ಬೆಕ್ಕು ಕದ್ದ ಆರೋಪ ಹೊತ್ತವನ ವಿರುದ್ಧದ ಕ್ರಿಮಿನಲ್ ಕೇಸ್ ರದ್ದು; ಅಪರೂಪದ ಪ್ರಕರಣದಲ್ಲಿ ಹೈಕೋರ್ಟ್ ಹೇಳಿದ್ದೇನು?

ಬೆಂಗಳೂರು: “ಬೆಕ್ಕಿಗೆ ಚೆಲ್ಲಾಟ; ಇಲಿಗೆ ಪ್ರಾಣಸಂಕಟ” ಎಂಬ ಗಾದೆ ಮಾತು ನಾವೆಲ್ಲರೂ ಕೇಳಿದ್ದೇವೆ. ಇಲ್ಲೊಂದು ಪ್ರಕರಣದಲ್ಲಿ ಬೆಕ್ಕೊಂದರ ಚೆಲ್ಲಾಟದಿಂದ ವ್ಯಕ್ತಿಯೊಬ್ಬರು ಕ್ರಿಮಿನಲ್ ಕೇಸ್‌ನಲ್ಲಿ ಸಿಲುಕಿ ಸಂಕಟ ಪಡುವಂತಾಗಿತ್ತು. ಇದೀಗ, ಆ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದ್ದು, ಬೆಕ್ಕು ಕದ್ದ ಆರೋಪ ಹೊತ್ತಿದ್ದ ವ್ಯಕ್ತಿ ನಿರಾಳರಾಗಿದ್ದಾರೆ.

ಡೈಸಿ ಎಂಬ ಹೆಸರಿನ ಸಾಕು ಬೆಕ್ಕನ್ನು ಕಳವು ಮಾಡಿದ್ದಾರೆಂದು ಆರೋಪಿಸಿ ನೆರೆಮನೆ ವ್ಯಕ್ತಿಯ ವಿರುದ್ಧ ಬೆಕ್ಕಿನ ಮಾಲಕಿ ಕ್ರಿಮಿನಲ್‌ ಪ್ರಕರಣ ಹೂಡಿದ್ದರು. ಇದರಿಂದ, ಪ್ರಕರಣ ರದ್ದುಕೋರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಿಕಾರಿಪಾಳ್ಯದ ಸಿರಾಜ್‌ ಬಡಾವಣೆಯ ತಾಹಾ ಹುಸೇನ್‌ ಹೈಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿ ಕುರಿತು ಜೂನ್ 6ರಂದು ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪುನ್ನು ನ್ಯಾಯಮೂರ್ತಿ ಎಂ.‌ ನಾಗಪ್ರಸನ್ನ ಅವರಿದ್ದ ಪೀಠ ಮಂಗಳವಾರ ಪ್ರಕಟಿಸಿದ್ದು, ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಿ ಆದೇಶಿಸಿದೆ. ತೀರ್ಪು ಪ್ರಕಟಿಸಿದ ಬಳಿಕ ನ್ಯಾಯಮೂರ್ತಿಗಳು ಡೈಸಿ ಎಂಬ ಬೆಕ್ಕು ಎಲ್ಲರನ್ನೂ ಹುಚ್ಚರನ್ನಾಗಿ ಮಾಡಿದೆ ಎಂದು ಲಘುಧಾಟಿಯಲ್ಲಿ ನುಡಿದರು.

