ಸುಪ್ರೀಂ‌ಗೆ ಎನ್.ವಿ. ಅಂಜಾರಿಯಾ, ರಾಜ್ಯ ಸಿಜೆ ಹುದ್ದೆಗೆ ವಿಭು ಬಖ್ರು; ಕೇಂದ್ರಕ್ಕೆ ಕೊಲಿಜಿಯಂ ಶಿಫಾರಸು

ಬೆಂಗಳೂರು: ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ಅಂಜಾರಿಯಾ ಅವರಿಗೆ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ ಪದೋನ್ನತಿ ನೀಡಲು ಕೇಂದ್ರ ಸರ್ಕಾರಕ್ಕೆ ಕೊಲಿಜಿಯಂ ಶಿಫಾರಸು ಮಾಡಿದೆ. ಮತ್ತೊಂದೆಡೆ, ದೆಹಲಿ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ವಿಭು ಬಖ್ರು ಅವರ ಹೆಸರನ್ನು ಕರ್ನಾಟಕ ಹೈಕೋರ್ಟ್ ಸಿಜೆ ಹುದ್ದೆಗೆ ಶಿಫಾರಸು ಮಾಡಲಾಗಿದೆ.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದಲ್ಲಿ ಸೋಮವಾರ ನಡೆದ ಕೊಲಿಜಿಯಂ ಸಭೆಯಲ್ಲಿ ಅಂಜಾರಿಯಾ ಅವರೂ ಸೇರಿ ಮೂವರು ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ‌ ಮಾಡಲು ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ.

ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎನ್‌.ವಿ. ಅಂಜಾರಿಯಾ, ಗುವಾಹಟಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವಿಜಯ್‌ ಬಿಷ್ಣೋಯ್‌ ಹಾಗೂ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಅತುಲ್‌ ಎಸ್.‌ ಚಂದೂರ್ಕರ್‌ ಅವರಿಗೆ ಪದೋನ್ನತಿ ನೀಡಲು ಕೊಲಿಜಿಯಂ ತೀರ್ಮಾನಿಸಿದ್ದು, ಈ ಮೂವರ ಹೆಸರುಗಳನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಸಿಜೆ ಅಂಜಾರಿಯಾ ಪರಿಚಯ:
ನ್ಯಾಯಮೂರ್ತಿ ಅಂಜಾರಿಯಾ ಅವರು ಗುಜರಾತ್‌ ಹೈಕೋರ್ಟ್‌ನಲ್ಲಿ 1988ರ ಆಗಸ್ಟ್‌ನಲ್ಲಿ ಹಿರಿಯ ವಕೀಲ ಎಸ್‌.ಎನ್‌. ಶೇಲತ್‌ ಅವರ ಬಳಿ ವಕೀಲಿಕೆ ಆರಂಭಿಸಿದ್ದರು. ಸಾಂವಿಧಾನಿಕ, ಸಿವಿಲ್‌, ಕಾರ್ಮಿಕ ಮತ್ತು ಸೇವಾ ವಿಷಯಗಳನ್ನು ನಡೆಸಿದ್ದ ಅಂಜಾರಿಯಾ, ಹೈಕೋರ್ಟ್‌, ರಾಜ್ಯ ಚುನಾವಣಾ ಆಯೋಗ ಮತ್ತು ಗುಜರಾತ್‌ ಕೈಗಾರಿಕಾ ಅಭಿವೃದ್ಧಿ ನಿಗಮ ಸೇರಿ ರಾಜ್ಯದ ಹಲವು ಸಂಸ್ಥೆಗಳ ವಕೀಲರಾಗಿ ಕರ್ತವ್ಯ ನಿಭಾಯಿಸಿದ್ದರು. 2011ರ ನವೆಂಬರ್‌ 21ರಂದು ಗುಜರಾತ್‌ ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ಎನ್.ವಿ. ಅಂಜಾರಿಯಾ, 2013ರ ಸೆಪ್ಟೆಂಬರ್‌ 6ರಂದು ಕಾಯಂಗೊಂಡಿದ್ದರು. 2024ರ ಫೆಬ್ರವರಿ 25ರಂದು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಿದ್ದರು.

