ಆರ್ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ; ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಹೈಕೋರ್ಟ್
- by Jagan Ramesh
- June 5, 2025
- 73 Views

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ವಿಜಯೋತ್ಸವ ಆಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟ ದುರ್ಘಟನೆ ಸಂಬಂಧ ಹೈಕೋರ್ಟ್ ಗುರುವಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
ಪ್ರಕರಣ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠ, ದುರಂತಕ್ಕೆ ಕಾರಣ ಹಾಗೂ ಭವಿಷ್ಯದಲ್ಲಿ ಇಂಥ ಅವಘಡಗಳು ಮರುಕಳಿಸದಂತೆ ತಡೆಯಲು ಕಂಡುಕೊಳ್ಳಬಹುದಾದ ಕ್ರಮಗಳ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.
ಗುರುವಾರ ಬೆಳಗಿನ ಕಲಾಪದ ವೇಳೆ ಘಟನೆ ಕುರಿತು ನ್ಯಾಯಪೀಠದ ಮುಂದೆ ಉಲ್ಲೇಖಿಸಲಾಗಿತ್ತು. ಆಗ ನ್ಯಾಯಾಲಯ ಮಧ್ಯಾಹ್ನ ವಿಚಾರಣೆ ನಡೆಸುವುದಾಗಿ ತಿಳಿಸಿತ್ತು. ಇದೇ ವೇಳೆ, ಘಟನೆಯ ನಂತರ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಕುರಿತ ವಿವರ ಸಲ್ಲಿಸುವುದಾಗಿ ರಾಜ್ಯ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ನ್ಯಾಯಪೀಠಕ್ಕೆ ತಿಳಿಸಿದ್ದರು. ಮಧ್ಯಾಹ್ನ ವಿಚಾರಣೆ ಆರಂಭವಾದಾಗ, ಇದೇ ವಿಚಾರವಾಗಿ ಪಿಐಎಲ್ ಸಲ್ಲಿಸಿದ್ದವರ ಪರ ವಕೀಲರು ದುರಂತದ ಬಗ್ಗೆ ಸ್ವತಂತ್ರ ತನಿಖೆಗೆ ಆದೇಶಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು.
ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಆರ್ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ 11 ಜನರು ಮೃತಪಟ್ಟು, 75 ಜನರ ಗಾಯಗೊಂಡ ದುರಂತದ ಕುರಿತು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವ ವರದಿಗಳನ್ನು ಗಮನಿಸಲಾಗಿದೆ. ಘಟನೆಗೆ ಕಾರಣ ಹಾಗೂ ಭವಿಷ್ಯದಲ್ಲಿ ಇಂಥ ದುರ್ಘಟನೆ ಸಂಭವಿಸದಂತೆ ತಡೆಯಲು ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಕರಣದ ಸಂಬಂಧ ಸ್ವಯಂಪ್ರೇರಿತ ರಿಟ್ ಅರ್ಜಿ ದಾಖಲಿಸಿಕೊಳ್ಳಲಾಗುವುದು ಎಂದು ತಿಳಿಸಿತು. ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದ ಪೀಠ, ಘಟನೆ ಕುರಿತು ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿ, ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿತು.
ಕೋರ್ಟ್ಗೆ ಮಾಹಿತಿ ಒದಗಿಸಿದ ಎಜಿ:
ಮಧ್ಯಾಹ್ನ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಾಗ ಎಜಿ ಶಶಿಕಿರಣ್ ಶೆಟ್ಟಿ ಅವರು, ಘಟನೆ ಹಾಗೂ ಕಾರ್ಯಕ್ರಮದ ಸಮಯದಲ್ಲಿ ನಿಯೋಜಿಸಲಾದ ಪೊಲೀಸ್ ಸಿಬ್ಬಂದಿ ಕುರಿತು ವಿವರಗಳನ್ನು ನೀಡಿದರು. ಪೊಲೀಸ್ ಆಯುಕ್ತರು, ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ 1,318 ಸಿಬ್ಬಂದಿ ಸೇರಿ ಒಟ್ಟು 1,483 ಅಧಿಕಾರಿಗಳು ಸ್ಥಳದಲ್ಲಿದ್ದರು. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ 2.5 ಲಕ್ಷಕ್ಕೂ ಅಧಿಕ ಜನರು ಜಮಾಯಿಸಿದ್ದರು ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.
ಘಟನೆಯಲ್ಲಿ 5 ಮಹಿಳೆಯರು ಹಾಗೂ 6 ಪುರುಷರು ಸೇರಿ ಒಟ್ಟು 11 ಮಂದಿ ಮೃತರಾಗಿದ್ದಾರೆ. ಗಾಯಗೊಂಡವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯದ ಮಾಹಿತಿಯ ಪ್ರಕಾರ ಆಸ್ಪತ್ರೆಯಲ್ಲಿರುವ 6 ಮಂದಿ ಇಂದು ಬಿಡುಗಡೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಕೋಲಾರ, ಯಾದಗಿರಿ, ತುಮಕೂರಿನಿಂದಲೂ ಜನ ಕಾರ್ಯಕ್ರಮಕ್ಕೆ ಬಂದಿದ್ದರು ಎಂದು ಎಜಿ ನ್ಯಾಯಾಲಯಕ್ಕೆ ವಿವರಿಸಿದರು.
ಎಸ್ಒಪಿ ರೂಪಿಸಲಾಗಿದೆಯೇ?
ಆಗ ನ್ಯಾಯಪೀಠ, ಭವಿಷ್ಯದಲ್ಲಿ ಈ ರೀತಿಯ ದುರ್ಘಟನೆ ಸಂಭವಿಸಿದರೆ ಅದರ ನಿರ್ವಹಣೆಗಾಗಿ ಯಾವುದಾದರೂ ಪ್ರಮಾಣೀಕೃತ ಕಾರ್ಯವಿಧಾನ (ಎಸ್ಒಪಿ) ಇದೆಯೇ ಎಂದು ಎಜಿ ಅವರನ್ನು ಪ್ರಶ್ನಿಸಿತಲ್ಲದೆ, ಇಂಥ ಘಟನೆ ಸಂಭವಿಸಿದಲ್ಲಿ ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಲಭ್ಯವಾಗುವಂತೆ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸುವುದು, ಸಮೀಪದ ಆಸ್ಪತ್ರೆಗಳ ಮಾಹಿತಿ ಸುಲಭವಾಗಿ ಲಭ್ಯವಿರುವಂತೆ ನೋಡಿಕೊಳ್ಳುವುದು., ಈ ಎಲ್ಲ ಅಂಶಗಳನ್ನೂ ಎಸ್ಒಪಿ ಒಳಗೊಂಡಿರಬೇಕು ಎಂದು ನುಡಿಯಿತು.
ಇದಕ್ಕೆ ಪ್ರತಿಕ್ರಿಯಿಸಿದ ಎಜಿ ಶಶಿಕಿರಣ್ ಶೆಟ್ಟಿ, ರಾಜ್ಯ ಸರ್ಕಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಭವಿಷ್ಯದಲ್ಲಿ ಇಂಥ ಅವಘಡಗಳು ಸಂಭವಿಸದಂತೆ, ಸಂಭವಿಸಿದಲ್ಲಿ ಅವುಗಳನ್ನು ಸಮರ್ಥವಾಗಿ ನಿಭಾಯಿಸಲು ಅಗತ್ಯವಿರುವ ಎಸ್ಒಪಿ ಸಿದ್ಧಪಡಿಸಲಾಗುತ್ತದೆ. ಕಾಲ್ತುಳಿತ ಸಂಭವಿಸಿದಾಗ ಸ್ಥಳದಲ್ಲಿ ಆಂಬುಲೆನ್ಸ್ಗಳನ್ನು ನಿಯೋಜಿಸಲಾಗಿತ್ತಾದರೂ, ಅಂದಾಜು 2.5 ಲಕ್ಷ ಜನ ಸೇರಿದ್ದರಿಂದ ಆಂಬುಲೆನ್ಸ್ಗಳು ಸಾಕಾಗಲಿಲ್ಲ ಎಂದು ತಿಳಿಸಿದರು.
ಮ್ಯಾಜಿಸ್ಟೀರಿಯಲ್ ವಿಚಾರಣೆ:
ಪ್ರಕರಣದ ವಿಚಾರದಲ್ಲಿ ರಾಜ್ಯ ಯಾವುದೇ ಪ್ರತಿಕೂಲ ಧೋರಣೆ ಅನುಸರಿಸುತ್ತಿಲ್ಲ. ಈಗಾಗಲೇ ಪ್ರಕರಣ ಮ್ಯಾಜಿಸ್ಟೀರಿಯಲ್ ವಿಚಾರಣೆಗೆ ಆದೇಶಿಸಲಾಗಿದೆ. ಈ ಬಗೆಯ ವಿಚಾರಣೆ ತ್ವರಿತವಾಗಿ ನಡೆಯುವುದರಿಂದ ಹಾಗೂ 15 ದಿನಗಳಲ್ಲಿ ವರದಿ ಸಲ್ಲಿಸಬಹುದಾದ್ದರಿಂದ ಮ್ಯಾಜಿಸ್ಟೀರಿಯಲ್ ವಿಚಾರಣೆಗೆ ಆದೇಶಿಸಲಾಗಿದೆ ಎಂದು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರಲ್ಲದೆ, ವಿಚಾರಣಾ ಅಧಿಕಾರಿಗೆ ಮಾಹಿತಿ ನೀಡಲು ಸಾರ್ವಜನಿಕರು ಮತ್ತು ಸಾಕ್ಷಿಗಳನ್ನು ಆಹ್ವಾನಿಸಲಾಗಿದೆ. ಎಲ್ಲವನ್ನೂ ನ್ಯಾಯಾಲಯದ ಮುಂದಿಡುತ್ತೇವೆ. ವಿಡಿಯೊ ಚಿತ್ರೀಕರಣ ಮಾಡಲಾಗುವುದು, ಯಾವುದನ್ನೂ ಮರೆಮಾಚುವ ಪ್ರಶ್ನೆಯೇ ಇಲ್ಲ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು.
Related Articles
Thank you for your comment. It is awaiting moderation.
Comments (0)