ದೇವಿಕಾರಾಣಿ-ರೋರಿಚ್ ಎಸ್ಟೇಟ್‌ನಲ್ಲಿ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಹಬ್ ಯೋಜನೆ ಪ್ರಶ್ನಿಸಿ ಪಿಐಎಲ್

ಬೆಂಗಳೂರು: ಕನಕಪುರ ರಸ್ತೆಯ ತಾತಗುಣಿಯಲ್ಲಿರುವ ನಟಿ ದೇವಿಕಾ ರಾಣಿ ಮತ್ತು ರಷ್ಯಾದ ಪ್ರಖ್ಯಾತ ಕಲಾವಿದ ಸ್ವೆಟೋಸ್ಲಾವ್ ರೋರಿಚ್ ಮಾಲೀಕತ್ವಕ್ಕೆ ಒಳಪಟ್ಟಿದ್ದ ಎಸ್ಟೇಟ್‌ನಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಚಟುವಟಿಕೆ ನಡೆಯದಂತೆ ಖಾತ್ರಿಪಡಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಐ ಕೇರ್‌ ಟ್ರಸ್ಟ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ಕೇಂದ್ರ ಸರ್ಕಾರದ ಪರ ಉಪ ಸಾಲಿಸಿಟರ್‌ ಜನರಲ್‌ ಎಚ್‌. ಶಾಂತಿಭೂಷಣ್‌ ಅವರು, ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾವ ಸ್ವೀಕರಿಸಿಲ್ಲ. ಈ ಹಂತದಲ್ಲಿ ಆಕ್ಷೇಪಾರ್ಹ ಯೋಜನೆಯನ್ನು ಜಾರಿಗೊಳಿಸಲಾಗದು ಎಂದರು. ರಾಜ್ಯ ಸರ್ಕಾರದ ಪರ ವಕೀಲೆ ನಿಲೋಫರ್‌ ಅಕ್ಬರ್‌ ಅವರು, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು.

ಇದನ್ನು ಪರಿಗಣಿಸಿದ ನ್ಯಾಯಪೀಠ, ವಿವಾದಿತ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ನಡೆಯದು ಎಂಬುದನ್ನು ಖಾತ್ರಿಪಡಿಸುವಂತೆ ಸರ್ಕಾರಗಳಿಗೆ ನಿರ್ದೇಶಿಸಿ, ವಿಚಾರಣೆಯನ್ನು ಫೆಬ್ರವರಿ 16ಕ್ಕೆ ಮುಂದೂಡಿತು.

ದೇವಿಕಾ ರಾಣಿ ಮತ್ತು ರಷ್ಯಾದ ರೋರಿಚ್‌ ಅವರು ಪ್ರೀತಿಸಿ ವಿವಾಹವಾಗಿದ್ದರು. ಅವರ ಮರಣದ ಬಳಿಕ ಆ ಆಸ್ತಿಯು ವ್ಯಾಜ್ಯಕ್ಕೆ ನಾಂದಿಯಾಗಿತ್ತು. ಅಂತಿಮವಾಗಿ ರಾಜ್ಯ ಸರ್ಕಾರ ರೋರಿಚ್‌ ಮತ್ತು ದೇವಿಕಾ ರಾಣಿ ರೋರಿಚ್‌ ಎಸ್ಟೇಟ್‌ (ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆ 1996 ರೂಪಿಸಿ, ಅದನ್ನು ರಕ್ಷಿಸಿತ್ತು.

ಅರ್ಜಿದಾರರ ಆಕ್ಷೇಪವೇನು?
ಸ್ವೆಟೋಸ್ಲಾವ್ ರೋರಿಚ್ ಎಸ್ಟೇಟ್‌ನಲ್ಲಿ ಪರಿಸರ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಹಬ್‌ ಯೋಜನೆಗೆ ಅನುಮತಿಸಿ 2024ರ ಡಿಸೆಂಬರ್‌ 24ರಂದು ಹೊರಡಿಸಿರುವ ಅಧಿಸೂಚನೆಯನ್ನು ಪ್ರಶ್ನಿಸಿರುವ ಅರ್ಜಿದಾರರು, ಸುಮಾರು 450 ಕಾರುಗಳ ನಿಲುಗಡೆ ಮಾಡಲು ಸ್ಥಳ ನೀಡಲಾಗುತ್ತಿದೆ. ಸಾವಿರಾರು ಜನರು ಎಸ್ಟೇಟ್‌ಗೆ ಭೇಟಿ ನೀಡಲಿದ್ದಾರೆ. ಆನೆ ಕಾರಿಡಾರ್‌ ಹೊಂದಿರುವ ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಗೆ ಬರುವ ಎಸ್ಟೇಟ್‌ನ ಪರಿಸರಕ್ಕೆ ಹಾನಿಯಾಗಲಿದೆ ಎಂದು ಆಕ್ಷೇಪಿಸಿದ್ದಾರೆ.

ಎಸ್ಟೇಟ್‌ ಅನ್ನು ಪಾರಂಪರಿಕ ಜೀವವೈಧ್ಯತೆಯ ತಾಣ ಅಥವಾ ಬಾಕಿ ಇರುವ ಎಸ್ಟೇಟ್‌ ಅನ್ನು ಮೀಸಲು ಸಂರಕ್ಷಿತ ಪ್ರದೇಶವನ್ನಾಗಿ ಕಾಪಾಡಲು ರೋರಿಚ್‌ ಮಂಡಳಿಗೆ ನಿರ್ದೇಶಿಸಬೇಕು. ಎಸ್ಟೇಟ್‌ನಲ್ಲಿರುವ ಪರಿಸರ, ವನ್ಯಜೀವಿಗಳ ವೈಜ್ಞಾನಿಕ ಪ್ರೊಫೈಲಿಂಗ್‌ ಮಾಡಲು ಮಂಡಳಿಗೆ ನಿರ್ದೇಶಿಸಬೇಕು ಹಾಗೂ ಎಸ್ಟೇಟ್‌ ಅನ್ನು ವಶಪಡಿಸಿಕೊಳ್ಳುವುದರ ಹಿಂದಿನ ಉದ್ದೇಶದ ಕುರಿತು ಯೋಜನೆ ರೂಪಿಸಲು ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Related Articles

Comments (0)

Leave a Comment