ಬೈಕ್ ಟ್ಯಾಕ್ಸಿಗಳು ಅವಶ್ಯಕತೆಯೇ ಹೊರತು ಆಡಂಬರವಲ್ಲ; ಬೈಕ್ ಟ್ಯಾಕ್ಸಿ ವೆಲ್ಫೇರ್ ಅಸೋಸಿಯೇಷನ್ ಪ್ರತಿಪಾದನೆ

ಬೆಂಗಳೂರು: ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ನಿಷೇಧಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬೈಕ್ ಟ್ಯಾಕ್ಸಿ ವೆಲ್ಫೇರ್ ಅಸೋಸಿಯೇಷನ್, ಬೈಕ್ ಟ್ಯಾಕ್ಸಿಗಳು ಐಷಾರಾಮಿ ಸವಾರಿ ಅಲ್ಲ, ಬದಲಿಗೆ ಅದು ಸಾಮಾನ್ಯ ಜನರ ಅವಶ್ಯಕತೆಯಾಗಿದೆ. ಸಂಚಾರ ದಟ್ಟಣೆ ಕಡಿಮೆ ಮಾಡಲೂ ಅದು ಸಹಾಯ ಮಾಡುತ್ತದೆ ಎಂದು ಹೈಕೋರ್ಟ್ ಮುಂದೆ ಪ್ರತಿಪಾದಿಸಿದೆ.

ಬೈಕ್ ಟ್ಯಾಕ್ಸಿ ನಿಷೇಧಿಸಿ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಹೊರಡಿಸಿರುವ ಆದೇಶ ಪ್ರಶ್ನಿಸಿ ಅಗ್ರಿಗೇಟರ್ ಸಂಸ್ಥೆಗಳಾದ ಓಲಾ, ಉಬರ್, ರ‌್ಯಾಪಿಡೋ ಹಾಗೂ ಬೈಕ್ ಟ್ಯಾಕ್ಸಿ ಅಸೋಸಿಯೇಷನ್ ಮತ್ತು ಕೆಲ ಬೈಕ್ ಮಾಲೀಕರು ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ. ಕಾಮೇಶ್ವರ್ ರಾವ್ ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ಮುಂದುವರಿಸಿತು.

ಈ ವೇಳೆ ಬೈಕ್ ಟ್ಯಾಕ್ಸಿ ವೆಲ್ಫೇರ್ ಅಸೋಸಿಯೇಷನ್ ಪರ ಹಿರಿಯ ವಕೀಲ ಶಶಾಂಕ್ ಗರ್ಗ್ ವಾದ ಮಂಡಿಸಿ, 2019ರಲ್ಲಿ ತಜ್ಞರ ಸಮಿತಿ ನೀಡಿದ ವರದಿ ಆಧರಿಸಿ 2021ರಲ್ಲಿ ಸರ್ಕಾರ ಇ-ಬೈಕ್ ನಿಯಮಗಳನ್ನು ಜಾರಿಗೆ ತಂದಿತು. ತಜ್ಞರ ವರದಿಯಲ್ಲಿ ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಬಾರದು ಎಂದು ಶಿಫಾರಸು ಮಾಡಲಾಗಿತ್ತು. ಇ-ಬೈಕ್ ನಿಯಮಗಳನ್ನು ಸರ್ಕಾರ 2024ರಲ್ಲಿ ವಾಪಸ್ ಪಡೆದುಕೊಂಡಿತು. ಈ ಕ್ರಮ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಆಗ ನ್ಯಾಯಪೀಠ, ಬೈಕ್‌ ಟ್ಯಾಕ್ಸಿ ಶುಲ್ಕವನ್ನು ಸಾರಿಗೆ ಪ್ರಾಧಿಕಾರ ನಿಯಂತ್ರಿಸುತ್ತದೆಯೇ ಎಂದು ಪ್ರಶ್ನಿಸಿತು. ಇದಕ್ಕುತ್ತರಿಸಿದ ಗರ್ಗ್‌, ಶುಲ್ಕ ನಿಯಂತ್ರಣಕ್ಕೆ ಸರ್ಕಾರ ಮುಂದಾದರೆ ಅದನ್ನು ಮಾಡಬಹುದು. ಬೈಕ್‌ ಟ್ಯಾಕ್ಸಿಯ ಪ್ರತಿ ಕಿಲೋ ಮೀಟರ್‌ ಸೇವೆಗೆ 8 ರೂ. ವಿಧಿಸಲಾಗುತ್ತದೆ ಎನ್ನಲಾಗಿದೆ. ಸುಮಾರು 6 ಲಕ್ಷ ಬೈಕ್‌ ಟ್ಯಾಕ್ಸಿಗಳು ಕಾರ್ಯನಿರ್ವಹಿಸುತ್ತಿದ್ದು, ನಿಷೇಧದಿಂದ ಅವರ ಬದುಕಿಗೆ ಬರೆ ಬೀಳಲಿದೆ. ಸಂಚಾರ ದಟ್ಟಣೆ ನಿರ್ವಹಿಸಲು ಬೈಕ್‌ ಟ್ಯಾಕ್ಸಿ ಅನುಕೂಲಕರವಾಗಿದೆ. ಆಂಬುಲೆನ್ಸ್‌ ಮತ್ತು ಕಾರುಗಳು ತೆರಳಲಾಗದ ಜಾಗಕ್ಕೆ ನುಸುಳಿ ಬೈಕ್‌ ಟ್ಯಾಕ್ಸಿಗಳು ಸೇವೆ ನೀಡುತ್ತಿವೆ. ಬೈಕ್‌ ಟ್ಯಾಕ್ಸಿ ಎನ್ನುವುದು ಅಗತ್ಯವೇ ಹೊರತು ಆಡಂಬರವಲ್ಲ ಎಂದರು.

