ವಿದೇಶಿಯರ ವೀಸಾ ವಿಸ್ತರಣೆ ಅಥವಾ ನಿರಾಕರಣೆ ಕೇಂದ್ರದ ಸಾರ್ವಭೌಮ ಹಕ್ಕು – ಹೈಕೋರ್ಟ್
- by Jagan Ramesh
- January 30, 2026
- 15 Views
ಬೆಂಗಳೂರು: ವಿದೇಶಿಯರಿಗೆ ವೀಸಾ ವಿಸ್ತರಣೆ ಅಥವಾ ನಿರಾಕರಣೆಗೆ ಕೇಂದ್ರ ಸರ್ಕಾರ ವಿವರಣೆ ನೀಡಬೇಕಿಲ್ಲ. ಅದು ಕೇಂದ್ರ ಸರ್ಕಾರದ ಸಾರ್ವಭೌಮ ಹಕ್ಕಾಗಿದೆ ಎಂದು ಹೈಕೋರ್ಟ್ ಹೇಳಿದೆ.
ಮಾದಕ ವಸ್ತುಗಳ ಮಾರಾಟ, ನಕಲಿ ಮತ್ತು ಅವಧಿ ಮೀರಿದ ವೀಸಾ ಬಳಸಿ ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ನೈಜೀರಿಯಾದ ಮೂವರು ಬಂಧನದಿಂದ ಬಿಡುಗಡೆ ಕೋರಿ ಮತ್ತು ವೀಸಾ ವಿಸ್ತರಣೆ ಕೋರಿ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ, ವಿದೇಶಿಯರು ವೀಸಾ ಅಥವಾ ಅದರ ನವೀಕರಣ ಕುರಿತು ಒತ್ತಾಯಿಸುವ ಯಾವುದೇ ಹಕ್ಕು ಹೊಂದಿಲ್ಲ. ವೀಸಾ ವಿಸ್ತರಿಸುವುದು ಅಥವಾ ನಿರಾಕರಿಸುವುದು ಸಾರ್ವಭೌಮ ಹಕ್ಕಾಗಿದ್ದು, ವೀಸಾ ನಿರಾಕರಿಸುವುದಕ್ಕೆ ವಿವರಣೆಯನ್ನು ಕೇಂದ್ರ ಸರ್ಕಾರ ನೀಡಬೇಕಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಸಹಜ ನ್ಯಾಯತತ್ವಕ್ಕೆ ವಿರುದ್ಧವಾಗಿ ವಿದೇಶಿಯರ ಕಾಯ್ದೆ ಸೆಕ್ಷನ್ 3(2)(ಇ) ಜತೆಗೆ ಫಾರಿನರ್ಸ್ ಆರ್ಡರ್ ಸೆಕ್ಷನ್ 11(2)ಕ್ಕೆ ಅಡಿ 2024ರ ಡಿಸೆಂಬರ್ 23ರಂದು ನಿರ್ಬಂಧ ಆದೇಶ ಹೊರಡಿಸಲಾಗಿದ್ದು, ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್ಆರ್ಆರ್ಒ) ಹೊರಡಿಸಿರುವ ನಿರ್ಬಂಧ ಆದೇಶವು ಭಾರತ ಸಂವಿಧಾನದ ಪರಿಚ್ಛೇದ 14 ಮತ್ತು 21ರ ಉಲ್ಲಂಘನೆಯಾಗಿದೆ ಎಂದು ಆಕ್ಷೇಪಿಸಿ ನೈಜೀರಿಯಾ ಮೂಲದ ಒಬಿನ್ನಾ ಜೆರೆಮಿಯಾ ಒಕಾಫೋರ್ ಮತ್ತು ಜಾನ್ ಅಡೆಕ್ವ್ಯಾಗ್ ವಂಡೆಫಾನ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಪೀಠ ವಜಾಗೊಳಿಸಿದೆ.
ಹೈಕೋರ್ಟ್ ಹೇಳಿದ್ದೇನು?
