ಕಬ್ಬಿಗೆ ದರ ನಿಗದಿ ಪ್ರಶ್ನಿಸಿ ಸಕ್ಕರೆ ಕಾರ್ಖಾನೆಗಳಿಂದ ರಿಟ್; ರಾಜ್ಯ ಸರ್ಕಾರದ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ
- by Jagan Ramesh
- December 9, 2025
- 407 Views
ಬೆಂಗಳೂರು: ಪ್ರತಿ ಟನ್ ಕಬ್ಬಿಗೆ 3,300 ರೂ. ದರ ನಿಗದಿಪಡಿಸಿರುವ ರಾಜ್ಯ ಸರ್ಕಾರದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿರುವ ಹೈಕೋರ್ಟ್, ರೈತರು ಇಲ್ಲದಿದ್ದರೆ ಸಕ್ಕರೆ ಕಾರ್ಖಾನೆಗಳೇ ಇರುವುದಿಲ್ಲ. ಎಥನಾಲ್, ವಿದ್ಯುತ್ ಉತ್ಪಾದನೆ ಎಲ್ಲದರಲ್ಲೂ ಹಣ ಮಾಡಲು ಬಯಸುವ ಸಕ್ಕರೆ ಕಾರ್ಖಾನೆಗಳು ಲಾಭವನ್ನು ಮಾತ್ರ ರೈತರ ಜತೆ ಹಂಚಿಕೊಳ್ಳಲು ಒಪ್ಪುವುದಿಲ್ಲ ಎಂದು ತೀಕ್ಷ್ಣವಾಗಿ ನುಡಿದಿದೆ.
ಪ್ರಸಕ್ತ ಸಾಲಿನಲ್ಲಿ ಪ್ರತಿ ಟನ್ ಕಬ್ಬಿಗೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ ನ್ಯಾಯಯುತ ಮತ್ತು ಲಾಭದಾಯಕ ದರಕ್ಕಿಂತಲೂ (ಎಫ್ಆರ್ಪಿ) ಹೆಚ್ಚಿನ ದರ ನಿಗದಿಪಡಿಸಿ ರಾಜ್ಯ ಸರ್ಕಾರ ನವೆಂಬರ್ 8ರಂದು ಹೊರಡಿಸಿರುವ ಅಧಿಸೂಚನೆ ರದ್ದು ಕೋರಿ ಸೌತ್ ಇಂಡಿಯನ್ ಶುಗರ್ ಮಿಲ್ಸ್ ಅಸೋಸಿಯೇಷನ್ಸ್, ಬಿಜೆಪಿ ನಾಯಕ ಮುರುಗೇಶ್ ನಿರಾಣಿ ಒಡೆತನದ ನಿರಾಣಿ ಶುಗರ್ಸ್ ಲಿಮಿಟೆಡ್, ರೇಣುಕಾ ಶುಗರ್ಸ್, ಜೆಮ್ ಶುಗರ್ಸ್, ಕೆಪಿಆರ್ ಶುಗರ್ಸ್ ಆ್ಯಂಡ್ ಅಪರಾಲ್ಸ್ ಲಿಮಿಟೆಡ್ ಹಾಗೂ ಗೋದಾವರಿ ಬಯೋ ರಿಫೈನರೀಸ್ ಲಿಮಿಟೆಡ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಪ್ರಕರಣದಲ್ಲಿ ಮಧ್ಯಂತರ ಪರಿಹಾರವಾಗಿ ಸರ್ಕಾರದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿಲಾಗಿದೆ. ಪಕ್ಷಕಾರರ ವಾದ ಆಲಿಸದೇ ಮಧ್ಯಂತರ ಆದೇಶ ಮಾಡಬಾರದು ಎನ್ನುವುದು ನ್ಯಾಯಾಲಯ ಅಭಿಪ್ರಾಯವಾಗಿದೆ ಎಂದು ತಿಳಿಸಿ, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತಲ್ಲದೆ, ಅರ್ಜಿ ವಿಚಾರಣೆಯನ್ನು ಡಿಸೆಂಬರ್ 17ಕ್ಕೆ ಮುಂದೂಡಿತು.