ಆದೇಶದಲ್ಲೇನಿದೆ?
ಪ್ರಕರಣದ ಅಂಶಗಳನ್ನು ಗಮನಿಸಿದರೆ ಇದು ಕಾನೂನು ಪ್ರಕ್ರಿಯೆಯ ವ್ಯವಸ್ಥಿತ ದುರ್ಬಳಕೆಯಾಗಿದೆ. ಇಂಥ ಆಧಾರರಹಿತ ಆರೋಪಗಳ ಮೇಲೆ ಪೂರ್ಣ ಪ್ರಮಾಣದಲ್ಲಿ ಪ್ರಕರಣದ ವಿಚಾರಣೆ ನಡೆಸಲು ಅವಕಾಶ ನೀಡುವುದರಿಂದ ನ್ಯಾಯಾಂಗದ ಅಮೂಲ್ಯ ಸಮಯ ವ್ಯರ್ಥವಾಗುವುದಲ್ಲದೆ, ನೈಜ ಸಮಸ್ಯೆಗಳನ್ನು ಬಿಟ್ಟು ಅನ್ಯ ಉದ್ದೇಶಗಳಿಗೆ ಪೊಲೀಸ್‌ ಸಂಪನ್ಮೂಲ ಬಳಸಿದಂತಾಗುತ್ತದೆ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಬೆಕ್ಕಿನ ಸುತ್ತ ನಡೆದಿರುವ ಈ ಮೆಲೋ ಡ್ರಾಮಾ ಆಧರಿಸಿ ವಿಚಾರಣಾ ಪ್ರಕ್ರಿಯೆ ನಡೆಸಲಾಗದು. ಇದೊಂದು, ರದ್ದುಪಡಿಸಲು ಅರ್ಹ ಪ್ರಕರಣವಾಗಿದೆ. ನ್ಯಾಯಾಲಯ ನೋಟಿಸ್‌ ನೀಡಿದ ಹೊರತಾಗಿಯೂ ದೂರುದಾರರು (ಬೆಕ್ಕಿನ ಮಾಲಕಿ) ಕೋರ್ಟ್‌ಗೆ ಹಾಜರಾಗಿಲ್ಲ.

ಡೈಸಿ ಹೆಸರಿನ ಬೆಕ್ಕಿನ ಅಪಹರಣದಲ್ಲಿ ನ್ಯಾಯದ ವಿಕ್ಷಿಪ್ತ ಅನ್ವೇಷಣೆಯಲ್ಲಿ ತೊಡಗಿರುವ ಪೊಲೀಸರಿಗೆ ಕಠಿಣ ಎಚ್ಚರಿಕೆಯ ಅಗತ್ಯವಿದ್ದು, ಈ ರೀತಿಯ ಪ್ರಕರಣಗಳು ಕ್ರಿಮಿನಲ್‌ ನ್ಯಾಯದಾನ ವ್ಯವಸ್ಥೆಯಲ್ಲಿ ಕಾನೂನು ಎಂಬುದು ಒಂದು ಗಂಭೀರ ಸಾಧನವಾಗಿದ್ದು ಅದು ವೈಯಕ್ತಿಕ ದ್ವೇಷದ ಬಲಿ ಪೀಠದಲ್ಲಿ ಬಳಕೆ ಮಾಡುವ ಆಟಿಕೆಯಲ್ಲ ಎಂಬುದನ್ನು ಅರಿತು ಕಾರ್ಯನಿರ್ವಹಿಸಲು ಎಚ್ಚರಿಸಬೇಕಿದೆ ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣವೇನು?
ನಿಖಿತಾ ಅಂಜನಾ ಅಯ್ಯಂಗಾರ್‌ ಎಂಬುವರು ಹೆಬ್ಬಗೋಡಿ ಪೊಲೀಸ್ ಠಾಣೆಗೆ ದೂರು ನೀಡಿ, ತಮ್ಮ ಸಾಕು ಬೆಕ್ಕು ಡೈಸಿ ಕಾಂಪೌಂಡ್‌ ಹಾರಿ ನೆರೆಯ ತಾಹಾ ಹುಸೇನ್ ಅವರ ಮನೆಗೆ ಹೋಗಿತ್ತು. ಆಗ ಅವರು ಬೆಕ್ಕನ್ನು ಹಿಡಿದಿಟ್ಟಿಕೊಂಡಿದ್ದರು. ಬೆಕ್ಕನ್ನು ಒತ್ತೆಯಾಳಾಗಿ ಇಟ್ಟುಕೊಂಡಿರುವುದು ನಮ್ಮ ಮನೆಯ ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದೆ ಎಂದು ಆರೋಪಿಸಿದ್ದರು.

