ವಿದ್ಯುತ್ ಸ್ಮಾರ್ಟ್ ಮೀಟರ್ ಟೆಂಡರ್ ಪ್ರಶ್ನಿಸಿ ಅರ್ಜಿ; ಸರ್ಕಾರ, ಬೆಸ್ಕಾಂಗೆ ಹೈಕೋರ್ಟ್ ನೋಟಿಸ್
- by Prashanth Basavapatna
- June 17, 2025
- 67 Views

ಬೆಂಗಳೂರು: ವಿದ್ಯುತ್ ಬಳಕೆಗೆ ಸಂಬಂಧಿಸಿದಂತೆ ನೈಜ ಸಮಯದಲ್ಲಿ (ರಿಯಲ್ ಟೈಮ್) ಮಾಹಿತಿ ಒದಗಿಸುವ ಸ್ಮಾರ್ಟ್ ಮೀಟರ್ಗಳ ಅಳವಡಿಕೆ ಮತ್ತು ಟೆಂಡರ್ಗೆ ಆಕ್ಷೇಪಿಸಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ), ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ) ಹಾಗೂ ದಾವಣೆಗೆರೆಯ ರಾಜಶ್ರೀ ಎಲೆಕ್ಟ್ರಿಕಲ್ಸ್ ಪ್ರೈವೇಟ್ ಲಿಮಿಟೆಡ್ಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಿ ಬೆಸ್ಕಾಂ ಹೊರಡಿಸಿರುವ ಸುತ್ತೋಲೆ ರದ್ದು ಕೋರಿದ ಹಾಗೂ ರಾಜಶ್ರೀ ಎಲೆಕ್ಟ್ರಿಕಲ್ಸ್ ಪ್ರೈ. ಲಿ. ಗೆ ಸ್ಮಾರ್ಟ್ ಮೀಟರ್ಗಳ ಮಾರಾಟ ಮತ್ತು ನಿರ್ವಹಣೆ ಟೆಂಡರ್ ನೀಡಿರುವುದನ್ನು ಪ್ರಶ್ನಿಸಿ ಕರ್ನಾಟಕ ವಿದ್ಯುತ್ ಸೇನೆ, ರಾಮಚಂದ್ರ ಅನವೇರಿ ಹಾಗೂ ಜಯಪಾಲ ಮತ್ತಿತರು ಸಲ್ಲಿಸಿರುವ ಮೂರು ಪ್ರತ್ಯೇಕ ಅರ್ಜಿಗಳನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಅರ್ಜಿ ಕುರಿತು ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಒಂದು ತಿಂಗಳು ಮುಂದೂಡಿತು.
ಆಕ್ಷೇಪವೇನು?
ಇದಕ್ಕೂ ಮುನ್ನ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲೆ ಲಕ್ಷ್ಮೀ ಐಯಂಗಾರ್, ಎಲ್ಲ ಗ್ರಾಹಕರು ಸ್ಮಾರ್ಟ್ ಮೀಟರ್ಗೆ ವರ್ಗಾವಣೆಯಾಗಬೇಕು ಎಂದು ಬೆಸ್ಕಾಂ ಹೇಳಿದೆ. ರಾಜಶ್ರೀ ಎಲೆಕ್ಟ್ರಿಕಲ್ಸ್ ಮತ್ತು ಬೆಸ್ಕಾಂ ನಡುವೆ ಏನೋ ಹೊಂದಾಣಿಕೆಯಾಗಿದೆ. ಇದರಿಂದ, ಗ್ರಾಹಕರಿಗೆ ಸಮಸ್ಯೆಯಾಗುತ್ತಿದೆ. ಸ್ಮಾರ್ಟ್ ಮೀಟರ್ ಬೆಲೆ ದುಬಾರಿಯಾಗಿದೆ. ಬೇರೆ ರಾಜ್ಯಗಳಲ್ಲಿ ಸಿಂಗಲ್ ಫೇಸ್ ಸ್ಮಾರ್ಟ್ ಮೀಟರ್ಗೆ 900 ರೂ. ಇದ್ದರೆ, ಅದೇ ಮೀಟರ್ಗೆ 5 ಸಾವಿರ ರೂ. ಇದೆ. ಎಲೆಕ್ಟ್ರಿಕ್ ಸ್ಕೂಟರ್ ಮತ್ತಿತರ ಚಾರ್ಜಿಂಗ್ಗೆ ಅಗತ್ಯವಿರುವ ಮೂರು ಫೇಸ್ ಮೀಟರ್ಗೆ 8 ಸಾವಿರ ರೂ. ಪಾವತಿಸಬೇಕಿದೆ ಎಂದು ಆಕ್ಷೇಪಿಸಿದರು.
ಕೇಂದ್ರ ಸರ್ಕಾರ ಪರಿಷ್ಕೃತ ವಿತರಣಾ ವಲಯ ಯೋಜನೆ (ಆರ್ಡಿಎಸ್ಎಸ್) ರೂಪಿಸಿದ್ದು, ಇಲ್ಲಿ ಕೇಂದ್ರವೇ ಮೀಟರ್ ಅಳವಡಿಕೆಗೆ ಖರ್ಚು ನೀಡಲಿದೆ. ಆದರೆ, ಇದನ್ನು ಜಾರಿಗೊಳಿಸದೇ ಬೆಸ್ಕಾಂ ಟೆಂಡರ್ ನಡೆಸಿದೆ. ಇಲ್ಲಿ ಇಡೀ ಟೆಂಡರ್ ಪ್ರಕ್ರಿಯೆಯನ್ನು ಪ್ರಶ್ನಿಸಲಾಗಿದೆ. ಮಾರ್ಗಸೂಚಿ ಮತ್ತು ಕೆಇಆರ್ಸಿ ನಿಯಂತ್ರಣಗಳಿಗೆ ಅನುಗುಣವಾಗಿ ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಎಲ್ಲ ಗ್ರಾಹಕರೂ ಸ್ಮಾರ್ಟ್ ಮೀಟರ್ ಖರೀದಿಸಲೇಬೇಕು ಎಂಬ ರೀತಿಯಲ್ಲಿ ಕರಡು ರೂಪಿಸಲಾಗಿದೆ. ರಾಜಶ್ರೀ ಎಲೆಕ್ಟ್ರಿಕಲ್ಸ್ಗೆ ಲಾಭ ಮಾಡಿಕೊಡಲು ಈ ಟೆಂಡರ್ ನಡೆಸಲಾಗಿದೆ. ರಾಜಶ್ರೀ ಎಲೆಕ್ಟ್ರಿಕಲ್ಸ್ನವರು ಮೀಟರ್ ಉತ್ಪಾದಿಸದೆ, ಸಾಫ್ಟ್ವೇರ್ ನೆರವನ್ನೂ ನೀಡದೇ ಲಾಭ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜಶ್ರೀ ಎಲೆಕ್ಟ್ರಿಕಲ್ಸ್ ಪರ ಹಾಜರಿದ್ದ ಹಿರಿಯ ವಕೀಲ ಕೆ.ಎನ್. ಫಣೀಂದ್ರ, ಒಂದೇ ರೀತಿಯ ಮನವಿಗಳನ್ನೊಳಗೊಂಡ ಅರ್ಜಿಗಳು ಏಕಸದಸ್ಯ ಪೀಠದ ಮುಂದಿವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಬೆಸ್ಕಾಂ ಪರ ಹಿರಿಯ ವಕೀಲ ಉದಯ್ ಹೊಳ್ಳ, ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಲಾಗುವುದು ಎಂದರು.
Related Articles
Thank you for your comment. It is awaiting moderation.
Comments (0)