ವಿಚಾರಣೆಯ ಒಂದು ಹಂತದಲ್ಲಿ ನ್ಯಾಯಪೀಠ, ರೈತರು ಇಲ್ಲದಿದ್ದರೆ ಸಕ್ಕರೆ ಕಾರ್ಖಾನೆಗಳು ಇರುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ರೈತರಿಗೆ ಏನನ್ನೂ ನೀಡಲು ಸಕ್ಕರೆ ಕಾರ್ಖಾನೆಗಳಿಗೆ ಇಷ್ಟವಿಲ್ಲ. ಸಕ್ಕರೆ, ಎಥನಾಲ್ ಉತ್ಪಾದನೆಯಿಂದ ಬರುವ ಹಣವನ್ನು ಪರಿಗಣಿಸಬಾರದು ಎಂದು ಸಕ್ಕರೆ ಕಾರ್ಖಾನೆಗಳು ಹೇಳುತ್ತವೆ. ಎಲ್ಲದರಲ್ಲೂ ಹಣ ಮಾಡುವ ಕಾರ್ಖಾನೆಗಳಿಗೆ ಅದರ ಲಾಭ ಹಂಚಿಕೊಳ್ಳಲು ಮಾತ್ರ ಇಷ್ಟವಿಲ್ಲ ಎಂದು ಕಿಡಿಕಾರಿತು.
ಸಕ್ಕರೆ ಕಾರ್ಖಾನೆಗಳ ವಾದವೇನು?
ಇದಕ್ಕೂ ಮುನ್ನ ಅರ್ಜಿದಾರರ ಪರ ಹಿರಿಯ ವಕೀಲ ಎಚ್.ಎನ್. ಶಶಿಧರ್ ವಾದ ಮಂಡಿಸಿ, ರೈತರ ಒತ್ತಡಕ್ಕೆ ಮಣಿದು ಪ್ರತಿ ಟನ್ ಕಬ್ಬಿಗೆ ಎಫ್ಆರ್ಪಿಗಿಂತ ಹೆಚ್ಚಿನ ದರವನ್ನು ರಾಜ್ಯ ಸರ್ಕಾರ ಘೋಷಿಸಿದೆ. ಇದು ಕೇಂದ್ರ ಸರ್ಕಾರ ನಿಗದಿಪಡಿಸಿರುವ ಎಫ್ಆರ್ಪಿಗಿಂತ ಹೆಚ್ಚಿದೆ. ಸಕ್ಕರೆ ಕಾರ್ಖಾನೆಗಳು ಅತ್ಯಂತ ಹೀನಾಯ ಸ್ಥಿತಿಯಲ್ಲಿವೆ. ಕಾರ್ಖಾನೆಗಳು ಎಫ್ಆರ್ಪಿಯನ್ನೇ ಸರಿಯಾದ ಸಮಯಕ್ಕೆ ಪಾವತಿಸಲಾಗುತ್ತಿಲ್ಲ. ಯಾವುದೇ ಕಾಯ್ದೆಯ ಭಾಗವಾಗಿ ಮುಖ್ಯಮಂತ್ರಿ ಘೋಷಣೆ ಮಾಡಿಲ್ಲ. ಕಬ್ಬು ನುರಿಸುವ ಪ್ರಕ್ರಿಯೆ ಆರಂಭವಾಗಿದ್ದು, ಕೇಂದ್ರ ನಿಗದಿಪಡಿಸಿರುವ ಎಫ್ಆರ್ಪಿ ಪಾವತಿಸಲು ಅವಕಾಶ ಮಾಡಿಕೊಡಬೇಕು ಎಂದು ಕೋರಿದರು.