ರಾಜ್ಯ ಸಿಜೆ ಹುದ್ದೆಗೆ ನ್ಯಾ. ವಿಭು ಬಖ್ರು ಶಿಫಾರಸು:
ಎನ್.ವಿ. ಅಂಜಾರಿಯಾ ಅವರ ಪದೋನ್ನತಿ ಶಿಫಾರಸಿನ ಬೆನ್ನಲ್ಲೇ ದೆಹಲಿ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ವಿಭು ಬಖ್ರು ಅವರ ಹೆಸರನ್ನು ಕರ್ನಾಟಕ ಸಿಜೆ ಹುದ್ದೆಗೆ ಕೊಲಿಜಿಯಂ ಶಿಫಾರಸು ಮಾಡಿದೆ. ವಿಭು ಅವರ ಜತೆಗೆ ಇತರ ನಾಲ್ಕು ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿ ನೇಮಕಕ್ಕೂ ಕೇಂದ್ರಕ್ಕೆ‌ ಶಿಫಾರಸು ಮಾಡಲು ಕೊಲಿಜಿಯಂ ತೀರ್ಮಾನಿಸಿದೆ.

ಮಧ್ಯಪ್ರದೇಶ ಹೈಕೋರ್ಟ್‌ನ ಹಂಗಾಮಿ ಸಿಜೆ ಆಗಿರುವ ಸಂಜೀವ್ ಸಚ್‌ದೇವ್ ಅವರನ್ನು ಅದೇ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಶಿಫಾರಸು ಮಾಡಲಾಗಿದ್ದರೆ, ಪಟ್ನಾ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಶುತೋಷ್ ಕುಮಾರ್ ಅವರನ್ನು ಗುಜರಾತ್ ಹೈಕೋರ್ಟ್ ಸಿಜೆ ಹುದ್ದಗೆ ಶಿಫಾರಸು ಮಾಡಲಾಗಿದೆ. ಪಟ್ನಾ ಹೈಕೋರ್ಟ್‌ನ ಮತ್ತೊಬ್ಬ ನ್ಯಾಯಮೂರ್ತಿ ವಿಪುಲ್ ಮನುಭಾಯ್ ಪಂಚೋಲಿ ಅವರ ಹೆಸರನ್ನು ಅದೇ ಹೈಕೋರ್ಟ್ ಸಿಜೆ ಸ್ಥಾನಕ್ಕೆ ಶಿಫಾರಸು ಮಾಡಿರುವ ಕೊಲಿಜಿಯಂ, ಹಿಮಾಚಲ ಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿ ತಾರ್ಲೋಕ್ ಸಿಂಗ್ ಚೌಹಾಣ್ ಅವರನ್ನು ಜಾರ್ಖಂಡ್ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ನೇಮಕ ಮಾಡಲು ಕೇಂದ್ರಕ್ಕೆ ಶಿಫಾರಸು ಮಾಡಿದೆ.

ನ್ಯಾ. ವಿಭು ಬಖ್ರು ಕಿರು ಪರಿಚಯ:
ನಾಗಪುರದಲ್ಲಿ 1966ರಲ್ಲಿ ಜನಿಸಿದ ವಿಭು ಬಖ್ರು, ದೆಹಲಿಯ ಮಥುರಾ ದೆಹಲಿ ಪಬ್ಲಿಕ್‌ ಶಾಲೆಯಲ್ಲಿ ಶಿಕ್ಷಣ ಹಾಗೂ 1987ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ವಾಣಿಜ್ಯ ವಿಷಯದಲ್ಲಿ ಪದವಿ ಪಡೆದಿದ್ದಾರೆ. 1989ರಲ್ಲಿ ಚಾರ್ಟರ್ಡ್‌ ಅಕೌಂಟೆಂಟ್‌ ಆಗಿಯೂ ಅರ್ಹತೆ ಪಡೆದಿದ್ದ ಬಖ್ರು, 1990ರಲ್ಲಿ ಎಲ್‌ಎಲ್‌ಬಿ ಪದವಿ ಪಡೆದು, ಅದೇ ವರ್ಷ ದೆಹಲಿ ವಕೀಲರ ಪರಿಷತ್‌ನಲ್ಲಿ ವಕೀಲರಾಗಿ ನೋಂದಾಯಿತರಾದರು. ಸುಪ್ರೀಂಕೋರ್ಟ್‌, ದೆಹಲಿ ಹೈಕೋರ್ಟ್‌, ಕಂಪನಿ ಕಾನೂನು ಮಂಡಳಿ ಮತ್ತು ಇತರ ನ್ಯಾಯ ಮಂಡಳಿಗಳಲ್ಲಿಯೂ ವಕೀಲರಾಗಿ ಕೆಲಸ ಮಾಡಿದ್ದ ಅವರು, 2011ರಲ್ಲಿ ಪದಾಂಕಿತ ಹಿರಿಯ ವಕೀಲರಾದರು. 2013ರ ಏಪ್ರಿಲ್‌ 17ರಂದು ದೆಹಲಿ ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡ ಬಖ್ರು ಅವರು 2015ರ ಮಾರ್ಚ್‌ 18ರಂದು ಕಾಯಂಗೊಂಡರು.

Related Articles

Comments (0)

Leave a Comment