ಬೆಂಗಳೂರು ಕಾಲ್ತುಳಿತ ದುರಂತ; ನಿಖಿಲ್ ಸೋಸಲೆ ಸೇರಿ ನಾಲ್ವರಿಗೆ ಮಧ್ಯಂತರ ಜಾಮೀನು ನೀಡಿದ ಹೈಕೋರ್ಟ್

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಆರ್‌ಸಿಬಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿಖಿಲ್‌ ಸೋಸಲೆ, ಡಿಎನ್‌ಎ ಎಂಟರ್ಟೇನ್ಮೆಂಟ್‌ ನೆಟ್ವರ್ಕ್ಸ್‌ನ ನಿರ್ದೇಶಕ ಸುನೀಲ್‌ ಮ್ಯಾಥ್ಯೂ, ಮ್ಯಾನೇಜರ್‌ ಕಿರಣ್‌ ಕುಮಾರ್‌ ಮತ್ತು ಶಮಂತ್‌ ಮಾವಿನಕೆರೆಗೆ ಹೈಕೋರ್ಟ್ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಪ್ರಕರಣ ಸಂಬಂಧ ಕಬ್ಬನ್‌‌ಪಾರ್ಕ್‌ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದು ಕೋರಿ ನಿಖಿಲ್‌ ಸೋಸಲೆ ಸೇರಿ ನಾಲ್ವರು ಆರೋಪಿಗಳು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಜತೆಗೆ, ತಮ್ಮನ್ನು ಕಾನೂನುಬಾಹಿರವಾಗಿ ಬಂಧಿಸಲಾಗಿದ್ದು, ಕೂಡಲೇ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಸರ್ಕಾರಕ್ಕೆ ಆದೇಶಿಸಬೇಕು ಎಂದು ಮಧ್ಯಂತರ ಮನವಿ ಮಾಡಿದ್ದರು.

ಮಧ್ಯಂತರ ಮನವಿ ಕುರಿತ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಸ್‌.ಆರ್‌. ಕೃಷ್ಣಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ಪ್ರಕಟಿಸಿದ್ದು, ಷರತ್ತುಬದ್ಧ ಜಾಮೀನಿನ ಮೇಲೆ ತಕ್ಷಣ ಅರ್ಜಿದಾರರನ್ನು ಬಿಡುಗಡೆ ಮಾಡುವಂತೆ ಸರ್ಕಾರ ಮತ್ತು ಜೈಲು ಪ್ರಾಧಿಕಾರಕ್ಕೆ ನ್ಯಾಯಾಲಯ ಆದೇಶಿಸಿದೆ.

ಷರತ್ತುಗಳೇನು?
ಆರೋಪಿಗಳು ತಲಾ 1 ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್‌ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಶ್ಯೂರಿಟಿ ಒದಗಿಸಬೇಕು. ಪ್ರಕರಣಕ್ಕೆ ಸಂಂಧಿಸಿದ ಪ್ರಾಸಿಕ್ಯೂಷನ್‌ ಸಾಕ್ಷಿಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆದರಿಕೆ ಹಾಕಬಾರದು, ಸಾಕ್ಷ್ಯಧಾರ ತಿರುಚಬಾರದು, ತನಿಖೆಗೆ ಅಡ್ಡಿಪಡಿಸಬಾರದು, ಪ್ರಕರಣ ಕುರಿತ ಕಬ್ಬನ್‌‌ಪಾರ್ಕ್‌ ಠಾಣೆ ಪೊಲೀಸರ ತನಿಖೆ, ನ್ಯಾಯಾಂಗ ಆಯೋಗ ಹಾಗೂ ಮ್ಯಾಜಿಸ್ಟೀರಿಯಲ್‌ ವಿಚಾರಣೆಗೆ ಸಹಕರಿಸಬೇಕು. ಜಾಮೀನಿನ ಮೇಲೆ ಬಿಡುಗಡೆಯಾದ ದಿನದಿಂದ 2 ವಾರದಲ್ಲಿ ವಿಚಾರಣಾ ನ್ಯಾಯಾಲಯದ ವಶಕ್ಕೆ ಪಾಸ್‌ಪೋರ್ಟ್ ಒಪ್ಪಿಸಬೇಕು. ಹೈಕೋರ್ಟ್‌ ಅನುಮತಿ ಇಲ್ಲದೆ ಬೆಂಗಳೂರು ಬಿಟ್ಟು ಹೊರ ಹೋಗುವಂತಿಲ್ಲ ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.

