ಕನ್ನಡ ಕುರಿತು ನಟ ಕಮಲ್ ಹಾಸನ್ ವಿವಾದಾತ್ಮಕ‌ ಹೇಳಿಕೆ; ಕಸಾಪದಿಂದ ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ

ಬೆಂಗಳೂರು: ಕರ್ನಾಟಕದಲ್ಲಿ ಕಮಲ್‌ ಹಾಸನ್‌ ಅಭಿನಯದ ಥಗ್‌ ಲೈಫ್‌ ಚಲನಚಿತ್ರ ಬಿಡುಗಡೆಗೆ ಸೂಕ್ತ ಭದ್ರತೆ ಒದಗಿಸಲು ಸರ್ಕಾರ ಮತ್ತು ಪೊಲೀಸ್‌ ಇಲಾಖೆಗೆ ನಿರ್ದೇಶಿಸುವಂತೆ ಚಿತ್ರ ನಿರ್ಮಾಣ ಸಂಸ್ಥೆ ರಾಜ್‌ಕಮಲ್‌ ಫಿಲ್ಮ್ಸ್ ಇಂಟರ್‌ನ್ಯಾಷನಲ್‌ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಮಧ್ಯಪ್ರವೇಶಿಸಲು ಅನುಮತಿ ಕೋರಿ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಅಧ್ಯಕ್ಷ ಡಾ. ಮಹೇಶ್‌ ಜೋಷಿ ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.

ತಮಿಳು ಭಾಷೆಯಿಂದ ಕನ್ನಡ ಹುಟ್ಟಿದೆ ಎಂಬ ವಿವಾದಾತ್ಮಕ‌ ಹೇಳಿಕೆ‌ಯನ್ನು ಕಮಲ್‌ ಹಾಸನ್ ನೀಡಿದ್ದ ಕಾರಣ, ಅವರು ನಟಿಸಿರುವ ಥಗ್‌ ಲೈಫ್‌ ಚಲನಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಕನ್ನಡಪರ ಸಂಘಟನೆಗಳು ಮತ್ತು ಕರ್ನಾಟಕ ವಾಣಿಜ್ಯ ಚಲನಚಿತ್ರ ಮಂಡಳಿ ವಿರೋಧ ವ್ಯಕ್ತಪಡಿಸಿದ್ದವು.

ಈ ಕಾರಣದಿಂದ, ಚಿತ್ರ ನಿರ್ಮಾಣ ಸಂಸ್ಥೆ ರಾಜ್‌ಕಮಲ್‌ ಫಿಲ್ಮ್ಸ್‌ ಇಂಟರ್ನ್ಯಾಷನಲ್‌ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿ, ಕರ್ನಾಟಕದಲ್ಲಿ ಚಿತ್ರ ಬಿಡುಗಡೆಗೆ ಪೊಲೀಸ್‌ ಭದ್ರತೆ ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿತ್ತು. ಈ ಮಧ್ಯೆ, ಹೈಕೋರ್ಟ್ ಮಂಗಳವಾರ ಅರ್ಜಿ ವಿಚಾರಣೆ ನಡೆಸಿ, ಸಲಹೆ ನೀಡಿದ ಹೊರತಾಗಿಯೂ ಕಮಲ್‌ ಹಾಸನ್‌ ಕ್ಷಮೆ ಕೋರಲಿಲ್ಲ. ಆದ್ದರಿಂದ, ಚಿತ್ರ ಬಿಡುಗಡೆ ಮಾಡಲು ಪೊಲೀಸ್‌ ಭದ್ರತೆ ಒದಗಿಸುವಂತೆ ಸೂಚನೆ ನೀಡಲು ಹೈಕೋರ್ಟ್‌ ನಿರಾಕರಿಸಿತ್ತು.

ಇದರಿಂದ, ಪೂರ್ವ ನಿಗದಿಯಂತೆ ಜೂನ್ 5ರಂದು ಕರ್ನಾಟಕದಲ್ಲಿ ಚಿತ್ರ ಬಿಡುಗಡೆ ಮಾಡುವ ನಿರ್ಧಾರಿದಂದ ಅರ್ಜಿದಾರ ಸಂಸ್ಥೆ ಹಿಂದೆ‌ ಸರಿದಿತ್ತು. ಬಳಿಕ ಅರ್ಜಿ ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿದ್ದ ಹೈಕೋರ್ಟ್‌, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಜತೆಗೆ ಕಮಲ್‌ ಹಾಸನ್‌ ಸಮಾಲೋಚಿಸಬಹುದು ಎಂದು ತಿಳಿಸಿತ್ತು.

ಇದೀಗ, ರಾಜ್‌ ಕಮಲ್‌ ಫಿಲ್ಮ್ಸ್ ಇಂಟರ್ನಾಷನಲ್ ಸಲ್ಲಿಸಿರುವ ಅರ್ಜಿಗೆ ಮಧ್ಯಪ್ರವೇಶಿಸಲು ಅನುಮತಿ ಕೋರಿರುವ ಕಸಾಪ, ಅರ್ಜಿದಾರ ಸಂಸ್ಥೆಯ ಮನವಿಗಳಿಗೆ ನಮ್ಮ ವಿರೋಧವಿದೆ. ಕನ್ನಡ ಭಾಷೆಯ ಬಗ್ಗೆ ನಕಾರಾತ್ಮಕ ಹೇಳಿಕೆ ನೀಡಿರುವ ಕಮಲ್ ಹಾಸನ್, ಕ್ಷಮೆ ಕೋರಲು ನಿರಾಕರಿಸಿ ಅಹಂಕಾರ ಮೆರದಿದ್ದಾರೆ. ಶತಮಾನದ ಇತಿಹಾಸ ಹೊಂದಿರುವ ಕಸಾಪ, ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಅಧಿಕೃತ ಹಾಗೂ ಪ್ರಾತಿನಿಧಿಕ ಸಂಸ್ಥೆಯಾಗಿದೆ. ಕನ್ನಡದ ಪ್ರಾಚೀನತೆ, ಘನತೆ ಹಾಗೂ ಅಸ್ಮಿತೆಯನ್ನು ಪ್ರತಿಪಾದಿಸುವ ಉದ್ದೇಶದಿಂದ ಈ ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ. ನಟ ಕಮಲ್ ಹಾಸನ್ ಅವರ ವಿವಾದಾತ್ಮಕ ಹೇಳಿಕೆಯಿಂದ ಉಂಟಾಗಿರುವ ಗೊಂದಲದ ಹಿನ್ನೆಲೆಯಲ್ಲಿ ಕನ್ನಡದ ಸಾಂವಿಧಾನಿಕ, ಸಾಂಸ್ಕೃತಿಕ ಹಾಗೂ ಭಾಷಾ ಅಂಗಳನ್ನು ನ್ಯಾಯಾಲಯಕ್ಕೆೆ ವಿವರಿಸಬೇಕಿದೆ. ಆದ್ದರಿಂದ, ಮಧ್ಯಂತರ ಅರ್ಜಿ ಪರಿಗಣಿಸಿ, ವಾದ ಮಂಡನೆಗೆ ಅವಕಾಶ ಕಲ್ಪಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

Related Articles

Comments (0)

Leave a Comment