ಆರ್ಸಿಎಸ್ಪಿಎಲ್, ಡಿಎನ್ಎ ಉದ್ಯೋಗಿಗಳ ವಿರುದ್ಧ ಬಲವಂತದ ಕ್ರಮ ಬೇಡ; ಹೈಕೋರ್ಟ್
- by Jagan Ramesh
- June 9, 2025
- 75 Views

ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಇತ್ತೀಚೆಗೆ ಸಂಭವಿಸಿದ್ದ ಕಾಲ್ತುಳಿತ ಅವಘಡ ಸಂಬಂಧ ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ (ಆರ್ಸಿಎಸ್ಪಿಎಲ್), ಡಿಎನ್ಎ ಎಂಟರ್ಟೇನ್ಮೆಂಟ್ ನೆಟ್ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಪದಾಧಿಕಾರಿಗಳ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮೌಖಿಕ ಸೂಚನೆ ನೀಡಿದೆ.
ಆರ್ಸಿಬಿ ಸಂಭ್ರಮಾಚರಣೆ ವೇಳೆ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಆರ್ಸಿಎಸ್ಪಿಎಲ್ ಹಾಗೂ ಡಿಎನ್ಎ ಎಂಟರ್ಟೇನ್ಮೆಂಟ್ ನೆಟ್ವರ್ಕ್ಸ್ ಪ್ರೈ. ಲಿ. ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಪೀಠ ಸೋಮವಾರ ವಿಚಾರಣೆ ನಡೆಸಿತು.
ಕೆಲ ಕಾಲ ವಾದ ಆಲಿಸಿದ ಪೀಠ, ಸರ್ಕಾರ ಬಯಸುವ ಎಲ್ಲ ಷರತ್ತುಗಳನ್ನು ವಿಧಿಸಿ, ಆರೋಪಿಗಳು ತನಿಖೆಗೆ ಸಹಕರಿಸುವಂತೆ ಸೂಚಿಸಲಾಗುವುದು. ಆದರೆ, ಬಂಧಿಸಬಾರದು ಎಂದು ಹೇಳಿತು. ಇದಕ್ಕೆ ಅಡ್ವೊಕೇಟ್ ಜನರಲ್ ಸಹ ಸಮ್ಮತಿಸಿದರು. ಇದರಿಂದ, ನ್ಯಾಯಾಲಯ ಅರ್ಜಿಗಳ ವಿಚಾರಣೆಯನ್ನು ಜೂನ್ 12ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ವಿಚಾರಣೆ ವೇಳೆ ನ್ಯಾಯಪೀಠ, ಈಗಾಗಲೇ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್ಸಿಎ) ಪದಾಧಿಕಾರಿಗಳ ವಿರುದ್ಧ ಬಲವಂತದ ಕ್ರಮಕೈಗೊಳ್ಳಬಾರದು ಎಂದು ಆದೇಶಿಸಿರುವುದರಿಂದ ಆರ್ಸಿಎಸ್ಪಿಎಲ್ ಮತ್ತು ಡಿಎನ್ಎ ಉದ್ಯೋಗಿಗಳಿಗೂ ಇದೇ ರಕ್ಷಣೆ ನೀಡಬೇಕಿದೆ ಎಂದು ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು.
ಸರ್ಕಾರದ ಪರವಾಗಿ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಆರ್ಸಿಬಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಪೋಸ್ಟ್ ಅನ್ನು 13 ಕೋಟಿ ಜನ ವೀಕ್ಷಿಸಿದ್ದು, ಸ್ಟೇಡಿಯಂ ಬಳಿ ಅಂದಾಜು 5 ಲಕ್ಷ ಜನ ಬಂದು ಸೇರಿದ್ದಾರೆ. ಆರ್ಸಿಬಿ ಗೆದ್ದ ತಕ್ಷಣವೇ, ಬೆಂಗಳೂರಿನಲ್ಲಿ ವಿಜಯೋತ್ಸವ ಆಚರಿಸಲಾಗುವುದು ಎಂದು ಟ್ವೀಟ್ ಮಾಡಿತ್ತು. ಇದಕ್ಕೆ ಯಾವುದೇ ಅನುಮತಿ ಪಡೆದಿರಲಿಲ್ಲ. ಆದ್ದರಿಂದ, ಆರ್ಸಿಬಿ ಅಥವಾ ಡಿಎನ್ಎ ಎಂಟರ್ಟೇನ್ಮೆಂಟ್ ನೆಟವರ್ಕ್ಸ್ ಉದ್ಯೋಗಿಗಳಿಗೆ ಬಂಧನದಿಂದ ಪರಿಹಾರ ನೀಡಬಾರದು ಎಂದರು.