ಜಾಮೀನಿಗೆ ಹೈಕೋರ್ಟ್ ಕೊಟ್ಟ ಕಾರಣಗಳು:

  • ಕಾರ್ಯಕ್ರಮವನ್ನು ಆರ್‌ಸಿಬಿ, ಡಿಎನ್‌ಎ ಕಂಪನಿಗಳ ಆಡಳಿತ ಮಂಡಳಿ ಆಯೋಜಿಸಿದೆ. ಆದರೆ, ಅರ್ಜಿದಾರರು ಆ ಕಂಪನಿಗಳ ಉದ್ಯೋಗಿಗಳಾಗಿದ್ದಾರೆ. ಅವರನ್ನು ಕಂಪನಿಗಳೊಂದಿಗೆ ಸಮಾನವಾಗಿ ಕಾಣಲು ಸಾಧ್ಯವಿಲ್ಲ.
  • ಅರ್ಜಿದಾರರನ್ನು ಬಂಧಿಸುವ ಮೊದಲು ಘಟನೆಯಲ್ಲಿ ಅವರ ಪಾತ್ರವಿರುವುದನ್ನು ದೃಢಪಡಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲದಿದ್ದರೆ, ಅದರಲ್ಲೂ ವಿಶೇಷವಾಗಿ ಎಫ್‌ಐಆರ್‌ಗಳಲ್ಲಿ ಅವರನ್ನು ಆರೋಪಿಗಳೆಂದು ಹೆಸರಿಸದಿದ್ದಾಗ ಆರೋಪಿಸಲಾಗಿರುವ ಅಪರಾಧಗಳಿಗೆ ಅರ್ಜಿದಾರರನ್ನು ಪ್ರತ್ಯೇಕವಾಗಿ ಹೊಣೆಗಾರರೆಂದು ಪರಿಗಣಿಸಲಾಗುವುದಿಲ್ಲ.
  • ಅರ್ಜಿದಾರರನ್ನು ಸಿಸಿಬಿ ಪೊಲೀಸರು ಜೂನ್ 6ರಂದು ಬೆಳಗ್ಗೆ 3ರಿಂದ 3.30ರ ನಡುವೆ ಬಂಧನ ಮಾಡಿ, 4.30ರಿಂದ 4.50ರ ನಡುವೆ ಕಬ್ಬನ್‌‌ಪಾರ್ಕ್‌ ಪೊಲೀಸರ ಮುಂದೆ ಹಾಜರುಪಡಿಸಿದ್ದಾರೆ. ಅದಾದ ಬಳಿಕ 10ರಿಂದ 11 ಗಂಟೆ ವಿಳಂಬವಾಗಿ ಅಂದರೆ, ಜೂನ್ 6ರಂದು ಮಧ್ಯಾಹ್ನ 2.30ರ ವೇಳೆಗೆ ಅರ್ಜಿದಾರರಿಗೆ ಪೊಲೀಸರು ಅವರ ಬಂಧನಕ್ಕೆ ಕಾರಣಗಳನ್ನು (ಅರೆಸ್ಟ್‌ ಮೊಮೊ) ನೀಡಿದ್ದಾರೆ. ಇಷ್ಟು ವಿಳಂಬಕ್ಕೆ ಪೊಲೀಸರು ಸೂಕ್ತ ವಿವರಣೆ ನೀಡಿಲ್ಲ.
  • ಬಂಧನದ ವೇಳೆ ಕಡ್ಡಾಯವಾಗಿ ನೀಡಬೇಕಾದ ಬಂಧನದ ಮಾಹಿತಿ, ಬಂಧನದ ಜ್ಞಾಪನಾಪತ್ರ, ಬಂಧನಕ್ಕೆ ಕಾರಣಗಳು, ತಪಾಸಣಾ ಮೆಮೊ ಸೇರಿ ಇನ್ನಿತರ ಚೆಕ್‌ಲಿಸ್ಟ್‌ ದಾಖಲೆಗಳನ್ನು ನೀಡಿಲ್ಲ.
  • ಈ ಕಾರಣಗಳಿಂದ, ಅರ್ಜಿದಾರರ ಬಂಧನವು ಕಾನೂನುಬದ್ಧವಾಗಿಲ್ಲ ಎನ್ನಬಹುದು. ಮೂಲ ರಿಟ್ ಅರ್ಜಿ ಇತ್ಯರ್ಥವಾಗುವವರೆಗೆ ಮಧ್ಯಂತರ ಜಾಮೀನಿನ ಮೇಲೆ ಬಂಧನದಿಂದ ಬಿಡುಗಡೆಯಾಗಲು ಅರ್ಜಿದಾರರು ಅರ್ಹರಾಗಿದ್ದಾರೆ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.

Related Articles

Comments (0)

Leave a Comment