ಮುಂದುವರಿದು, ಕೇಂದ್ರ ಸರ್ಕಾರ ಎಫ್ಆರ್ಪಿ ನಿಗದಿಪಡಿಸುವಾಗ ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗ (ಸಿಎಸಿಪಿ) ನೇಮಿಸಿತ್ತು. ಎಫ್ಆರ್ಪಿ ಮತ್ತು ರಾಜ್ಯ ಸಲಹಾ ಬೆಲೆ (ಎಸ್ಎಪಿ) ನಡುವಿನ ವ್ಯತ್ಯಾಸದ ಹಣವನ್ನು ರಾಜ್ಯ ಸರ್ಕಾರವೇ ನೇರ ನಗದು ವರ್ಗಾವಣೆ ಮೂಲಕ ರೈತರಿಗೆ ಪಾವತಿಸಿಬೇಕು. ಈ ಮೂಲಕ ಕಾರ್ಖಾನೆಗಳ ಮೇಲೆ ಆಗುವ ಹೊರೆಯನ್ನು ತಪ್ಪಿಸಬೇಕು ಎಂದು ಸಿಎಸಿಪಿ ಹೇಳಿದೆ. ಈಗ ರಾಜ್ಯ ಸರ್ಕಾರ ನಿಗದಿಪಡಿಸಿರುವ ಹಣವನ್ನು ಪಾವತಿಸಬೇಕು. ಇಲ್ಲವಾದಲ್ಲಿ ಇರುವ ದಾಸ್ತಾನನ್ನು ಜಪ್ತಿ ಮಾಡಲಾಗುವುದು ಎಂದು ಕಾರ್ಖಾನೆಗಳ ಮೇಲೆ ಒತ್ತಡ ಹೇರಲಿದೆ. ಎಲ್ಲವನ್ನೂ ಸೇರಿ ಪ್ರತಿ ಟನ್ಗೆ 4,300 ರೂ. ಆಗುತ್ತದೆ. ಈ ಹಣ ಪಾವತಿಸುವುದು ಅತ್ಯಂತ ಕಷ್ಟ. ಎಫ್ಆರ್ಪಿಯೇ 3,550 ಆಗಿದೆ. ಸರ್ಕಾರದ ಅಧಿಸೂಚನೆಯಿಂದ ಪ್ರತಿ ಟನ್ಗೆ 800-900 ರೂ. ಹೆಚ್ಚಳವಾಗಲಿದೆ. ನಾಳೆ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಎದುರಾಗಬಹುದು. ಆದ್ದರಿಂದ, ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶಿಸಬೇಕು ಎಂದು ಮನವಿ ಮಾಡಿದರು.
ಅರ್ಜಿದಾರರ ಮನವಿ:
ಕೇಂದ್ರ ಸರ್ಕಾರ 2025-26ನೇ ಸಾಲಿಗೆ ಪ್ರತಿ ಟನ್ ಕಬ್ಬಿಗೆ ಗರಿಷ್ಠ 3,550 ರೂ. ನಿಗದಿಪಡಿಸಿದೆ. ಆದರೆ, ರಾಜ್ಯ ಸರ್ಕಾರ ಯಾವುದೇ ಕಾನೂನಿನ ಬೆಂಬಲವಿಲ್ಲದೇ ಎಫ್ಆರ್ಪಿ ಮೀರಿ ಕಬ್ಬಿಗೆ ಹೆಚ್ಚುವರಿ ದರ ನಿಗದಿಪಡಿಸಿದೆ. ಆದ್ದರಿಂದ, ಕಬ್ಬಿನ ದರ ಹೆಚ್ಚಿಸಿ ರಾಜ್ಯ ಸರ್ಕಾರ ನವೆಂಬರ್ 8ರಂದು ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು. ಎಫ್ಆರ್ಪಿ ಮೀರಿ ಕಬ್ಬಿಗೆ ಹೆಚ್ಚುವರಿ ದರ ನಿಗದಿಪಡಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಘೋಷಸಿಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
Related Articles
Thank you for your comment. It is awaiting moderation.


Comments (0)