ಮೂಕಾಂಬಿಕಾ ದೇಗುಲದಲ್ಲಿ ಅನ್ಯ ಅರ್ಚಕರಿಗೂ ಹೋಮ-ಹವನ‌ ನಡೆಸಲು ಅವಕಾಶ; ವಂಶ ಪಾರಂಪರಿಕ ಅರ್ಚಕರಿಂದ ಹೈಕೋರ್ಟ್‌ಗೆ ರಿಟ್

ಬೆಂಗಳೂರು: ಕೊಲ್ಲೂರು ಮೂಕಾಂಬಿಕಾ ದೇವಾಲಯದ ಆವರಣದಲ್ಲಿ ವಂಶ ಪಾರಂಪರಿಕ ಅರ್ಚಕರನ್ನು ಹೊರತು ಪಡಿಸಿ ಅನ್ಯ ಅರ್ಚಕರಿಗೂ ಹೋಮ ಹವನ ನಡೆಸಲು ಅವಕಾಶ ಮಾಡಿಕೊಟ್ಟಿರಿರುವ ದೇಗುಲದ ಆಡಳಿತ ಮಂಡಳಿಯ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಮುಜರಾಯಿ ಇಲಾಖೆಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ದೇಗುಲದ ವ್ಯವಸ್ಥಾಪನಾ ಸಮಿತಿಯು ಕಳೆದ ಸೆಪ್ಟೆಂಬರ್‌ನಲ್ಲಿ ನಿರ್ಣಯವೊಂದನ್ನು ತೆಗೆದುಕೊಂಡು ಕಾರ್ಯನಿರ್ವಾಹಕ ಅಧಿಕಾರಿ ಅವರ ವಿವೇಚಣೆಯಂತೆ ಕ್ಷೇತ್ರದಲ್ಲಿ ಅರ್ಚಕರು, ಉಪಾಧಿವಂತ ಕ್ಷೇತ್ರ ಪುರೋಹಿತರಿಗೆ ಚಂಡಿಕಾ ಹೋಮ ನಡೆಸಲು ಅವಕಾಶ ಕಲ್ಪಿಸಿತ್ತು. ಇದನ್ನು ಪ್ರಶ್ನಿಸಿ ಅನುವಂಶಿಕ ಅರ್ಚಕರಾದ ಕೆ. ವಿಘ್ನೇಶ್ವರ ಅಡಿಗ, ಕೆ.ಎನ್. ಸುಬ್ರಹ್ಮಣ್ಯ ಅಡಿಗ, ಕೆ. ನಿತ್ಯಾನಂದ ಅಡಿಗ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ದೇವಾಲಯದ ವ್ಯವಸ್ಥಾಪನಾ ಮಂಡಳಿ, ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಮುಜುರಾಯಿ ಇಲಾಖೆಗೆ ನೋಟಿಸ್ ಜಾರಿಗೊಳಿಸಿತು. ಜತೆಗೆ, ದೇಗುಲದಲ್ಲಿ ಹೋಮ ಹವನ ಮಾಡಿದ ಅರ್ಚಕರನ್ನೂ ಪ್ರತಿವಾದಿಗಳನ್ನಾಗಿಸುವಂತೆ ಅರ್ಜಿದಾರರಿಗೆ ಸೂಚಿಸಿತು. ನ್ಯಾಯಾಲಯ ಒಂದು ಹಂತದಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರ ಆದೇಶದಕ್ಕೆ ತಡೆ ನೀಡಲು ಮುಂದಾಗಿತ್ತಾದರೂ, ಇತರ ಅರ್ಚಕರನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿ ಮಾಡದಿರುವುದನ್ನು ಗಮನಿಸಿ, ತಡೆಯಾಜ್ಞೆ ನೀಡಲು ನಿರಾಕರಿಸಿ ವಿಚಾರಣೆಯನ್ನು ಮುಂದೂಡಿತು.

