ತೃತೀಯ ಲಿಂಗಿಗಳ ಸಮೀಕ್ಷೆ; ಸ್ಟ್ರಿಪ್ ಆ್ಯಂಡ್ ಸರ್ಚ್ ವಿಧಾನಕ್ಕೆ ಹೈಕೋರ್ಟ್ ತಡೆಯಾಜ್ಞೆ
- by Jagan Ramesh
- October 15, 2025
- 153 Views

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ರಾಜ್ಯದಲ್ಲಿ ಸೆಪ್ಟೆಂಬರ್ 15ರಿಂದ ಆರಂಭಿಸಲಾಗಿರುವ ತೃತೀಯ ಲಿಂಗಿಗಳ ಸಮೀಕ್ಷೆಯ ವೇಳೆ ತೃತೀಯ ಲಿಂಗಿಗಳ ಲಿಂಗ ಪತ್ತೆಗೆ ನಡೆಸಲಾಗುವ ಸ್ಟ್ರಿಪ್ ಆ್ಯಂಡ್ ಸರ್ಚ್ (ಬಟ್ಟೆ ತೆಗೆಸಿ, ಶೋಧಿಸುವ) ವಿಧಾನಕ್ಕೆ ಹೈಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ.
ತೃತೀಯ ಲಿಂಗಿಗಳ ಲಿಂಗ ಗುರುತು, ವೈದ್ಯಕೀಯ ಮತ್ತು ಸಾಮಾಜಿಕ ಮಾಹಿತಿ ಸಂಗ್ರಹಿಸುತ್ತಿರುವ ಸಮೀಕ್ಷೆಯನ್ನು ಪ್ರಶ್ನಿಸಿ ಅನಿತಾ ಹ್ಯುಮ್ಯಾನಿಟೇರಿಯನ್ ಟ್ರಸ್ಟ್ನ ಸಂಸ್ಥಾಪಕಿ ಡಾ. ಅನಿತಾ ಪ್ರಸಾದ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿತು.
ತೃತೀಯ ಲಿಂಗಿಗಳಿಗೆ ಸಂಬಂಧಿಸಿದಂತೆ ನಡೆಸುವ ಯಾವುದೇ ಸಮೀಕ್ಷೆಯನ್ನು ಕಡ್ಡಾಯವಾಗಿ ಗೌಪ್ಯವಾಗಿಡಬೇಕು. ಸಂಗ್ರಹಿಸಿದ ಮಾಹಿತಿಯನ್ನು ಹೇಗೆ ಗೌಪ್ಯತೆಯಿಂದ ಸಂರಕ್ಷಿಸಲಾಗುತ್ತದೆ ಎಂಬ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕರು 3 ದಿನಗಳಲ್ಲಿ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಬೇಕು. ತೃತೀಯ ಲಿಂಗಿಗಳು ಸ್ವಯಂಪ್ರೇರಿತವಾಗಿ ಸಮೀಕ್ಷೆಯಲ್ಲಿ ಭಾಗವಹಿಸುವುದನ್ನು ಸರ್ಕಾರ ಮತ್ತು ಸಂಬಂಧಿತರು ಖಾತ್ರಿಪಡಿಸಬೇಕು. ಯಾರನ್ನೂ ಕರೆದು ಬಟ್ಟೆ ತೆಗೆಸಿ ಶೋಧಿಸಿ, ಗುರುತು ಪತ್ತೆ ಮಾಡಿ ಸಮೀಕ್ಷೆ ಮಾಡುವಂತಿಲ್ಲ ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಅರ್ಜಿ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ತೃತೀಯ ಲಿಂಗಿಗಳ ರಾಷ್ಟ್ರೀಯ ಮಂಡಳಿ ಹಾಗೂ ಭಾರತ ಜನಗಣತಿ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಪೀಠ, ವಿಚಾರಣೆಯನ್ನು ಡಿಸೆಂಬರ್ 5ಕ್ಕೆ ಮುಂದೂಡಿತು.
ಅರ್ಜಿದಾರರ ವಾದವೇನು?
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ತೃತೀಯ ಲಿಂಗಿಗಳ ಖಾಸಗಿತನವನ್ನು ಉಲ್ಲಂಘಿಸಿ ಸರ್ಕಾರ ಸಮೀಕ್ಷೆ ನಡೆಸುತ್ತಿದೆ. ಬಟ್ಟೆ ತೆಗೆಸಿ ಶೋಧಿಸಿ, ಗುರುತು ಪತ್ತೆ ಮಾಡುತ್ತಿರುವ ಸಮೀಕ್ಷೆಗೆ ತಡೆ ನೀಡಬೇಕು. ಇಲ್ಲಿಯವರೆಗೆ ಸಂಗ್ರಹಿಸಿರುವ ದತ್ತಾಂಶವನ್ನು ಗೌಪ್ಯವಾಗಿ ಇಡಲು ನಿರ್ದೇಶಿಸಬೇಕು ಎಂದು ಕೋರಿದರು.
