ಇಸ್ರೊ ಹುದ್ದೆ ಕೊಡಿಸುವುದಾಗಿ ವಂಚಿಸಿದ ಪ್ರಕರಣ; 1 ಕೋಟಿ ಲಂಚ ನೀಡಿದ್ದ ದೂರುದಾರನ ವಿರುದ್ಧವೇ ಕೇಸ್ ದಾಖಲಿಸಲು ಹೈಕೋರ್ಟ್ ಆದೇಶ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ಇಸ್ರೊ) ಗ್ರಾಫಿಕ್‌ ಡಿಸೈನರ್‌ ಕೆಲಸ ಪಡೆಯಲು 1.03 ಕೋಟಿ ರೂ. ಲಂಚ ನೀಡಿದ್ದ ವ್ಯಕ್ತಿಯ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಹೈಕೋರ್ಟ್ ಆದೇಶಿಸಿದೆ.

ಬೆಂಗಳೂರಿನ ನಾಗರಭಾವಿಯ ಎನ್. ಸಂಜಯ್ ಎಂಬಾತನಿಗೆ ಇಸ್ರೊದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ, ಹಣ ಪಡೆದು ವಂಚಿಸಿರುವ ಆರೋಪ ಎದುರಿಸುತ್ತಿರುವ ವಿಜಯನಗರದ ಎಂ.ಇ. ವಿನುತಾ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಅರ್ಜಿ ಕುರಿತು ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಲಾಗಿದ್ದು, ಅರ್ಜಿದಾರೆ ವನಿತಾ ವಿರುದ್ಧ ಕೊಳ್ಳೇಗಾಲ ಮತ್ತು ಚಿಕ್ಕಮಗಳೂರು ನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳ ಮಾಹಿತಿಯನ್ನು ಆಕೆಯ ಪರ ವಕೀಲರು ಮುಂದಿನ ವಿಚಾರಣೆ ವೇಳೆಗೆ ಸಲ್ಲಿಸಬೇಕು ಎಂದು ಆದೇಶಿಸಿತಲ್ಲದೆ, ಪ್ರಕರಣದ ದೂರುದಾರ ಸಂಜಯ್ ವಿರುದ್ಧ ಇಸ್ರೊನಲ್ಲಿ ಕೆಲಸ ಪಡೆಯಲು 1.03 ಕೋಟಿ ಲಂಚ ನೀಡಿರುವ ಸಂಬಂಧ ಪ್ರಕರಣ ದಾಖಲಿಸುವಂತೆ ಬೆಂಗಳೂರಿನ ಅಣ್ಣಪೂರ್ಣೇಶ್ವರಿ ನಗರ ಠಾಣೆ ಪೊಲೀಸರಿಗೆ ನಿರ್ದೇಶಿಸಿತು.