ಬೈಕ್‌ ಮಾಲೀಕರಾದ ವಿ. ಮಹೇಂದ್ರ ರೆಡ್ಡಿ ಮತ್ತು ಮಧು ಕಿರಣ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ಧ್ಯಾನ್‌ ಚಿನ್ನಪ್ಪ, ದ್ವಿಚಕ್ರ ವಾಹನಗಳಿಗೆ ಕಂಟ್ರ್ಯಾಕ್ಟ್‌ ಕ್ಯಾರಿಯೇಜ್‌ ನೀಡುವುದಿಲ್ಲ ಎಂದು ಸರ್ಕಾರ ಹೇಳುವ ಸಂದರ್ಭದಲ್ಲಿ ನಾವಿದ್ದೇವೆ. ಇದು ಸಂವಿಧಾನದ ಪರಿಚ್ಛೇದ 19 (1)(g) ಉಲ್ಲಂಘನೆಯಲ್ಲವೇ? ನಿಯಮದಲ್ಲಿ ಅವಕಾಶವಿರುವಾಗ ಸರ್ಕಾರ ತಿರಸ್ಕರಿಸಲಾಗದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾನೂನಿಗೆ ವಿರುದ್ಧವಾಗಿ ನಡೆದು, ಸಂವಿಧಾನ ಬದ್ಧವಾದ 19 (1)(g) ಹಕ್ಕು ಕಸಿಯಲಾಗದು. ಸಂಬಂಧಿತ ಅಗ್ರಿಗೇಟರ್‌ ನಿಯಮಗಳೂ ಬೈಕ್‌ ಟ್ಯಾಕ್ಸಿಗೆ ಅನುವು ಮಾಡಿಕೊಡುತ್ತವೆ ಎಂದು ತಿಳಿಸಿದರು.

ಅಗ್ರಿಗೇಟರ್ಸ್‌ ವೇದಿಕೆಯಲ್ಲಿ ಬೈಕ್‌ ಮಾಲೀಕರು ನೋಂದಾಯಿಸಿಕೊಂಡು ತಮ್ಮ ಬೈಕ್‌ ಟ್ಯಾಕ್ಸಿ ಸೇವೆ ಮುಂದುವರಿಸಬಹುದಾಗಿದೆ. ಇದನ್ನು ರಾಜ್ಯ ಸರ್ಕಾರ ತಡೆಯಲಾಗದು. ಬೈಕ್‌ ಟ್ಯಾಕ್ಸಿಯಿಂದ ಸಮಸ್ಯೆಯಾಗುತ್ತದೆ ಎಂದು ರಾಜ್ಯ ಸರ್ಕಾರ ದೂರಲಾಗದು. ಬೇರೆಡೆಯಿಂದ ಬರುವ ಜನರು ಇಲ್ಲಿ ನೆಲೆಸುವುದರಿಂದ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಇದೆ. ಜನಸಂಖ್ಯೆ ಹೆಚ್ಚಳವು ಆರ್ಥಿಕ ಬೆಳವಣಿಗೆಯ ಸೂಚಿಯಾಗಿದೆ ಎಂದು ವಾದ ಪೂರ್ಣಗೊಳಿಸಿದರು.

ಮೇಲ್ಮನವಿದಾರರ ವಾದ ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಜುಲೈ 2ಕ್ಕೆ ಮುಂದೂಡಿತು.

Related Articles

Comments (0)

Leave a Comment