ದೂರು ಆಧರಿಸಿ ಜೀವ ಬೆದರಿಕೆ, ಶಾಂತಿಭಂಗ ಮತ್ತು ಮಹಿಳೆಯ ಘನತೆಗೆ ಧಕ್ಕೆತಂದ ಆರೋಪದ ಮೇಲೆ ಹುಸೇನ್ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದ ಪೊಲೀಸರು, ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ಸಂಬಂಧ ಆನೇಕಲ್‌ನ 4ನೇ ಹೆಚ್ಚುವರಿ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯ 2022ರ ಸೆಪ್ಟೆಂಬರ್ 2ರಂದು ಪ್ರಕರಣವನ್ನು ವಿಚಾರಣೆಗೆ (ಕಾಗ್ನಿಜೆನ್ಸ್) ಪರಿಗಣಿಸಿತ್ತು. ಇದರಿಂದ, ಪ್ರಕರಣ ರದ್ದು ಕೋರಿ ತಾಹಾ ಹುಸೇನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಓಹ್ ಮೈ ಗಾಡ್! ಅಚ್ಚರಿ ವ್ಯಕ್ತಪಡಿಸಿದ್ದ ಕೋರ್ಟ್:
ಈ ಹಿಂದೆ ಅರ್ಜಿ ವಿಚಾರಣೆ ವೇಳೆ, ಬೆಕ್ಕಿನ ವಿಚಾರವಾಗಿ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದ ವಿಚಾರ ನ್ಯಾಯಮೂರ್ತಿಗಳು ಹಾಗೂ ಕೋರ್ಟ್‌ ಹಾಲ್‌ನಲ್ಲಿ ನೆರೆದಿದ್ದ ವಕೀಲರಿಗೆ ಅಚ್ಚರಿ ಮೂಡಿಸುವುದರ ಜತೆಗೆ ಕೆಲ ಸಮಯ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿತ್ತು. ಅರ್ಜಿಯಲ್ಲಿನ ಅಂಶಗಳನ್ನು ಗಮನಿಸಿದ ನ್ಯಾಯಪೀಠ, ಏನಿದು.. ಬೆಕ್ಕಿಗಾಗಿ ಕದನ? ಅರ್ಜಿದಾರರು ಏಕೆ ಬೆಕ್ಕು ಕಳವು ಮಾಡಿದ್ದಾರೆ? ಬೆಕ್ಕನ್ನು ಏಕೆ ಹಿಡಿದುಕೊಂಡಿದ್ದರು? ಅವರ ಮನೆಯಲ್ಲಿ ಬೆಕ್ಕು ಏಕೆ ಇತ್ತು? ಮಹಿಳೆಯ ಘನತೆಗೆ ಧಕ್ಕೆ ತಂದಿರುವುದಕ್ಕೂ ಬೆಕ್ಕಿಗೂ ಏನು ಸಂಬಂಧ? ಎಂದು ಪ್ರಶ್ನಿಸಿತ್ತು.

ಜತೆಗೆ, ಪ್ರಕರಣ ಸಂಬಂಧ ದೋಷಾರೋಪ ಪಟ್ಟಿ ಸಲ್ಲಿಸಿರುವ ಪೊಲೀಸರ ನಡೆಗೆ ತೀವ್ರ ಅಚ್ಚರಿ ವ್ಯಕ್ತಪಡಿಸಿದ್ದ ನ್ಯಾಯಮೂರ್ತಿಗಳು, ಅಯ್ಯೋ ದೇವರೇ..! ನಿಜವಾದ ಅಪರಾಧ ಪ್ರಕರಣಗಳನ್ನು ನೋಡಿ ಎಂದರೆ, ಬೆಕ್ಕು ಕಾಣೆಯಾದ ಪ್ರಕರಣವನ್ನು ಪೊಲೀಸರು ನೋಡುತ್ತಾರೆ. ಬೆಕ್ಕು ರಸ್ತೆಯ ಎಲ್ಲರ ಮನೆಗಳ ಒಳಗೆ ಹೋಗಿ ಹೊರಬಂದಿದೆ. ಇದರಿಂದ, ಬೆಕ್ಕು ಕಾಣೆಯಾಗಿದೆ ಎಂದು ದೂರು ನೀಡಿದರೆ, ಅದನ್ನು ಪೊಲೀಸರು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದ್ದರಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ಎಲ್ಲ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

Related Articles

Comments (0)

Leave a Comment