರುದ್ಧ ಯಾವುದೇ ರೀತಿಯ ಮಾನಹಾನಿ ಸುದ್ದಿ ಪ್ರಕಟ, ಪ್ರಸಾರ, ಹಂಚಿಕೆ ಮಾಡಬಾರದು ಎಂದು ಏಕಪಕ್ಷೀಯ ಪ್ರತಿಬಂಧಕಾದೇಶ ಮಾಡಲಾಗಿದೆ ಎಂದು ಆದೇಶಿಸಿರುವ ನ್ಯಾಯಾಲಯ, ಎಲ್ಲ ಪ್ರತಿವಾದಿಗಳಿಗೆ ಸಮನ್ಸ್‌ ಜಾರಿ ಮಾಡಿ ವಿಚಾರಣೆಯನ್ನು ಏಪ್ರಿಲ್‌ 27ಕ್ಕೆ ಮುಂದೂಡಿದೆ.

ಸಂಯುಕ್ತ ಕರ್ನಾಟಕ ಪತ್ರಿಕೆಯು ಸ್ವಾಮೀಜಿ ಅನೈತಿಕ ಮತ್ತು ಅಕ್ರಮವಾಗಿ ನಡೆದುಕೊಂಡಿದ್ದಾರೆ ಎಂಬ ಸುದ್ದಿ ಪ್ರಕಟಿಸಿದೆ ಎಂದು ಅಫಿಡವಿಟ್‌ ಜತೆ ಸಲ್ಲಿಸಿರುವ ದಾಖಲೆಯಲ್ಲಿ ವಿವರಿಸಲಾಗಿದೆ. ಇದಕ್ಕೂ ಮುನ್ನ ಪತ್ರಿಕೆಯು ಸುದ್ದಿಯ ನಿಖರತೆಯನ್ನು ಖಾತ್ರಿಪಡಿಸಿಲ್ಲ. ಆದ್ದರಿಂದ, ಮಧ್ಯಂತರ ಅರ್ಜಿ ಪುರಸ್ಕರಿಸಬೇಕು ಎಂದು ಸ್ವಾಮೀಜಿ ಕೋರಿದ್ದಾರೆ ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.

ಪ್ರಕರಣದ ಹಿನ್ನೆಲೆ:
ಮಹಿಳೆಯೊಬ್ಬರ ಜತೆಗಿನ ಸಲುಗೆಯನ್ನು ದುರ್ಬಳಕೆ ಮಾಡಿಕೊಂಡು ಆಕೆಯ ಮೇಲೆ ದೌರ್ಜನ್ಯ ಎಸಗಿದ ಆರೋಪ ಸ್ವಾಮೀಜಿ ವಿರುದ್ಧ ಕೇಳಿಬಂದಿದೆ. ಈ ಸಂಬಂಧ ಸಂತ್ರಸ್ತೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನ್ಯಾಯ ಕೊಡಿಸುವಂತೆ ಕೋರಿ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ, ಸ್ವಾಮೀಜಿ ಅವರು ವಿಜಯಪುರ ಸಮೀಪದ ಕಗ್ಗೋಡ ಗ್ರಾಮದ ಬಳಿ ಬೆಂಗಳೂರಿನ ಮಹಿಳೆಯೊಬ್ಬರು ತಮ್ಮ ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾಳೆ ಮತ್ತು 3 ಕೋಟಿ ರೂ. ಬೇಡಿಕೆ ಇಟ್ಟಿದ್ದಾಳೆ ಎಂದು ಮಹಿಳೆ ಮತ್ತು ಇತರ ಮೂವರ ವಿರುದ್ಧ ವಿಜಯಪುರ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.

Related Articles

Comments (0)

Leave a Comment