ಡಿಆರ್‌ಡಿಒಗೆ ದೋಷಪೂರಿತ ಉಪಕರಣ ಪೂರೈಕೆ; ಅಮೆರಿಕನ್ ಕಂಪನಿ ಮುಖ್ಯಸ್ಥನ ವಿರುದ್ಧದ ಕೇಸ್ ರದ್ದತಿಗೆ ಹೈಕೋರ್ಟ್ ನಕಾರ

ಬೆಂಗಳೂರು: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಹಾಗೂ ರಕ್ಷಣಾ ಏವಿಯಾನಿಕ್ಸ್‌ ಸಂಶೋಧನಾ ಸಂಸ್ಥೆ (ಡಿಎಆರ್‌ಇ)ಗಳಿಗೆ ದೋಷಪೂರಿತ ಸಾಧನಗಳನ್ನು ಪೂರೈಸಿ, ವಂಚಿಸಿದ ಆರೋಪ ಎದುರಿಸುತ್ತಿರುವ ಅಮೆರಿಕ ಮೂಲದ ಅಕಾನ್‌ ಕಂಪನಿಯ ಮುಖ್ಯಸ್ಥನ ವಿರುದ್ಧದ ಪ್ರಕರಣ ರದ್ದುಪಡಿಸಲು ಹೈಕೋರ್ಟ್‌ ನಿರಾಕರಿಸಿದೆ.

ಪ್ರಕರಣ ರದ್ದು ಕೋರಿ ‘ಅಕಾನ್ ಇನ್‌ಕಾರ್ಪೊರೇಟೆಡ್’ ಮುಖ್ಯಸ್ಥ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೂರ್ಯ ಸರೀನ್‌ (76) ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ವಂಚನೆ ಆರೋಪ ದೃಢಪಡಿಸುವ ಸಾಕ್ಷ್ಯಾಧಾರಗಳು ನ್ಯಾಯಾಲಯದ ಮುಂದಿವೆ ಎಂದು ಅಭಿಪ್ರಾಯಪಟ್ಟು, ಪ್ರಕರಣ ರದ್ದುಪಡಿಸಲು ನಿರಾಕರಿಸಿದೆ.

ಆದೇಶದಲ್ಲೇನಿದೆ?
ಅರ್ಜಿದಾರರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ 420 (ವಂಚನೆ) ಮತ್ತು 120ಬಿ (ಕ್ರಿಮಿನಲ್ ಒಳಸಂಚು) ಅಡಿಯಲ್ಲಿ ದಾಖಲಾಗಿರುವ ಇಡೀ ಅಪರಾಧ ಪ್ರಕರಣ ಸತ್ಯಗಳು, ಕೆಲ ವಿವಾದಿತ ಮತ್ತು ದಾಖಲೆಯಲ್ಲಿರುವ ಕೆಲ ವಿಷಯಗಳ ಸುತ್ತ ಸುತ್ತುತ್ತದೆ. ಆದ್ದರಿಂದ, ವಿಚಾರಣೆಯ ಈ ಹಂತದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡುವುದು ಸುಪ್ರೀಂಕೋರ್ಟ್ ತೀರ್ಪಿನ ಉಲ್ಲಂಘನೆಯಾಗಲಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಪ್ರಕರಣದ ದೂರು, ಆರೋಪ ಪಟ್ಟಿ ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ಸಂಪೂರ್ಣವಾಗಿ ಗಮನಿಸಿದರೆ, ಕೃತ್ಯದಲ್ಲಿ ಅರ್ಜಿದಾರರ ಪಾತ್ರ ಸ್ಪಷ್ಟವಾಗಿ ಗೋಚರಿಸುತ್ತದೆ. ಅರ್ಜಿದಾರರು ಅಕಾನ್‌ ಕಂಪನಿಯ ಏಕೈಕ ಮಾಲೀಕರು ಮತ್ತು ಅವರ ಮಗ ಸಂದೀಪ್‌ ಸರೀನ್‌ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಅರ್ಜಿದಾರರು ಕಂಪನಿಯ ಸ್ವತಂತ್ರ ಮಾಲೀಕರು ಮತ್ತು ಫಲಾನುಭವಿಗಳು ಎಂಬುದು ಸಾಕ್ಷಿ ಹೇಳಿಕೆಗಳಿಂದ ಸ್ಪಷ್ಟವಾಗಿದೆ. ಜತೆಗೆ, ಕಂಪನಿಯ ಎಲ್ಲ ಮೇಲ್ ಸಂವಹನಗಳು ಅರ್ಜಿದಾರರ ಒಳಗೊಳ್ಳುವಿಕೆಯನ್ನು ಸ್ಪಷ್ಟವಾಗಿ ಸೂಚಿಸುತ್ತವೆ ಎಂದು ನ್ಯಾಯಪೀಠ ಹೇಳಿದೆ.