ಆದೇಶ ಪ್ರತಿಯನ್ನು ಇಸ್ರೊ ಮುಖ್ಯಸ್ಥರಿಗೆ ಕಳುಹಿಸಲು ಹೈಕೋರ್ಟ್‌ನ ನ್ಯಾಯಾಂಗ ರಿಜಿಸ್ಟ್ರಾರ್‌ ಜನರಲ್‌ಗೆ ಆದೇಶಿಸಿದ ಪೀಠ, ಸ್ವೀಕೃತಿ ಪ್ರತಿಯನ್ನು ಮುಂದಿನ ವಿಚಾರಣೆಯಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚಿಸಿ, ಅರ್ಜಿ ವಿಚಾರಣೆಯನ್ನು ಜೂನ್ 4ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಇಸ್ರೊನಲ್ಲಿ ಕೆಲಸ ಕೊಡಿಸುವುದಾಗಿ ದೂರುದಾರರಿಂದ 1 ಕೋಟಿ ರೂ. ಪಡೆದು ವಂಚಿಸಿದ ಆರೋಪದಲ್ಲಿ ವಿನುತಾ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವಿನುತಾ ಅವರು ಮೊದಲ ಆರೋಪಿ ಪ್ರಭಾಕರ್ ಅವರ ಪತ್ನಿಯಾಗಿದ್ದಾರೆ. ಹಣ ಪಡೆದು ವಂಚಿಸಿದ ಆರೋಪ ಮಾಡಲಾಗಿದೆ. ಆದರೆ, ಆರೋಪಿಗಳಿಂದ ಒಂದು ರೂಪಾಯಿಯನ್ನೂ ಜಪ್ತಿ ಮಾಡಲಾಗಿಲ್ಲ. ನಾವು ಪ್ರಕರಣ ರದ್ದು ಕೋರುತ್ತಿಲ್ಲ. ಮೊದಲ ಮತ್ತು ಮೂರನೇ ಆರೋಪಿ ಈಗಾಗಲೇ ಜಾಮೀನು ಪಡೆದಿದ್ದಾರೆ. ಎರಡನೇ ಆರೋಪಿಯಾಗಿರುವ ಅರ್ಜಿದಾರರು ಗೃಹಿಣಿಯಾಗಿದ್ದಾರೆ. ಆದ್ದರಿಂದ, ಜಾಮೀನು ಕೋರುತ್ತಿದ್ದೇವೆ ಎಂದರು.

ದೂರುದಾರನ ವಿರುದ್ಧವೇ ಕೇಸ್:
ಆಗ ನ್ಯಾಯಪೀಠ, ದೂರುದಾರ ಸಂಜಯ್‌ ವಿರುದ್ಧವೂ ಪ್ರಕರಣ ದಾಖಲಿಸಲು ಆದೇಶಿಸಲಾಗುವುದು. ಎರಡೂ ಪ್ರಕರಣದ ತನಿಖೆ ನಡೆಯಲಿ. ಸಂಜಯ್‌ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲು ನಿರ್ದೇಶಿಸಲಾಗುವುದು. ಇಸ್ರೊನಲ್ಲಿ ಕೆಲಸ ಪಡೆಯಲು 1.03 ಕೋಟಿ ರೂ. ಲಂಚ ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿ, ತನಿಖೆ ನಡೆಯಲಿ ಎಂದು ಹೇಳಿತು. ಜತೆಗೆ, ಅರ್ಜಿದಾರೆ ಮತ್ತೆರಡು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಚಿಕ್ಕಮಗಳೂರು ನಗರ ಮತ್ತು ಕೊಳ್ಳೇಗಾಲದಲ್ಲಿ ಇಂಥದ್ದೇ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಆಕೆ ಹವ್ಯಾಸಿ ಆರೋಪಿಯಾಗಿದ್ದಾರೆ. ಎಲ್ಲರ ಹತ್ತಿರ ಹಣ ಪಡೆದು ಕೆಲಸ ಕೊಡಿಸುವ ಆರೋಪವಿದೆ ಎಂದು ನ್ಯಾಯಪೀಠ ಮೌಖಿಕವಾಗಿ ಹೇಳಿತು.