ಅರ್ಜಿಯಲ್ಲೇನಿದೆ?
2001ರ ಫೆಬ್ರವರಿಯಲ್ಲಿ ವ್ಯವಸ್ಥಾಪನಾ ಸಮಿತಿಯು ಆನುವಂಶಿಕ ಅರ್ಚಕರ ಅಹವಾಲು ಕೇಳದೆಯೇ ಹೋಮಗಳನ್ನು ನಡೆಸುವ ಬಗ್ಗೆ ನಿರ್ಣಯವೊಂದನ್ನು ಅಂಗೀಕರಿಸಿತು. ಆದರೆ ಇದನ್ನು ಪ್ರಶ್ನಿಸಿ ಅರ್ಚಕರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದಾಗ 2001ರ ಡಿಸೆಂಬರ್‌ನಲ್ಲಿ ಅರ್ಚಕರ ವಾದವನ್ನು ಆಲಿಸಿ ಹೊಸ ಆದೇಶ ಹೊರಡಿಸುವಂತೆ ಸಮಿತಿಗೆ ಸೂಚಿಸಿತು. 2002ರ ಸೆಪ್ಟೆಂಬರ್‌ನಲ್ಲಿ ಚಂಡಿಕಾ ಹೋಮದಂತಹ ಪ್ರಮುಖ ಹೋಮಗಳನ್ನು ದೇವಸ್ಥಾನದ ತಂತ್ರಿಗಳು ಮತ್ತು ಇತರ ಅರ್ಚಕರು ಮಾತ್ರ ನೆರವೇರಿಸಬೇಕು ಎಂದು ಸಮಿತಿಯು ನಿರ್ಣಯಿಸಿತು. ಅಲ್ಲದೆ, ದೇವಸ್ಥಾನದ ಆವರಣದಲ್ಲಿ ಹೋಮ ನಡೆಸಲು ಮೂರನೇ ವ್ಯಕ್ತಿಗಳು ಭಕ್ತರನ್ನು ಸಂಪರ್ಕಿಸಬಾರದು ಎಂದು ತೀರ್ಮಾನಿಸಲಾಗಿತ್ತು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಆದರೆ, ಇತ್ತೀಚಿನ ದಿನಗಳಲ್ಲಿ ಅನಧಿಕೃತ ವ್ಯಕ್ತಿಗಳು ಅರ್ಚಕರನ್ನು ಸಂಪರ್ಕಿಸದೆಯೇ ಹೋಮ ಮತ್ತು ಇತರ ಆಚರಣೆಗಳನ್ನು ನಡೆಸಲು ಭಕ್ತರನ್ನು ಸಂಪರ್ಕಿಸುತ್ತಿದ್ದಾರೆ ಎಂದು ಅನುವಂಶಿಕ ಅರ್ಚಕರು 2023ರಲ್ಲಿ ಎರಡು ಬಾರಿ ಜಿಲ್ಲಾಧಿಕಾರಿ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ, ಅದನ್ನು ಪರಿಗಣಿಸಲಾಗಿಲ್ಲ. ಕಳೆದ ಸೆಪ್ಟೆಂಬರ್‌ನಲ್ಲಿ ವ್ಯವಸ್ಥಾಪನಾ ಸಮಿತಿಯು ಕಾರ್ಯನಿರ್ವಾಹಕ ಅಧಿಕಾರಿಗೆ ತಮ್ಮ ಇಚ್ಛೆಯಂತೆ ಇತರ ವ್ಯಕ್ತಿಗಳಿಗೆ ಹೋಮ ನಡೆಸಲು ಅನುಮತಿ ನೀಡುವ ಅಧಿಕಾರವನ್ನು ನೀಡಿದೆ. ಅದರಂತೆ ನವೆಂಬರ್‌ನಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ಚಂಡಿಕಾ ಹೋಮವನ್ನು ಅರ್ಜಿದಾರರೊಂದಿಗೆ ಇತರ ವ್ಯಕ್ತಿಗಳೂ (ಆನುವಂಶಿಕರಲ್ಲದವರು) ನಡೆಸುವಂತೆ ಆದೇಶ ಹೊರಡಿಸಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಕಾರ್ಯನಿರ್ವಾಹಕ ಅಧಿಕಾರಿಗಳ ಆದೇಶದಿಂದ ‘ಕರ್ನಾಟಕ ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ’ಯ ಉಲ್ಲಂಘನೆಯಾಗಲಿದೆ. ಕಾಯ್ದೆಯ ಪ್ರಕಾರ ಅಧಿಕಾರಿಗಳು ದೇವಸ್ಥಾನದ ಒಪ್ಪಿತ ಸಂಪ್ರದಾಯಗಳು ಮತ್ತು ಆಚರಣೆಗಳಲ್ಲಿ ಹಸ್ತಕ್ಷೇಪ ಮಾಡಬಾರದು. ವ್ಯವಸ್ಥಾಪನಾ ಸಮಿತಿಯು ಕಾನೂನಿನ ಮಾನ್ಯತೆಯಿಲ್ಲದೆ ಕಾರ್ಯನಿರ್ವಾಹಕ ಅಧಿಕಾರಿಗೆ ಅಧಿಕಾರವನ್ನು ಹಸ್ತಾಂತರಿಸಿದೆ. ‘ಕ್ಷೇತ್ರ ಪುರೋಹಿತರು’ ಸೇವಾ ನೋಂದಣಿಯಲ್ಲಿ ಅರ್ಚಕರೆಂದು ಗುರುತಿಸಲ್ಪಟ್ಟಿಲ್ಲ. ಆದರೂ ಅವರಿಗೆ ಪೂಜೆ ಮಾಡಲು ಅವಕಾಶ ನೀಡಲಾಗುತ್ತಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

Related Articles

Comments (0)

Leave a Comment