ರಾಜ್ಯ ಸರ್ಕಾರದ ಪರ ಹಾಜರಿದ್ದ ವಕೀಲೆ ನಿಲೋಫರ್ ಅಕ್ಬರ್, ಸರ್ಕಾರದ ಪರವಾಗಿ ನೋಟಿಸ್ ಪಡೆದು, ಆಕ್ಷೇಪಣೆ ಸಲ್ಲಿಕೆ ಮಾಡಲಾಗುವುದು. ಸೆಪ್ಟೆಂಬರ್ 15ರಿಂದ ಸಮೀಕ್ಷೆ ಆರಂಭವಾಗಿದೆ. ಒಂದು ತಿಂಗಳಿಂದ ಸಮೀಕ್ಷೆ ನಡೆಯುತ್ತಿದ್ದು, ಯಾರೂ ಈ ಅಹವಾಲು ಎತ್ತಿಲ್ಲ. ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ಪ್ರಕರಣವನ್ನು ನ್ಯಾಯಾಲಯ ಡಿಸೆಂಬರ್ 5ಕ್ಕೆ ವಿಚಾರಣೆಗೆ ನಿಗದಿಪಡಿಸಿದೆ. ಅಂದೇ ಈ ಅರ್ಜಿಯನ್ನೂ ವಿಚಾರಣೆ ನಡೆಸಬಹುದು ಎಂದರು.
ಆಗ ನ್ಯಾಯಪೀಠ, ತೃತೀಯ ಲಿಂಗಿಗಳ ಗುರುತು ಪತ್ತೆಗೆ ಬಲವಂತ ಮಾಡುವಂತಿಲ್ಲ. ಆಸ್ಪತ್ರೆಗೆ ಹೋಗಿ ಬಟ್ಟೆ ತೆಗೆಸಿ ಗುರುತು ಪತ್ತೆ ಮಾಡು ವಿಧಾನ ಪಾಲಿಸುವಂತೆ ಸೂಚಿಸಲಾಗುತ್ತಿದೆಯೇ? ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ನಡೆಸುವುದಕ್ಕೆ ಕಾಯ್ದೆ ಇದೆ. ಆದರೆ, ಈ ಸಮೀಕ್ಷೆ ನಡೆಸಲು ಯಾವುದೇ ಕಾನೂನು ಇಲ್ಲ. ಇದನ್ನು ಸರ್ಕಾರ ಮಾಡಬಾರದಲ್ಲವೇ? ಎಂದು ಸರ್ಕಾರದ ವಕೀಲರನ್ನು ಪ್ರಶ್ನಿಸಿತಲ್ಲದೆ, ಅಂತಿಮವಾಗಿ, ಸ್ಟ್ರಿಪ್ ಆ್ಯಂಡ್ ಸರ್ಚ್ ವಿಧಾನಕ್ಕೆ ತಡೆ ನೀಡಿತು.
ಅರ್ಜಿದಾರರ ಮನವಿ:
ಕಾನೂನುಬದ್ಧ, ಪಾರದರ್ಶಕ ಮತ್ತು ಹಕ್ಕು ಆಧಾರಿತವಾಗಿ ಚೌಕಟ್ಟು ರೂಪಿಸಿ ಸಂಬಂಧಿತರೊಂದಿಗೆ ಸಮಾಲೋಚಿಸುವವರೆಗೆ ತೃತೀಯ ಲಿಂಗಿಗಳ ಸಮೀಕ್ಷೆ ನಡೆಸಬಾರದು. ಸಂವಿಧಾನದ ಪರಿಚ್ಛೇದ 14, 15, 19(1)(a), 21ಕ್ಕೆ ವಿರುದ್ಧವಾಗಿ ಖಾಸಗಿತನ ಉಲ್ಲಂಘಿಸಿ ನಡೆಸುತ್ತಿರುವ ಸಮೀಕ್ಷೆಯನ್ನು ಅಸಾಂವಿಧಾನಿಕ ಮತ್ತು ಸ್ವೇಚ್ಛೆಯ ಕ್ರಮ ಎಂದು ಘೋಷಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಸಾಮಾಜಿಕ ನ್ಯಾಯ ತಜ್ಞರು, ಸಮುದಾಯದ ಮುಖಂಡರು ಮತ್ತು ಶಾಸನಬದ್ಧ ಸಂಸ್ಥೆಯಾದ ತೃತೀಯ ಲಿಂಗಿಗಳ ರಾಷ್ಟ್ರೀಯ ಮಂಡಳಿ ಜತೆ ಸಮಾಲೋಚಿಸಿ, ತೃತೀಯ ಲಿಂಗಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ ಮತ್ತು ನಿಯಮಕ್ಕೆ ಪೂರಕವಾಗಿ ಹೊಸದಾಗಿ ದತ್ತಾಂಶ ಸಂಗ್ರಹ ಅಥವಾ ನೀತಿ ರೂಪಿಸಲು ಪ್ರತಿವಾದಿಗಳಿಗೆ ನಿರ್ದೇಶಿಸಬೇಕು. ಈಗ ಆಕ್ಷೇಪಾರ್ಹ ಸ್ಟ್ರಿಪ್ ಆ್ಯಂಡ್ ಸರ್ಚ್ ವಿಧಾನದಿಂದ ಸಂಗ್ರಹಿಸಿರುವ ದತ್ತಾಂಶ ನಾಶಪಡಿಸಲು ನಿರ್ದೇಶಿಸಬೇಕು. ಲಿಂಗತ್ವ ಗುರುತು ದತ್ತಾಂಶ, ಖಾಸಗಿತನ ಮತ್ತು ತೃತೀಯ ಲಿಂಗಿಗಳ ಘನತೆಗೆ ಪೂರಕವಾಗಿ ಸಮಗ್ರವಾದ ಮಾರ್ಗಸೂಚಿಗಳನ್ನು ರೂಪಿಸಲು ಪ್ರತಿವಾದಿಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.
Related Articles
Thank you for your comment. It is awaiting moderation.
Comments (0)