ವಿದೇಶಿಯರನ್ನು ಭಾರತದಿಂದ ಗಡಿಪಾರು ಮಾಡುವ ಅಧಿಕಾರವನ್ನು ಕೇಂದ್ರ ಸರ್ಕಾರ ಹೊಂದಿದೆ. ಇಲ್ಲಿನ ಸರ್ಕಾರ ಅಂಥ ಆದೇಶ ಮಾಡಿದರೆ ಅದನ್ನು ವಿದೇಶಿಯರು ಅನುಪಾಲಿಸಬೇಕು. ಭಾರತದಾದ್ಯಂತ ಓಡಾಡಲು ಮತ್ತು ದೇಶದ ಯಾವುದೇ ಮೂಲೆಯಲ್ಲಿ ನೆಲೆಸುವ ಅಧಿಕಾರ ಭಾರತದ ಪ್ರಜೆಗಳಿಗೆ ಮಾತ್ರ ಇದೆಯೇ ಹೊರತು ವಿದೇಶಿಗರಿಗೆ ಅಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಬೆಂಗಳೂರಿನ ಚಾಮುಂಡಿನಗರದ ಫಾತಿಮಾ ರಿಜ್ವಾನ್ ನಿವಾಸದಲ್ಲಿ ವಿದೇಶಿಗರು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ಆರೋಪದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ವೀಸಾ ಅವಧಿ ಮುಗಿದ ಬಳಿಕವೂ ನೈಜೀರಿಯಾದ ಮಹಿಳೆಯೊಬ್ಬರು ದೇಶದಲ್ಲಿ ನೆಲೆಸಿದ್ದಾರೆ ಎಂಬ ವಿಚಾರ ತನಿಖೆಯಿಂದ ತಿಳಿದು ಬಂದಿದೆ. ಆಕ್ಷೇಪಾರ್ಹವಾದ ಮನೆಯಲ್ಲಿ ಮಹಿಳೆಯ ಜತೆ ಇತರ ಮೂವರು ನೈಜೀರಿಯಾದ ಪ್ರಜೆಗಳು ನೆಲೆಸಿದ್ದು, ಅವರ ವೀಸಾ ಸಹ ಮುಗಿದಿತ್ತು. ಅಕ್ರಮವಾಗಿ ಅವರು ಅಲ್ಲಿ ನೆಲೆಸಿದ್ದಾರೆ ಎಂಬ ವಿಚಾರ ತನಿಖೆಯಲ್ಲಿ ಬಯಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿದೆ.
ವೀಸಾ ರದ್ದಾದ ಬಳಿಕ ವೀಸಾ ಪಡೆಯುವುದು ಅಥವಾ ಅದರ ವಿಸ್ತರಣೆ ಕೋರುವ ಸಂಬಂಧ ಮೇಲ್ಮನವಿದಾರರಿಗೆ ಯಾವುದೇ ಅಧಿಕಾರವಿಲ್ಲ. ಆದ್ದರಿಂದ, ಏಕಸದಸ್ಯ ನ್ಯಾಯಪೀಠದ ಆದೇಶದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಆಧಾರವಿಲ್ಲದೇ ಇರುವುದರಿಂದ ಮೇಲ್ಮನವಿ ವಜಾಗೊಳಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಹಾಲಿ ಪ್ರಕರಣದಲ್ಲಿ ವೀಸಾ ಅವಧಿ ಮುಗಿಯುವುದಕ್ಕೂ ಮುನ್ನ ಅದನ್ನು ರದ್ದುಪಡಿಸಲಾಗಿದೆ. ಆದ್ದರಿಂದ, ನಿಸ್ಸಂಶಯವಾಗಿ ಓಡಾಟಕ್ಕೆ ವಿಧಿಸಿರುವ ನಿರ್ಬಂಧವು ಮೇಲ್ಮನವಿದಾರರ ಸ್ವಾತಂತ್ರ್ಯವನ್ನು ಕಸಿಯಲಿದೆ. ಈ ನೆಲೆಯಲ್ಲಿ ಕನಿಷ್ಠ ನ್ಯಾಯಯುತ ಪ್ರಕ್ರಿಯೆ ಪಾಲಿಸುವುದು ಅಗತ್ಯ. ಮೇಲ್ಮನವಿದಾರರಿಗೆ ನಿರ್ಬಂಧ ಆದೇಶದ ಬಗ್ಗೆ ಮಾಹಿತಿ ನೀಡಬೇಕಿತ್ತು. ಕನಿಷ್ಠ ಅವರಿಗೆ ಮನವಿ ಸಲ್ಲಿಸುವ ಅವಕಾಶವೊಂದನ್ನು ನೀಡಬೇಕಿತ್ತು ಎಂದೂ ನ್ಯಾಯಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಆರೋಪಿಗಳು ಸದ್ಯ ಬೆಂಗಳೂರಿನ ಲಗ್ಗೆರೆಯ ಆಸರೆ ಫೌಂಡೇಶನ್ ಟ್ರಸ್ಟ್ನಲ್ಲಿ ಇದ್ದಾರೆ.
Related Articles
Thank you for your comment. It is awaiting moderation.


Comments (0)