ಕಾಫಿಪೋಸಾ ಅಡಿ ರನ್ಯಾ ರಾವ್ ಬಂಧನ ಎತ್ತಿಹಿಡಿದ ಹೈಕೋರ್ಟ್; ಹೇಬಿಯಸ್ ಕಾರ್ಪಸ್ ಅರ್ಜಿ ವಜಾ

ಬೆಂಗಳೂರು: ಚಿನ್ನ ಕಳ್ಳ ಸಾಗಣೆ ಪ್ರಕರಣದ ಆರೋಪಿಗಳಾದ ನಟಿ ರನ್ಯಾ ಹರ್ಷವರ್ಧಿನಿ ಅಲಿಯಾಸ್‌ ರನ್ಯಾ ರಾವ್‌, ತರುಣ್ ಕೊಂಡೂರು ರಾಜು ಹಾಗೂ ಸಾಹಿಲ್ ಜೈನ್ ಅವರನ್ನು ‘ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳ ಸಾಗಣೆ ಚಟುವಟಿಕೆ ತಡೆ ಕಾಯ್ದೆ’ (ಕಾಫಿಪೋಸಾ) ಅಡಿ ಬಂಧಿಸಿರುವ ಕ್ರಮವನ್ನು ಹೈಕೋರ್ಟ್ ಎತ್ತಹಿಡಿದಿದೆ.

ಕಾಫಿಪೋಸಾ ಕಾಯ್ದೆ ಅಡಿ ಬಂಧಿಸಿರುವ ಕೇಂದ್ರ ಆರ್ಥಿಕ ಗುಪ್ತಚರ ನಿರ್ದೇಶನಾಲಯದ (ಸಿಇಐಬಿ) ಕ್ರಮವನ್ನು ಕಾನೂನುಬಾಹಿರವೆಂದು ಘೋಷಿಸುವಂತೆ ಕೋರಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ, ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಅನು ಸಿವರಾಮನ್‌ ಹಾಗೂ ನ್ಯಾಯಮೂರ್ತಿ ವಿಜಯಕುಮಾರ್‌ ಎ. ಪಾಟೀಲ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ಪ್ರಕಟಿಸಿತು.

ರನ್ಯಾ ಮಲತಾಯಿ ಎಚ್‌.ಎಸ್‌. ರೋಹಿಣಿ, ತರುಣ್‌ ತಾಯಿ ರಮಾ ರಾಜು ಹಾಗೂ ಸಾಹೀಲ್‌ ಜೈನ್‌ ತಾಯಿ ಪ್ರಿಯಾಂಕಾ ಸರ್ಕಾರಿಯಾ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದ್ದು, ವಿಸ್ತೃತ ತೀರ್ಪಿನ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಹೈಕೋರ್ಟ್ ಆದೇಶದಿಂದ ರನ್ಯಾ ಹಾಗೂ ಇತರ ಆರೋಪಿಗಳು ಮತ್ತಷ್ಟು ದಿನ ಜೈಲಿನಲ್ಲೇ ಕಳೆಯುವಂತಾಗಿದೆ.

Related Articles

Comments (0)

Leave a Comment