ಹಾಲಿ ಪ್ರಕರಣ ಜಾಗತಿಕ ಟೆಂಡರ್‌ ಆಗಿದ್ದು, ಯಶಸ್ವಿ ಟೆಂಡರ್‌ದಾರರು ಡಿಆರ್‌ಡಿಒಗೆ ವಂಚನೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಆದ್ದರಿಂದ, ಸಾಗರೋತ್ತರ ಆರೋಪದ ತನಿಖೆಯಲ್ಲಿ ಸ್ವಲ್ಪ ವಿಳಂಬವಾಗಿದೆ. ಆದರೆ, ವಿಳಂಬವು ವಿಚಾರಣೆಯನ್ನು ಹಾಳು ಮಾಡಿಲ್ಲ.‌ ಇದು ವಿವರಿಸಲಾಗದ ವಿಳಂಬ ಮಾತ್ರ. ಪ್ರಕರಣದಲ್ಲಿ ನಾಲ್ಕನೇ ಆರೋಪಿಯಾಗಿರುವ ಅರ್ಜಿದಾರರ ಪಾತ್ರ ಅತ್ಯಂತ ಸ್ಪಷ್ಟವಾಗಿದೆ ಎಂದಿರುವ ಹೈಕೋರ್ಟ್, ಅರ್ಜಿ ವಜಾಗೊಳಿಸಿದೆ.

ಪ್ರಕರಣವೇನು?
ಜಾಗತಿಕ ಟೆಂಡರ್‌ನಲ್ಲಿ ಭಾಗವಹಿಸಿ ಯಶಸ್ವಿಯಾಗಿದ್ದ ಅರ್ಜಿದಾರರ ಕಂಪನಿ 2007-2009ರ ನಡುವೆ ಒಟ್ಟು 34 ದೋಷಪೂರಿತ ಸಾಧನಗಳನ್ನು ಪೂರೈಕೆ ಮಾಡಿ, ಅದಕ್ಕೆ ಸಂಬಂಧಿಸಿದ ಹಣವನ್ನೂ ಸ್ವೀಕರಿಸಿತ್ತು. ಆನಂತರ, ಆ ಸಾಧನಗಳು ದೋಷಪೂರಿತವಾಗಿವೆ ಎಂಬ ಅಂಶ ಕಂಡು ಬಂದಿತ್ತು. ಆದ್ದರಿಂದ, ಡಿಆರ್‌ಡಿಒ ಮತ್ತು ಡಿಎಆರ್‌ಇ ಸಂಸ್ಥೆಗಳು ಮೊದಲಿಗೆ ವಿಚಕ್ಷಣಾ ದಳಕ್ಕೆ ದೂರು ನೀಡಿದ್ದವು. ಬಳಿಕ ಮೇಲ್ನೋಟಕ್ಕೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತನಿಖೆಯ ಹೊಣೆಯನ್ನು ಸಿಬಿಐಗೆ ವಹಿಸಲಾಗಿತ್ತು. ಇದರಿಂದ, ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

Related Articles

Comments (0)

Leave a Comment