ಅದಕ್ಕೆ ಪ್ರತಿಕ್ರಿಯಿಸಿದ ಪೀಠ, ಆರ್ಸಿಬಿ ವಿಜಯೋತ್ಸವದಲ್ಲಿ ಭಾಗವಹಿಸುವಂತೆ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದೇ ಕಾಲ್ತುಳಿತಕ್ಕೆ ಕಾರಣ ಎಂದು ಈಗಲೇ ಹೇಳುವುದು ಆತುರದ ನಿರ್ಧಾರವಾಗುತ್ತದೆ ಎಂದು ಮೌಖಿಕವಾಗಿ ನುಡಿದು, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.
ನಾಳೆ ನಿಖಿಲ್ ಸೋಸಲೆ ಮತ್ತಿತರರ ಅರ್ಜಿ ವಿಚಾರಣೆ:
ಇದೇ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರ್ಸಿಬಿ ಮಾರುಕಟ್ಟೆ ವಿಭಾಗದ ಮುಖಸ್ಥ ನಿಖಿಲ್ ಸೋಸಲೆ, ಡಿಎನ್ಎ ಉದ್ಯೋಗಿಗಳಾದ ಸುನೀಲ್ ಮ್ಯಾಥ್ಯೂ, ಕಿರಣ್ ಕುಮಾರ್ ಮತ್ತು ಸುಮಂತ್ ಮಧ್ಯಂತರ ಪರಿಹಾರವಾಗಿ ಬಿಡುಗಡೆ ಕೋರಿರುವ ಅರ್ಜಿಯನ್ನು ಹೈಕೋರ್ಟ್ ಮಂಗಳವಾರ ವಿಚಾರಣೆ ನಡೆಸಲಿದೆ.
ಸೋಮವಾರ ನಿಖಿಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂದೇಶ್ ಚೌಟ, ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇಲ್ಲಿನ ಠಾಣಾಧಿಕಾರಿಯು ಅಮಾನತುಗೊಂಡಿದ್ದು, ನಿಖಿಲ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಮಧ್ಯೆ, ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿತ್ತು. ಇದು ಕಾನೂನುಬಾಹಿರ ಕ್ರಮ. ಸಿಸಿಬಿಯು ಇಲ್ಲಿ ಯಾವುದೇ ರೀತಿಯಲ್ಲೂ ಸಂಬಂಧವಿಲ್ಲದಿರುವುದರಿಂದ ನಿಖಿಲ್ ಬಂಧಿಸುವ ಅಧಿಕಾರ ಸಿಸಿಬಿಗೆ ಇರಲಿಲ್ಲ. ಆದ್ದರಿಂದ, ಇದು ಅಕ್ರಮ ಬಂಧನವಾಗಲಿದೆ ಎಂದು ಆಕ್ಷೇಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮಗೋಷ್ಠಿಯಲ್ಲಿ ಆರೋಪಿಗಳನ್ನು ಬಂಧಿಸುವಂತೆ ಸೂಚಿಸಿದ್ದಾರೆ. ಬಳಿಕ ಪೊಲೀಸರು ನಿಖಿಲ್ ಮತ್ತಿತರರನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸಿ, ಅಗತ್ಯಬಿದ್ದರೆ ಮಾತ್ರ ತನಿಖಾಧಿಕಾರಿ ಆರೋಪಿಯನ್ನು ಬಂಧಿಸಬಹುದು. ತನಿಖಾಧಿಕಾರಿ ಹೊರತುಪಡಿಸಿ ಯಾರಿಗೂ ಬಂಧಿಸುಂತೆ ಸೂಚಿಸುವ ಅಧಿಕಾರವಿಲ್ಲ. ಬಂಧನಕ್ಕೂ ಮುನ್ನ, ನಿಖಿಲ್ಗೆ ಪೊಲೀಸರು ಯಾವುದೇ ನೋಟಿಸ್ ನೀಡಿಲ್ಲ. ಬಂಧನಕ್ಕೆ ಕಾರಣವನ್ನೂ ನೀಡಿಲ್ಲ. ಪತ್ನಿ, ಮಗುವಿನ ಜತೆ ಪ್ರವಾಸಕ್ಕೆ ತೆರಳುತ್ತಿದ್ದವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇದು ಕಾನೂನುಬಾಹಿರ ಕ್ರಮ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ತನಿಖೆಯನ್ನೇ ನಡೆಸದೆ ಮುಖ್ಯಮಂತ್ರಿಗಳು ಬಂಧಿಸುವಂತೆ ಮಾಧ್ಯಮಗೋಷ್ಠಿಯಲ್ಲಿ ಹೇಗೆ ಸೂಚನೆ ನೀಡಿದ್ದಾರೆ? ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ವಜಾಗೊಂಡಿದ್ದಾರೆ. ಐವರು ಪೊಲೀಸ್ ಅಧಿಕಾರಿಗಳು ಅಮಾನತುಗೊಂಡಿದ್ದು, ಗುಪ್ತ ದಳದ ಮುಖ್ಯಸ್ಥ ಹೇಮಂತ್ ನಿಂಬಾಳ್ಕರ್ ಅವರನ್ನು ವರ್ಗಾವಣೆ ಮಾಡಲಾಗಿದ. ಇದೆಲ್ಲ ಏತಕ್ಕಾಗಿ? ಅವರನ್ನು ಬಂಧಿಸುವಂತೆ ಮುಖ್ಯಮಂತ್ರಿಗಳು ಏಕೆ ನಿರ್ದೇಶನ ನೀಡಿಲ್ಲ ಎಂದು ಪ್ರಶ್ನಿಸಿದರು.
ಇದಕ್ಕೆ ಆಕ್ಷೇಪಿಸಿದ ಅಡ್ವೊಕೇಟ್ ಜನರಲ್, ಆರ್ಸಿಬಿ ಜಯಿಸಿದ ದಿನವೇ ಟ್ವೀಟ್ ಮಾಡುವ ಮೂಲಕ ಬೆಂಗಳೂರಿನಲ್ಲಿ ವಿಜಯೋತ್ಸವ ಆಚರಿಸಲಾಗುವುದು ಎಂದು ಆರ್ಸಿಬಿ ಘೋಷಿಸಿದೆ. ಇದಕ್ಕೆ ಸೂಕ್ತ ಅನುಮತಿ ಪಡೆದಿರಲಿಲ್ಲ. ಆರ್ಸಿಬಿ ಹಾಗೂ ಡಿಎನ್ಎ ಸಂಸ್ಥೆಗಳ ನಡೆಯೇ 11 ಮಂದಿ ಮೃತಪಡಲು ಕಾರಣವಾಗಿದೆ. ಆರೋಪಿಗಳು ಪಲಾಯನಗೈಯ್ಯುತ್ತಿದ್ದಾಗ ಸರ್ಕಾರ ನೋಡಿಕೊಂಡು ಕುಳಿತುಕೊಳ್ಳಬೇಕೆ ಎಂದು ಮರು ಸವಾಲೆಸೆದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಬಂಧಿತರ ಬಿಡುಗಡೆಗೆ ಸೀಮಿತವಾದ ಮಧ್ಯಂತರ ಮನವಿ ಕುರಿತು ವಾದ ಮಂಡಿಸಲು ಅಡ್ವೊಕೇಟ್ ಜನರಲ್ಗೆ ನಿರ್ದೇಶಿಸಿ, ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.
Comments (0)