ಪ್ರಕರಣವೇನು?
2025ರ ಮೇ 5ರಂದು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದ ಸಂಜಯ್, ಲಗ್ಗೆರೆಯಲ್ಲಿರುವ ನನ್ನದೇ ಒಡೆತನದ ಮನೆಯಲ್ಲಿ ಬಾಡಿಗೆಗೆ ಇದ್ದ ಪ್ರಭಾಕರ್‌ ಮತ್ತವರ ಪತ್ನಿ ಎಂ.ಇ. ವಿನುತಾ 2024ರ ಆಗಸ್ಟ್‌ನಲ್ಲಿ ನಾಗರಭಾವಿಯಲ್ಲಿರುವ ನನ್ನ ಮನೆಗೆ ಬಂದು ಇಸ್ರೊ ಸಂಸ್ಥೆಯಲ್ಲಿ ಗ್ರಾಫಿಕ್‌ ಡಿಸೈನರ್‌ ಹುದ್ದೆ ಕೊಡಿಸುವುದಾಗಿ ಹೇಳಿ 37 ಲಕ್ಷ ರೂ. ಪಡೆದು ನೇಮಕಾತಿ ಪತ್ರ ಬರಲಿದೆ ಎಂದು ತಿಳಿಸಿದ್ದರು. ಅಕ್ಟೋಬರ್‌ 12ರಂದು ವಿಕ್ಟೋರಿಯಾ ಆಸ್ಪತ್ರೆಯ ಡಾ. ಜಿ ಶ್ರೀನಿವಾಸ ಎಂಬುವರ ಬಳಿ ವೈದ್ಯಕೀಯ ಫಿಟ್ನೆಸ್‌ ಸರ್ಟಿಫಿಕೇಟ್‌ ಮತ್ತು ದೈಹಿಕ ಫಿಟ್ನೆಸ್‌ ಸರ್ಟಿಫಿಕೇಟ್‌ ಮಾಡಿಸಿದ್ದರು ಎಂದು ದೂರಿನಲ್ಲಿ ವಿವರಿಸಿದ್ದರು.

ಆನಂತರ, 2-3 ತಿಂಗಳಾದರೂ ನೇಮಕಾತಿ ಪತ್ರ ಬಂದಿಲ್ಲ ಎಂದು ಪ್ರಶ್ನಿಸಿದಾಗ ನವೆಂಬರ್‌ 5ಕ್ಕೆ ನೇಮಕಾತಿ ಪತ್ರ ಬರುತ್ತದೆ. ಅದಕ್ಕೆ ಇನ್ನೂ 23 ಲಕ್ಷ ರೂ. ನಗದು ನೀಡಬೇಕು. ಇಲ್ಲವಾದರೆ ಹಿಂದೆ ನೀಡಿರುವ 37 ಲಕ್ಷ ರೂ. ವಾಪಸ್‌ ಬರುವುದಿಲ್ಲ ಮತ್ತು ಕೆಲಸ ಸಿಗುವುದಿಲ್ಲ ಎಂದು ಹೆದರಿಸಿ, ಇಸ್ರೊ ಸಂಸ್ಥೆಗೆ ಕರೆದೊಯ್ದು ನಂಬಿಸಿದ್ದರು. ಹಿಂದೆ ನೀಡಿರುವ ಹಣ ಕಳೆದುಕೊಳ್ಳುವ ಭಯದಲ್ಲಿ ಮತ್ತೆ 23 ಲಕ್ಷ ರೂ. ನೀಡಿದ್ದೆವು. ಅಲ್ಲದೇ, ಇಸ್ರೊದಲ್ಲಿ ಸುಪ್ರತೊ ಫಾಥೋ, ರೆಡ್ಡಪ್ಪ, ರಾಜೇಂದ್ರ ಮತ್ತು ಎ.ಕೆ. ಅನಿಲ್‌ ಕುಮಾರ್‌ ಎಂಬವರನ್ನು ಪರಿಚಿಯಿಸಿ, ಅವರಿಗೆ ಹಣ ನೀಡಬೇಕು ಎಂದು ತಿಳಿಸಿ, ಒಟ್ಟು 1.03 ಕೋಟಿ ರೂ. ಪಡೆದು ನಕಲಿ ನೇಮಕಾತಿ ಪತ್ರ, ಇಸ್ರೊ ಹೆಸರಿನ ಇತರ ವಸ್ತುಗಳನ್ನು ನೀಡಿ ಯಾವುದೇ ಕೆಲಸ ಕೊಡಿಸದೇ ವಂಚಿಸಿದ್ದಾರೆ ಎಂದು ಆರೋಪಿಸಿದ್ದರು. ದೂರು ಆಧರಿಸಿ ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು.

 

Related Articles

Comments (0)

Leave a Comment